ಕಲಬುರಗಿ | ತ್ರಿವಿಧ ದಾಸೋಹದಿಂದ ಶರಣರ ಸೇವೆ: ದೊಡ್ಡಪ್ಪ ಅಪ್ಪ

ಕಲಬುರಗಿ: ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಗಳಾದ ಡಾ.ಶರಣಬಸವಪ್ಪ ಅಪ್ಪ ಅವರ ಮಾರ್ಗದರ್ಶನದ ತ್ರಿವಿಧ ದಾಸೋಹಗಳ ಮೂಲಕ ನಾಡಿನ ಶರಣರ ಸೇವೆ ಮಾಡುವ ಸೇವಕನಾಗಿ ಮುಂದುವರೆಯುವುದಾಗಿ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಚಿ.ದೊಡ್ಡಪ್ಪ ಅಪ್ಪ ಹೇಳಿದರು.
ನಗರದ ಕನ್ನಡ ಭವನದ ಕಲಾ ಸೌಧದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಚೈತನ್ಯಮಯಿ ಆರ್ಟ್ ಟ್ರಸ್ಟ್ ನ ಸಂಸ್ಥಾಪಕ ಡಾ.ಎ.ಎಸ್.ಪಾಟೀಲ ಅವರ ನೇತೃತ್ವದ ದಾಸೋಹ ಸೂತ್ರಗಳ ಆಧಾರದಲ್ಲಿ ರಚಿಸಿದ ವರ್ಣ ಚಿತ್ರಗಳ ಪ್ರದರ್ಶನ ಹಾಗೂ ದಾಸೋಹಿಗೆ ಚಿತ್ರ ನಮನ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು, ಎಲ್ಲ ರಂಗಗಳಲ್ಲಿ ಕೂಡ ತಮ್ಮ ಅಪೂರ್ವ ಶಕ್ತಿಯನ್ನು ಬಿಟ್ಟು ತೆರಳಿದ್ದಾರೆ. ಆದರ್ಶದ ಮಾರ್ಗದಲ್ಲಿ ನಾವೆಲ್ಲರೂ ಜೀವನವನ್ನು ಕಟ್ಟಿಕೊಂಡು ಶರಣ ಮಾರ್ಗವನ್ನು ಪಾಲಿಸಬೇಕಾಗಿದೆ ಎಂದರು.
ಮಹಾದಾಸೋಹ ಸೂತ್ರ ದರ್ಶನದ ಭಾಗ್ಯದ ಚಿತ್ರ ನಮನ:
ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಪ್ರಾಧ್ಯಾಪಕ ಡಾ.ಶಿವರಾಜ ಶಾಸ್ತ್ರೀ ಹೇರೂರ, ಅಪ್ಪಾಜಿಯವರ ದಾಸೋಹ ಸೂತ್ರಗಳಲ್ಲಿ ಭಕ್ತ ಮತ್ತು ದೇವರು ಹಾಗೂ ಆತ್ಮ ಮತ್ತು ಪರಮಾತ್ಮನನ್ನು ದಶ್ನ ಮಾಡುವ ದಿವ್ಯ ಸಂದೇಶ ಒಳಗೊಂಡಿದೆ. ಬದುಕಿನ ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸುವ ದಾಸೋಹ ಸೂತ್ರ ಅದಕ್ಕೆ ಕುಂಚದಿಂದ ಬಣ್ಣವನ್ನು ನೀಡಿ ದರ್ಶನ ಭಾಗ್ಯ ನೀಡಿ ಕಲಾಸಕ್ತರನ್ನು ಆಕರ್ಷಿಸುವಂತೆ ಮಾಡಿದ ಹಿರಿಯ ಕಲಾವಿದರ ಕಾರ್ಯ ಮತ್ತು ಚಿತ್ರ ನಮನದ ಮೂಲಕ ಸ್ಮರಿಸುವಂಥ ಕಾರ್ಯ ಪರಿಷತ್ತು ಮಾಡಿದ್ದು ಸ್ತುತ್ಯಾರ್ಹ. ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಗೀತ ಮತ್ತು ಚಿತ್ರಕಲಾ ವಿಭಾಗವನ್ನು ಡಾ.ಅಪ್ಪ ಅವರು ಪ್ರಾರಂಭಿಸಿದವರು. ಸಂಗೀತ ಮತ್ತು ಚಿತ್ರಕಲಾ ರಂಗಕ್ಕೆ ಅವರ ಕೊಡುಗೆ ಸ್ಮರಣಿಯವಾದುದು ಎಂದರು.
ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಅಧಿಕಾರಿ ಸದಾನಂದ ಪೆರ್ಲ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಡಾ.ಶರಣಬಸವಪ್ಪ ಅಪ್ಪ ಅವರು ಭೌತಿಕವಾಗಿ ಇಲ್ಲದೇ ಇದ್ದರೂ ಅವರು ಹಾಕಿಕೊಟ್ಟ ಮಾರ್ಗದರ್ಶನ, ಶಿಕ್ಷಣ ಕ್ರಾಂತಿ ಪ್ರಗತಿ ಎಲ್ಲವು ಜೀವಂತವಾಗಿವೆ. ಕಲೆ, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಕ್ಕೆ ಅಪ್ಪಾಜೀಯವರ ಸೇವೆ ಅನನ್ಯ. ಈ ನೆಲದ ಪರಂಪರೆ ಉಳಿಸಿ ಬೆಳೆಸುವಲ್ಲಿ ಪರಿಷತ್ತು ನಿರಂತರವಾಗಿ ಶ್ರಮಿಸುತ್ತಿದೆ ಎಂದ ಅವರು, ಡಾ.ಅಪ್ಪಾಜೀಯವರು ರಚಿಸಿದ ಮಹಾದಾಸೋಹ ಸೂತ್ರಗಳು ಮಾನವೀಯ ಮೌಲ್ಯ ಮತ್ತು ಜೀವನ ಮೌಲ್ಯಗಳ ಪ್ರತಿಬಿಂಬವಾಗಿವೆ ಎಂದರು.
ಶ್ರೀ ಶರಣಬಸವೇಶ್ವರ ಸಂಸ್ಥಾನದ ಡಾ. ಅಲ್ಲಮಪ್ರಭು ದೇಶಮುಖ, ಹಿರಿಯ ಕಲಾವಿದ ಡಾ.ಎ.ಎಸ್.ಪಾಟೀಲ, ಕಲಾ ಸೌಧ ಸಂಚಾಲಕ ಡಾ. ರೆಹಮಾನ್ ಪಟೇಲ್, ಜಿಲ್ಲಾ ಕಸಾಪ ದ ಕಾರ್ಯದರ್ಸಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಚಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ರವಿಕುಮಾರ ಶಹಾಪುರಕರ್, ರಾಜೇಂದ್ರ ಮಾಡಬೂಳ, ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ಮುಹಮ್ಮದ್ ಅಯಾಜೋದ್ದೀನ್ ಪಟೇಲ್, ಅಮೃತಪ್ಪ ಅಣೂರ ಕವಿ ವೇದಿಕೆ ಮೇಲಿದ್ದರು.
ಪ್ರಮುಖರಾದ ಬಸವರಜ ಉಪ್ಪಿನ್, ಜಗದೀಶ ಮರಪಳ್ಳಿ, ಶೇಖ್ ಸಮ್ರೀನ್, ಸೈರಾ ಬಾನು, ಜ್ಯೋತಿ ಪಾಟೀಲ ಜೇವರ್ಗಿ, ಗಣೇಶ ಚಿನ್ನಾಕಾರ, ಜ್ಯೋತಿ ಕೋಟನೂರ, ಉಮೇಶ ಕೋಟನೂರ, ಎಂ ಎನ್ ಸುಗಂಧಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







