ಕಲಬುರಗಿ| ನಾಮವಾರ ಗ್ರಾಮದಲ್ಲಿ ರಸ್ತೆ ಮೇಲೆ ಹರಿಯುತ್ತಿರುವ ಚರಂಡಿ ನೀರು: ದುರಸ್ತಿ ಮಾಡುವಂತೆ ಕರವೇ ಆಗ್ರಹ

ಸೇಡಂ: ತಾಲೂಕಿನ ನಾಮವಾರ ಗ್ರಾಮದಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿದು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿರುವ ಹಿನ್ನೆಲೆ ಸಮಸ್ಯೆಯನ್ನು ತಕ್ಷಣ ಪರಿಹರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಗ್ರಾಮದ ಒಳಚರಂಡಿಗಳು ಕಲುಷಿತ ಮಣ್ಣು, ಕಸ ಹಾಗೂ ಕಡ್ಡಿಗಳಿಂದ ಸಂಪೂರ್ಣ ಮುಚ್ಚಿಕೊಂಡಿರುವ ಪರಿಣಾಮ ಚರಂಡಿ ನೀರು ರಸ್ತೆಗಳ ಮೇಲೆ ಹರಿಯುತ್ತಿದೆ. ಇದರಿಂದ ದುರ್ವಾಸನೆ ವ್ಯಾಪಿಸಿ ಸಾರ್ವಜನಿಕರು, ವಿಶೇಷವಾಗಿ ಪಾದಚಾರಿಗಳು ಮತ್ತು ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕೂಡಲೇ ಒಳಚರಂಡಿ ದುರಸ್ತಿ ಮಾಡಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಸಾಂಕ್ರಾಮಿಕ ರೋಗಗಳ ಹರಡುವ ಭೀತಿ ಎದುರಾಗಬಹುದು ಎಂದು ಕರವೇ ಕಾರ್ಯಕರ್ತರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನಾಮವಾರ ಗ್ರಾಮ ಘಟಕದ ಅಧ್ಯಕ್ಷ ನರಸಪ್ಪ, ಸಾಗರ (ಕರವೇ ಉಪಾಧ್ಯಕ್ಷ), ಸಂತೋಷ, ಯಲೇಶ, ಶರಣಯ್ಯ ಸ್ವಾಮಿ, ಅರ್ಜುನ್, ನಾಗೇಶ್, ಮೌನೇಶ್, ವಿಕಾಸ್, ರವಿ, ಇರ್ಫಾನ್ ಅಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.




