ಕಲಬುರಗಿ | ಶರಣಬಸವ ವಿವಿ ವಿದ್ಯಾರ್ಥಿಗಳಿಗೆ ಟೆಕ್ನೋ ಉತ್ಸವ-2025ರ ಸಮಗ್ರ ವೀರಾಗ್ರಣಿ ಪ್ರಶಸ್ತಿ

ಕಲಬುರಗಿ : ಬೀದರ್ನ ಲಿಂಗರಾಜ ಅಪ್ಪ ಇಂಜಿನಿಯರಿಂಗ್ ಕಾಲೇಜು ಆಯೋಜಿಸಿದ್ದ ಟೆಕ್ನೋ ಉತ್ಸವ-2025ರಲ್ಲಿ ಶರಣಬಸವ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗದ (ಸಹ-ಶಿಕ್ಷಣ) ವಿದ್ಯಾರ್ಥಿಗಳು ಸಮಗ್ರ ವೀರಾಗ್ರಣಿ ಪ್ರಶಸ್ತಿ ಗೆದ್ದಿದ್ದಾರೆ.
ವಿವಿಧ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಂದ ತೀವ್ರವಾದ ಸ್ಪರ್ಧೆಯನ್ನು ಮೀರಿ, ಶರಣಬಸವ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅನೇಕ ಸ್ಪರ್ಧೆಗಳನ್ನು ಗೆದ್ದು, ಒಟ್ಟಾರೆ ಚಾಂಪಿಯನ್ಶಿಪ್ ಗೆಲ್ಲಲು ಅರ್ಹತೆ ಪಡೆದರು.
ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ನಿಲಯದ (ಮಹಿಳೆಯರಿಗಾಗಿ ಮಾತ್ರ) ಕಂಪ್ಯೂಟರ್ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದ 4ನೇ ಸೆಮಿಸ್ಟರ್ ವಿದ್ಯಾರ್ಥಿನಿ ಲಕ್ಷ್ಮೀ ಬಾಗೋಡಿ ಡೇಟಾ ಡಿಟಾಕ್ಸಿಂಗ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದರು ಮತ್ತು ಅದೇ ವಿಭಾಗದ ಕದಂಬಿನಿ, ಧನೇಶ್ವರಿ ಮತ್ತು ಭಾರ್ಗವಿ ಪಿಪಿಟಿ ಪ್ರಸ್ತುತಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗದ (ಸಹ-ಶಿಕ್ಷಣ) ವಿದ್ಯಾರ್ಥಿಗಳು ಛಾಯಾಗ್ರಹಣದಲ್ಲಿ ಪ್ರಥಮ ಬಹುಮಾನ ಮತ್ತು ಗುಂಪು ಗಾಯನ, ಸಕ್ರ್ಯೂಟ್ ಮೇನಿಯಾ ಹಾಗೂ ಮಹಿಳಾ ಸಬಲೀಕರಣದ ಕುರಿತು ಪೇಪರ್ ಪ್ರೆಸೆಂಟೇಶನ್ನಲ್ಲಿ ಎರಡನೇ ಬಹುಮಾನಗಳನ್ನು ಗೆದ್ದು ವಿಶ್ವವಿದ್ಯಾಲಯಕ್ಕೆ ಒಟ್ಟಾರೆ ಚಾಂಪಿಯನ್ಶಿಪ್ ಗೆಲ್ಲುವುದರಲ್ಲಿ ಯಶಸ್ವಿಯಾಗಿದ್ದಾರೆ.
ಜಗದೇವ್ ರೆಡ್ಡಿ, ವಿನೀತ್ ಬಿರಾದಾರ್, ಸುನೀಲ, ಅಂಬರೀಶ್ ಮತ್ತು ಸಂಗಮೇಶ್ ಕೆ ತಮ್ಮ ನವೀನ ಛಾಯಾಗ್ರಹಣ ತಂತ್ರಗಳೊಂದಿಗೆ ಛಾಯಾಗ್ರಹಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದರು, ಸುಮನ್ ಸಕ್ರ್ಯೂಟ್ ಮೇನಿಯಾ ಸ್ಪರ್ಧೆಯಲ್ಲಿ ಎರಡನೇ ಬಹುಮಾನವನ್ನು ಪಡೆದರು, ಶಶಾಂಕ್ ವಾಲಿ, ಗಿರಿ ಮತ್ತು ಸವಿತಾ ಮಹಿಳಾ ಸಬಲೀಕರಣದ ಕುರಿತು ಪೇಪರ್ ಪ್ರೆಸೆಂಟೇಶನ್ ಸ್ಪರ್ಧೆಯಲ್ಲಿ ಎರಡನೇ ಬಹುಮಾನವನ್ನು ಪಡೆದರು ಹಾಗೂ ಸಂಗಮೇಶ್ ಮತ್ತು ಸಾಯಿ ಚೇತನ್ ಗುಂಪು ಗಾಯನ ಸ್ಪರ್ಧೆಯಲ್ಲಿ ಎರಡನೇ ಬಹುಮಾನವನ್ನು ಪಡೆದರು.
ಗುರುವಾರ ಸಂಜೆ ಕಾಲೇಜಿನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ ಮತ್ತು ಇತರ ಗಣ್ಯರು ಬಹುಮಾನಗಳನ್ನು ವಿತರಿಸಿದರು.
ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ, ಶರಣಬಸವ ವಿಶ್ವವಿದ್ಯಾಲಯದ ಡೀನ್ ಡಾ.ಲಕ್ಷ್ಮೀ ಪಾಟೀಲ ಮಾಕಾ ಅವರು ಹರ್ಷವ್ಯಕ್ತಪಡಿಸಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.