Kalaburagi | ವಿವಾದಿತ ಜಮೀನಿನ ಸಮೀಕ್ಷೆಗೆ ತೆರಳಿದ್ದ ಅಧಿಕಾರಿಗಳ ಮೇಲೆ ಕಲ್ಲು ತೂರಾಟ : ಆರೋಪ

ಕಲಬುರಗಿ: ಚಿಂಚೋಳಿ ತಾಲೂಕಿನ ಶಾದಿಪುರ ಗ್ರಾಮದ ವಿವಾದಿತ ಜಮೀನಿನ ಸಮೀಕ್ಷೆ ವೇಳೆ ಕರ್ನಾಟಕದ ಅಧಿಕಾರಿಗಳ ತಂಡದ ಮೇಲೆ ತೆಲಂಗಾಣ ಗಡಿಭಾಗದ ಗ್ರಾಮಸ್ಥರು ಕಲ್ಲು ತೂರಾಟ ನಡೆಸಿದ ಪರಿಣಾಮ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಘಟನೆ ಬುಧವಾರ ನಡೆದಿದೆ.
ಸೇಡಂ ಉಪವಿಭಾಗಾಧಿಕಾರಿ ಪ್ರಭುರೆಡ್ಡಿ ಹಾಗೂ ಭೂದಾಖಲೆಗಳ ಇಲಾಖೆಯ ಉಪನಿರ್ದೇಶಕ ಮಹೇಶ್ ನೇತೃತ್ವದ ಅಧಿಕಾರಿಗಳ ತಂಡ ಶಾದಿಪುರ ಗ್ರಾಮದ ಸರ್ವೆ ನಂ.126ರಲ್ಲಿರುವ ವಿವಾದಿತ ಜಮೀನಿನ ಸಮೀಕ್ಷೆಗಾಗಿ ತೆರಳಿತ್ತು. ಸಮೀಕ್ಷೆ ಪೂರ್ಣಗೊಳಿಸಿ ಗಡಿ ಪರಿಶೀಲನೆ ನಡೆಸುತ್ತಿದ್ದ ವೇಳೆ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ಉಮ್ಲಾ ನಾಯಕ ತಾಂಡಾದ ಕೆಲ ಮಹಿಳೆಯರು ಮತ್ತು ಪುರುಷರು ಪ್ರತಿಭಟನೆ ನಡೆಸಿ ಕಲ್ಲು ತೂರಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆದರೆ ಪ್ರತಿಭಟನಾಕಾರರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ, ಜಮೀನು ವಿವಾದಿತವಾಗಿರುವುದರಿಂದ ಎರಡೂ ರಾಜ್ಯಗಳ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಸಮೀಕ್ಷಾ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಸ್ಥಳದಿಂದ ಹಿಂದಿರುಗಿದೆ. ಸುಮಾರು 24 ವರ್ಷಗಳ ಹಿಂದೆ ಕರ್ನಾಟಕ ಸರ್ಕಾರ ಭೂ ಸಂತ್ರಸ್ತರಿಗೆ ಮಂಜೂರು ಮಾಡಿದ್ದ ಈ ಜಮೀನಿನ ಗಡಿ ಮತ್ತು ಹಕ್ಕು ಕುರಿತ ವಿವಾದ ಇನ್ನೂ ಮುಂದುವರಿದಿದೆ.






