ಕಲಬುರಗಿ | ಬಿಎಡ್ ಫಲಿತಾಂಶ ಪ್ರಕಟಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಕಲಬುರಗಿ : 2024-25 ನೇ ಸಾಲಿನ ಬಿಎಡ್ ಎರಡನೇ ಸೆಮಿಸ್ಟರ್ ಮತ್ತು ಅಂತಿಮ ವರ್ಷದ ನಾಲ್ಕನೇ ಸೆಮಿಸ್ಟರ್ ಫಲಿತಾಂಶ ಪ್ರಕಟಿಸಿ, ಕೂಡಲೇ ಮೂಲ ಅಂಕಪಟ್ಟಿಯನ್ನು ನೀಡುವಂತೆ ಆಗ್ರಹಿಸಿ, ಗುಲ್ಬರ್ಗಾ ವಿವಿ ವ್ಯಾಪ್ತಿಯ ಕಾಲೇಜುಗಳ ವಿದ್ಯಾರ್ಥಿಗಳು ಗುರುವಾರ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.
ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಿಂದ ಡಿಸಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಗುಲ್ಬರ್ಗಾ ವಿವಿಯ ಕುಲಪತಿ, ಮೌಲ್ಯಮಾಪನ ಕುಲಸಚಿವ ಸೇರಿದಂತೆ ಇತರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗುವುದರ ಮೂಲಕ ಶೀಘ್ರದಲ್ಲಿ ಫಲಿತಾಂಶ ಬಿಡುಗಡೆ, ಅಂಕಪಟ್ಟಿ ವಿತರಿಸುವಂತೆ ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಕೆಲ ವಿದ್ಯಾರ್ಥಿಗಳು, ಪರೀಕ್ಷೆ ಬರೆದು ಫಲಿತಾಂಶ ಮತ್ತು ಅಂಕಪಟ್ಟಿಗಾಗಿ ಜಾತಕ ಪಕ್ಷಿಯಂತೆ ಕಾಯುವ ಸ್ಥಿತಿ ಬಂದಿದೆ. ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಪರೀಕ್ಷೆ ತೆಗೆದುಕೊಂಡರೂ 45 ದಿನದ ಒಳಗಾಗಿ ಫಲಿತಾಂಶ ಪ್ರಕಟಿಸಬೇಕೆಂದು ನಿಯಮವಿದೆ. ಆದರೆ ಈ ನಿಯಮವನ್ನು ಕಲಬುರಗಿ ವಿಶ್ವವಿದ್ಯಾಲಯವು ಗಾಳಿಗೆ ತೂರಿದೆ ಎಂದು ಆರೋಪಿಸಿದ್ದಾರೆ.
ಹಲವು ಬಾರಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಕಾರ್ಯಸೌಧದ ಎದುರುಗಡೆ ಹೋರಾಟವನ್ನು ಮಾಡಿ ಮನವಿಯನ್ನು ಸಲ್ಲಿಸಿದ್ದೇವೆ. ಅಂದು ಕುಲಪತಿ ಹಾಗೂ ಕುಲಸಚಿವರು ತಿಂಗಳ ಒಳಗಾಗಿ ಫಲಿತಾಂಶ ಪ್ರಕಟಿಸುವುದಾಗಿ ಭರವಸೆಯನ್ನು ಕೊಟ್ಟಿದ್ದರು. ಆದರೆ ನಾವು ತಿಂಗಳುಗಳೇ ಕಳೆದರೂ ಸಹ ಫಲಿತಾಂಶ ಪ್ರಕಟಿಸಿಲ್ಲ ಎಂದು ದೂರಿದರು.
ಈಗಾಗಲೇ ಕರ್ನಾಟಕ ಸರ್ಕಾರವು ಶಿಕ್ಷಕರ ಅರ್ಹತಾ ಪರೀಕ್ಷೆ(TET) ಅರ್ಜಿ ಸಲ್ಲಿಕೆ ಪ್ರಾರಂಭಿಸಿದ್ದು, ಫಲಿತಾಂಶ ಘೋಷಣೆ ವಿಳಂಬ ನೀತಿಯಿಂದಾಗಿ ಅನರ್ಹ ಶಿಕ್ಷಕರಾಗಿ ಉಳಿದಿದ್ದಾರೆ. ಭವಿಷ್ಯದಲ್ಲಿ ಕರ್ನಾಟಕ ಸರ್ಕಾರವು ಶೀಘ್ರವಾಗಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದೆ. ಫಲಿತಾಂಶ ಬಾರದ ಇದ್ದರೆ, ಬಿ.ಇಡಿ ವೃತ್ತಿ ಶಿಕ್ಷಣ ಪಡೆದು ಶಿಕ್ಷಕರಾಗಲು ಆಕಾಂಕ್ಷೆಗಳನ್ನು ಹೊತ್ತಿರುವ ಸಾವಿರಾರು ಪ್ರಶಿಕ್ಷಣಾರ್ಥಿಗಳ ಕನಸು ನುಚ್ಚು ನೂರಾಗುವುದರಲ್ಲಿ ಸಂದೇಹವಿಲ್ಲ. ಅದರಲ್ಲೂ ವಿಶೇಷವಾಗಿ ಕರ್ನಾಟಕ ಸರ್ಕಾರ ನಿಗದಿ ಪಡಿಸಿದ ವಯೋಮಿತಿಯನ್ನು ಮೀರುವ ಆತಂಕದಲ್ಲಿರುವ ಪ್ರಶಿಕ್ಷಣಾರ್ಥಿಗಳು ಸಹ ಫಲಿತಾಂಶ ನಿರೀಕ್ಷೆಯಲ್ಲಿ ಇದ್ದಾರೆ. ಕೂಡಲೇ ಬೇಡಿಕೆಗೆ ಸ್ಪಂದಿಸಬೇಕೆಂದು ಒತ್ತಾಯಿಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಎಲ್ಲ ಸೆಮಿಸ್ಟರ್ ಮೂಲ ಅಂಕಪಟ್ಟಿ ವಿತರಿಸಬೇಕು, ಘಟಿಕೋತ್ಸವ ಪ್ರಮಾಣ ಪತ್ರ ನೀಡಬೇಕು, ಬಿಎಡ್ ಪರೀಕ್ಷಾ ಶುಲ್ಕ (Eligibility Fees) ಕಡಿಮೆ ಮಾಡಬೇಕು ಎಂದು ವಿದ್ಯಾರ್ಥಿಗಳು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂದರ್ಭದಲ್ಲಿ ತೇಜಸ್ ಇಬಾಹಿಂಪುರ, ಸಂತೋಷಕುಮಾರ ಎಸ್.ಪಿ., ರವೇಶ ದೇವಕರ್, ಪ್ರಭಾಕದ ಚಿಂಚೋಳಿ, ಅಣವೀರ ಗೌಡ ಬಿರಾದಾರ, ಗಣೇಶ ಜಾಧವ್, ರವಿಚಂದ್ರ, ಪೂಜಾ, ವಿವೇಕ ಹಿರೇಮಠ, ಜಗನ್ನಾಥ್, ಸೇರಿದಂತೆ ಮತ್ತಿತರರು ಇದ್ದರು.







