ಕಲಬುರಗಿ | ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆಮಾಡಿ ಉಜ್ವಲ ಭವಿಷ್ಯ ನಿರ್ಮಿಸಬೇಕು : ಅಯಾಝುದ್ದೀನ್ ಪಟೇಲ್

ಕಲಬುರಗಿ: ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಬಹುತೇಕ ಸೌಕರ್ಯಗಳು ಮತ್ತು ವಿಶಾಲವಾದ ಅವಕಾಶಗಳಿವೆ. ಅವರು ತಮ್ಮ ಮುಂದಿನ ಶಿಕ್ಷಣಕ್ಕಾಗಿ ಹಲವು ಆಯ್ಕೆಗಳನ್ನು ಹೊಂದಿದ್ದಾರೆ ಎಂದು ಅಂತರರಾಷ್ಟ್ರೀಯ ಖ್ಯಾತಿಯ ಕಲಾವಿದ ಮುಹಮ್ಮದ್ ಅಯಾಝುದ್ದೀನ್ ಪಟೇಲ್ ಹೇಳಿದರು.
ಮಂಗಳವಾರ ನಗರದಲ್ಲಿರುವ ಹಲೀಮಾ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಆಯೋಜಿಸಲಾದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆಮಾಡಿ ಉಜ್ವಲ ಭವಿಷ್ಯ ನಿರ್ಮಿಸಬೇಕು ಎಂದು ಅವರು ಸಲಹೆ ನೀಡಿದರು. ನಿರಂತರವಾಗಿ ಮೊಬೈಲ್ ಫೋನ್ ಬಳಸಬಾರದು ಎಂದು ಅವರು ಸೂಚಿಸಿದರು.
ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ರೆಹಮಾನ್ ಪಟೇಲ್ ಮಾತನಾಡಿದರು.
ಶಾಲೆಯ ಪ್ರಾಚಾರ್ಯ ಅಮ್ಜದ್ ಜಾವೇದ್ ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳು ಸಾಧಕರ ಜೀವನವನ್ನು ಅಧ್ಯಯನ ಮಾಡಬೇಕು ಮತ್ತು ಅವರಿಂದ ಪ್ರೇರಣೆ ಪಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
Next Story





