Kalaburagi | ವಿದ್ಯಾರ್ಥಿಗಳು ಸ್ಟಾರ್ಟ್ಅಪ್ ಆರಂಭಿಸಿ ಉದ್ಯೋಗ ಸೃಷ್ಟಿಕರ್ತರಾಗಬೇಕು: ಪ್ರೊ.ಅನಿಲಕುಮಾರ ಬಿಡವೆ

ಕಲಬುರಗಿ: ವಿದ್ಯಾರ್ಥಿಗಳು ತಮ್ಮ ಉದ್ಯಮಶೀಲತಾ ಕೌಶಲ್ಯಗಳನ್ನು ವೃದ್ಧಿಪಡಿಸಿಕೊಂಡು ಕಡಿಮೆ ಬಂಡವಾಳದಲ್ಲಿ ಸ್ವಂತ ಸ್ಟಾರ್ಟ್ಅಪ್ಗಳನ್ನು ಆರಂಭಿಸುವ ಮೂಲಕ ಸ್ವಾವಲಂಬಿಗಳಾಗಬೇಕು. ಜೊತೆಗೆ ಇತರರಿಗೆ ಉದ್ಯೋಗ ನೀಡುವ ಮಟ್ಟಕ್ಕೆ ಬೆಳೆಯುವ ಗುರಿ ಹೊಂದಬೇಕು ಎಂದು ಪ್ರೊ. ಅನಿಲಕುಮಾರ ಬಿಡವೆ ಕರೆ ನೀಡಿದರು.
ಶರಣಬಸವ ವಿಶ್ವವಿದ್ಯಾಲಯ ಮುಖ್ಯ ಆವರಣದಲ್ಲಿರುವ ದೊಡ್ಡಪ್ಪ ಅಪ್ಪಾ ಸಭಾ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ಲೇಸ್ಮೆಂಟ್ ಡ್ರೈವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದು ಉದ್ಯೋಗಗಳ ಕೊರತೆ ಇಲ್ಲ. ಆದರೆ ಕೈಗಾರಿಕೆಗಳಿಗೆ ಅಗತ್ಯವಿರುವ ಕೌಶಲ್ಯಗಳನ್ನು ಹೊಂದಿದ ಅಭ್ಯರ್ಥಿಗಳು ದೊರೆಯದಿರುವುದೇ ಪ್ರಮುಖ ಸವಾಲಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳಿಂದ ಹೊರಬರುವ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿಯೇ ಉದ್ಯೋಗದಾತರ ನಿರೀಕ್ಷೆಗಳಿಗೆ ಅನುಗುಣವಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶೈಕ್ಷಣಿಕ ಸಂಸ್ಥೆಗಳು ಪದವಿ ಪ್ರಮಾಣಪತ್ರ ನೀಡಬಹುದಾದರೂ, ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಅಗತ್ಯವಾದ ಕೌಶಲ್ಯಗಳನ್ನು ವಿದ್ಯಾರ್ಥಿಗಳು ತಾವೇ ಅಭಿವೃದ್ಧಿಪಡಿಸಿಕೊಳ್ಳಬೇಕು. ಶಿಕ್ಷಣ ಸಂಸ್ಥೆಗಳು ನೀಡುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ನಿಪುಣ ವೃತ್ತಿಪರರಾಗಿ ರೂಪುಗೊಳ್ಳುವುದು ವಿದ್ಯಾರ್ಥಿಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಪ್ಲೇಸ್ಮೆಂಟ್ ಡ್ರೈವ್ಗಳು ಯುವಕರ ವೃತ್ತಿಜೀವನದ ಮಹತ್ವದ ಘಟ್ಟಗಳಾಗಿದ್ದು, ಉದ್ಯೋಗ ಕ್ಷೇತ್ರದ ಸವಾಲುಗಳನ್ನು ಎದುರಿಸಲು ಸಿದ್ಧರಾಗಿರಬೇಕು. ಉದ್ಯೋಗದಾತರ ನಿರೀಕ್ಷೆಗಳನ್ನು ಪೂರೈಸುವ ಸಾಮರ್ಥ್ಯ ಬೆಳೆಸಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.
ತಮ್ಮ ವೃತ್ತಿಜೀವನದ ಅನುಭವ ಹಂಚಿಕೊಂಡ ಅವರು, ಶರಣಬಸವ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಆರಂಭಿಸಿದ ಪಯಣ ಇಂದು ಕುಲಪತಿ ಹುದ್ದೆಯವರೆಗೆ ತಲುಪಿದ್ದು, ನಿರಂತರ ಪರಿಶ್ರಮ ಮತ್ತು ಬದ್ಧತೆಯೇ ಯಶಸ್ಸಿನ ಗುಟ್ಟು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಸವರಾಜ ದೇಶಮುಖ, ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಉದ್ಯೋಗ ಅರಸುವವರಾಗದೆ ಉದ್ಯೋಗ ಸೃಷ್ಟಿಸುವ ಉದ್ಯಮಿಗಳಾಗಬೇಕು ಎಂದು ಕರೆ ನೀಡಿದರು.
ಯುವ ಪದವೀಧರರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವಲ್ಲಿ ಪ್ಲೇಸ್ಮೆಂಟ್ ಡ್ರೈವ್ಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪ್ರೊ. ವಿ.ಡಿ. ಮೈತ್ರಿ, ಡಾ. ಲಕ್ಷ್ಮೀ ಪಾಟೀಲ್ ಮಕಾ, ಡಾ. ಎಸ್.ಎಚ್. ಹೊನ್ನಳ್ಳಿ, ಶಿವಕುಮಾರ್ ಜವಳಿಗಿ, ಡಾ. ಸುಜಾತಾ ಮಲ್ಲಾಪುರ ಸೇರಿದಂತೆ ವಿವಿಧ ಕಂಪನಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಪ್ರೊ. ಶ್ರತಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಸಾವಿತ್ರಿ ಸ್ವಾಗತಿಸಿದರು. ಪ್ರೊ. ಶೋಭನಾ ಪ್ಲೇಸ್ಮೆಂಟ್ ಡ್ರೈವ್ ಕುರಿತು ಮಾಹಿತಿ ನೀಡಿದರೆ, ಪ್ರೊ. ನಾಗವೇಣಿ ವಂದನಾರ್ಪಣೆ ಸಲ್ಲಿಸಿದರು.






