Kalaburagi | ಸಿಯುಕೆಯಲ್ಲಿ ಅಂತರರಾಷ್ಟ್ರೀಯ IEEE INCIP 2026 ಸಮ್ಮೇಳನ ಯಶಸ್ವಿ ಸಮಾರೋಪ

ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ (ಇಸಿಇ) ವಿಭಾಗದ ವತಿಯಿಂದ ಆಯೋಜಿಸಿದ್ದ ‘ಸಂವಹನ, ಮಾಹಿತಿ ಮತ್ತು ಸಂಸ್ಕರಣೆಯಲ್ಲಿನ ನಾವೀನ್ಯತೆಗಳು’ ಕುರಿತ ಅಂತರರಾಷ್ಟ್ರೀಯ IEEE INCIP–2026 ಸಮ್ಮೇಳನ ಸಮಾರೋಪ ಸಮಾರಂಭದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತಿರುವನಂತಪುರದ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (IIST)ಯ ಪ್ರಾಧ್ಯಾಪಕ ಪ್ರೊ. ಚಿನ್ಮಯ್ ಸಹಾ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಇಂತಹ ಅಂತರರಾಷ್ಟ್ರೀಯ ಸಮ್ಮೇಳನ ಆಯೋಜಿಸಿರುವುದು ಶೈಕ್ಷಣಿಕ ಹಾಗೂ ಸಂಶೋಧನಾ ಕ್ಷೇತ್ರಕ್ಕೆ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.
ಸಮ್ಮೇಳನಗಳು ಜ್ಞಾನ ವಿನಿಮಯ, ಸಂಶೋಧನಾ ಪ್ರಸ್ತುತಿ ಹಾಗೂ ವೃತ್ತಿಪರ ಸಂಪರ್ಕಗಳ ನಿರ್ಮಾಣಕ್ಕೆ ಉತ್ತಮ ವೇದಿಕೆಯಾಗಿದ್ದು, ಮುಂದೆಯೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಅವರು ಸಲಹೆ ನೀಡಿದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಮಾತನಾಡಿ, ವಿಶ್ವವಿದ್ಯಾಲಯದ ಮೊದಲ ಪ್ರಮುಖ ಅಂತರರಾಷ್ಟ್ರೀಯ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿದ ಇಸಿಇ ವಿಭಾಗದ ಸಂಘಟನಾ ಸಮಿತಿಯನ್ನು ಅಭಿನಂದಿಸಿದರು. ವಿದ್ಯಾರ್ಥಿಗಳು ಮತ್ತು ಸಂಶೋಧಕರು ನಾವೀನ್ಯತೆ ಹಾಗೂ ಶೈಕ್ಷಣಿಕ ಶ್ರೇಷ್ಠತೆಯ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಮ್ಮೇಳನದ ಆರು ತಾಂತ್ರಿಕ ವಿಭಾಗಗಳಲ್ಲಿ ಅತ್ಯುತ್ತಮವಾಗಿ ಆಯ್ಕೆಯಾದ ಆರು ಸಂಶೋಧನಾ ಪ್ರಬಂಧಗಳಿಗೆ ‘ಅತ್ಯುತ್ತಮ ಸಂಶೋಧನಾ ಪ್ರಬಂಧ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಮ್ಮೇಳನದಲ್ಲಿ ದೇಶ-ವಿದೇಶಗಳ ವಿವಿಧ ಸಂಸ್ಥೆಗಳ ಸಂಶೋಧಕರು, ಶಿಕ್ಷಣ ತಜ್ಞರು, ವೃತ್ತಿಪರರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಸಂಶೋಧನಾ ವಿಚಾರಗಳ ಪ್ರಸ್ತುತಿ, ಜ್ಞಾನ ವಿನಿಮಯ ಮತ್ತು ಭವಿಷ್ಯದ ಶೈಕ್ಷಣಿಕ ಸಹಯೋಗಗಳ ಕುರಿತು ಚರ್ಚಿಸಿದರು.
ಎಂಜಿನಿಯರಿಂಗ್ ನಿಕಾಯದ ಡೀನ್ ಪ್ರೊ. ಎಂ. ಅಮರೇಂದ್ರ, ಸಮ್ಮೇಳನದ ಜನರಲ್ ಚೇರ್ ಹಾಗೂ ಇಸಿಇ ವಿಭಾಗದ ಮುಖ್ಯಸ್ಥ ಪ್ರೊ. ಪ್ರಮೋದ್ ಕುಮಾರ್, ಜನರಲ್ ಚೇರ್ ಪ್ರೊ. ಪರಮೇಶ್ ಎಸ್.ಪಿ., ಇಸಿಇ ವಿಭಾಗದ ಪ್ರಾಧ್ಯಾಪಕರು, ಪ್ರತಿನಿಧಿಗಳು, ಸಂಪನ್ಮೂಲ ವ್ಯಕ್ತಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವು ವಂದೇ ಮಾತರಂ ಗಾಯನದೊಂದಿಗೆ ಆರಂಭವಾಗಿ ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು. ಸಮ್ಮೇಳನದ ಹಣಕಾಸು ಅಧ್ಯಕ್ಷ ಡಾ. ಎನ್.ಸಿ. ಪ್ರಧಾನ್ ವಂದನಾರ್ಪಣೆ ಮಾಡಿದರು.






