Kalaburagi | ಸ್ವಚ್ಛ ಭಾರತ ನಿರ್ಮಾಣ ಪ್ರತಿಯೊಬ್ಬರ ಕರ್ತವ್ಯ : ಮೇಯರ್ ವರ್ಷಾ ಜಾನೆ

ಕಲಬುರಗಿ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸ್ವಚ್ಛತೆ, ರಾಷ್ಟ್ರಪ್ರೇಮ ಹಾಗೂ ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಉದ್ದೇಶದಿಂದ ಕಲಬುರಗಿ ಮಹಾನಗರ ಪಾಲಿಕೆ ವತಿಯಿಂದ ಶುಕ್ರವಾರ ‘ರನ್ ಫಾರ್ ಶತಾಭಿಷೇಕಂ’ ಮ್ಯಾರಥಾನ್ ಹಾಗೂ ಸೈಕ್ಲೋಥಾನ್ ಆಯೋಜಿಸಲಾಯಿತು.
ನಗರದ ಕಲಬುರಗಿ ಕೋಟೆಯಿಂದ ಆರಂಭವಾದ ಮ್ಯಾರಥಾನ್ ಹಾಗೂ ಸೈಕ್ಲೋಥಾನ್ ಜಗತ್ ವೃತ್ತದ ಮೂಲಕ ತಿಮ್ಮಾಪುರ ವೃತ್ತದವರೆಗೆ ಸಾಗಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಮಹಾನಗರ ಪಾಲಿಕೆ ಮೇಯರ್ ವರ್ಷಾ ಜಾನೆ, ಸ್ವಚ್ಛ ಭಾರತ ನಿರ್ಮಾಣ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಹಸಿ ಮತ್ತು ಒಣಕಸವನ್ನು ಪ್ರತ್ಯೇಕಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಕರೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಮಾತನಾಡಿ, ನಗರವನ್ನು ಸ್ವಚ್ಛವಾಗಿಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯ. ಸ್ವಚ್ಛ ಪರಿಸರ ಆರೋಗ್ಯಕರ ಜೀವನಕ್ಕೆ ಪೂರಕವಾಗಿದ್ದು, ಪ್ರತಿಯೊಬ್ಬರೂ ಮನೆ, ವಾರ್ಡ್ ಹಾಗೂ ನಗರದ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಜಿಪಂ ಸಿಇಒ ರಾಹುಲ್ ಸಂಕನೂರ ಮಾತನಾಡಿ, ನಗರದ ಸ್ವಚ್ಛತೆ ಪ್ರವಾಸೋದ್ಯಮ ಹಾಗೂ ಆರ್ಥಿಕ ಅಭಿವೃದ್ಧಿಗೂ ಪೂರಕವಾಗಿದೆ. ಹೊರಗಿನಿಂದ ಬರುವವರು ಮೊದಲು ನಗರದ ಸ್ವಚ್ಛತೆಯನ್ನು ಗಮನಿಸುತ್ತಾರೆ. ಸ್ವಚ್ಛತೆಯಿಂದ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಡಿಸಿಎಫ್ ಆಶಿಶ್ ರೆಡ್ಡಿ ಮಾತನಾಡಿ, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಪರಿಸರ ಮಾಲಿನ್ಯ ತಡೆಗಟ್ಟಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ ಮಾತನಾಡಿ, ಏಕಬಳಕೆ ಪ್ಲಾಸ್ಟಿಕ್ನ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಸೈಕ್ಲೋಥಾನ್ನಲ್ಲಿ ದತ್ತಾತ್ರೇಯ ದೀಪಕ್ ಪ್ರಥಮ, ವೆಂಕಟೇಶ್ ಮುರಳೀಧರ ದ್ವಿತೀಯ ಹಾಗೂ ಲಕ್ಷ್ಮೀಪುತ್ರ ಗುರುಲಿಂಗಪ್ಪ ತೃತೀಯ ಸ್ಥಾನ ಪಡೆದರು. ಮ್ಯಾರಥಾನ್ನಲ್ಲಿ ಪ್ರತೀಕ್, ಶ್ರೀಲಕ್ಷ್ಮಿ ಹಾಗೂ ರಾಹುಲ್ ರಾನೋಜಿ ಗಮನಾರ್ಹ ಸಾಧನೆ ಮಾಡಿದರು.
ನಂತರ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಮಕ್ಕಳಿಗಾಗಿ ಚಿತ್ರಕಲಾ ಹಾಗೂ ಟಾಯ್ಕಥಾನ್ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಸ್ವಾತಂತ್ರ್ಯದ ಮೌಲ್ಯಗಳೊಂದಿಗೆ ಸ್ವಚ್ಛ ಹಾಗೂ ಜವಾಬ್ದಾರಿಯುತ ಸಮಾಜ ನಿರ್ಮಾಣಕ್ಕೆ ಯುವಜನತೆ ಮತ್ತು ಮಕ್ಕಳನ್ನು ಪ್ರೇರೇಪಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.
ಕಾರ್ಯಕ್ರಮದಲ್ಲಿ ಪಾಲಿಕೆಯ ಸದಸ್ಯರಾದ ಅನುಪಮಾ ಕಮಕನೂರ, ಅಯಾಜ್ ಖಾನ್, ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ, ಡಿಸಿಪಿ ಶಾಲೂ, ಡಿಸಿಎಫ್ ಆಶಿಶ್ ರೆಡ್ಡಿ ಸೇರಿದಂತೆ, ಪಾಲಿಕೆಯ ಅಧಿಕಾರಿ, ಸಿಬ್ಬಂದಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.






