ಕಲಬುರಗಿ | ಲಿಂಗಾಯತ ಧರ್ಮಕ್ಕೂ ಮಾನ್ಯತೆ ನೀಡುವಂತೆ ಸ್ವಾಮೀಜಿಗಳ ಆಗ್ರಹ

ಕಲಬುರಗಿ, ಸೆ.3: ಜೈನರು, ಸಿಖ್ಖರು ಸ್ವತಂತ್ರ ಧರ್ಮವಾಗಿ ಮಾನ್ಯತೆ ಪಡೆದಿದ್ದಾರೆ. ಅದೇ ಮಾದರಿಯಲ್ಲಿ ಲಿಂಗಾಯತ ಧರ್ಮಕ್ಕೂ ಕೇಂದ್ರ ಸರಕಾರ ತಕ್ಷಣ ಮಾನ್ಯತೆ ನೀಡಬೇಕು ಎಂದು ಸಾಣೆಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದ್ದಾರೆ.
ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ನಗರದ ಬಸವರಾಜಪ್ಪ ಅಪ್ಪ ಸ್ಮಾರಕ ಸಭಾ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಬಸವ ಸಂಸ್ಕೃತಿ ಅಭಿಯಾನದ ವಿದ್ಯಾರ್ಥಿ-ಸಾರ್ವಜನಿಕರ ಮುಕ್ತ ಸಂವಾದದಲ್ಲಿ ಮಾತನಾಡುತ್ತಿದ್ದ ಅವರು, ಸಿಎಂ ಸಿದ್ದರಾಮಯ್ಯ ಈ ಸಂಬಂಧ ಈಗಾಗಲೇ ಕೇಂದ್ರಕ್ಕೆ ಶಿಫಾರಸು ಕಳುಹಿಸಿದ್ದಾರೆ. ಅಗತ್ಯವಿದ್ದರೆ ರಾಜ್ಯ ಸರಕಾರದಿಂದ ಮತ್ತೊಮ್ಮೆ ಶಿಫಾರಸು ಕಳುಹಿಸುವಂತೆ ಒತ್ತಾಯಿಸಲಾಗುವುದು ಎಂದರು.
ಇದೇ ವೇಳೆಯಲ್ಲಿ ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದೇವರು, ಗದಗನ ತೋಂಟದ ಸಿದ್ದರಾಮ ಮಹಾಸ್ವಾಮೀಜಿ ಹಾಗೂ ಅಥಣಿಯ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಈ ವಿಷಯದ ಕುರಿತು ದನಿಗೂಡಿಸಿದರು. ಕಾರ್ಯಕ್ರಮದಲ್ಲಿ ಮೈಸೂರಿನ ಡಾ.ಶರಶ್ಚಂದ್ರ ಸ್ವಾಮೀಜಿ, ಬೆಳಗಾವಿಯ ಡಾ.ಗುರುದೇವಿ ಹುಲ್ಲೇಪ್ಪನವರ ಮಠ, ಶ್ರೀ ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿ ಸ್ವಾಮಿಜಿ, ರಟಕಲ್ ಶ್ರೀ, ನಾಗೂರ ಶ್ರೀ, ಹೂಲಸೂರ ಶ್ರೀ ವಿವಿಧ ಮಠಾಧೀಶರು ಮತ್ತು ಯೋಜನಾ ಆಯೋಗದ ರಾಜ್ಯ ಉಪಾಧ್ಯಕ್ಷ ಹಾಗೂ ಆಳಂದ ಶಾಸಕ ಬಿ.ಆರ್. ಪಾಟೀಲ್ ಮತ್ತಿತರರು ಇದ್ದರು. ಡಾ.ನೀಲಾಂಬಿಕಾ ಪೊಲೀಸ್ ಪಾಟೀಲ್, ಅಧ್ಯಕ್ಷತೆ ವಹಿಸಿದ ಶರಣಬಸವ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಅನೀಲಕುಮಾರ ಬಿಡವೆ, ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಡಾ.ಸಾರಿಕಾದೇವಿ ಕಾಳಗಿ ಮಾತನಾಡಿದರು. ಅರುಣಕುಮಾರ ಪಾಟೀಲ್ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿದರು.







