Kalaburagi | ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಲ್ಪಸಂಖ್ಯಾತರ ಸಂಚಾಲಕರಾಗಿ ಸೈಯದ್ ಅಮನ್ ನೇಮಕ

ಕಲಬುರಗಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ನಾಗವಾರ ಬಣ) ಕಲಬುರಗಿ ಜಿಲ್ಲಾ ಅಲ್ಪಸಂಖ್ಯಾತರ ಸಂಚಾಲಕರಾಗಿ ಸೈಯದ್ ಅಮನ್ ಅವರನ್ನು ನೇಮಕ ಮಾಡಲಾಗಿದೆ.
ನಗರದ ಜಗತ್ ವೃತ್ತದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ಬಸವರಾಜ ಟಿ. ಬಾಡಿಹಾಳ ಅವರು ಸೈಯದ್ ಅಮನ್ ಅವರಿಗೆ ನೇಮಕಾತಿ ಆದೇಶ ಪತ್ರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಸವರಾಜ ಟಿ. ಬಾಡಿಹಾಳ, ಸಂಘಟನೆಯ ತತ್ವ, ಸಿದ್ಧಾಂತ ಮತ್ತು ಬದ್ಧತೆಗಳನ್ನು ಪಾಲಿಸಿಕೊಂಡು ಅಲ್ಪಸಂಖ್ಯಾತರು ಹಾಗೂ ದಲಿತ ಸಮುದಾಯಗಳ ಸಾಮಾಜಿಕ ನ್ಯಾಯ, ಹಕ್ಕುಗಳು ಮತ್ತು ಸಮಸ್ಯೆಗಳ ಕುರಿತು ಧ್ವನಿ ಎತ್ತುವಂತೆ ಸೈಯದ್ ಅಮನ್ ಅವರಿಗೆ ಸಲಹೆ ನೀಡಿದರು.
ನೇಮಕಾತಿ ಸ್ವೀಕರಿಸಿದ ಸೈಯದ್ ಅಮನ್, ಸಂಘಟನೆ ವಹಿಸಿರುವ ಜವಾಬ್ದಾರಿಯನ್ನು ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ನಿರ್ವಹಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಘಟನಾ ಸಂಚಾಲಕ ರಾಜು ಹೋಳ್ಕರ್, ಸಂಚಾಲಕ ಸಂಜೀವಕುಮಾರ ಕಾನಾಪೂರ, ಚಿಂಚೋಳಿ ತಾಲೂಕು ಅಧ್ಯಕ್ಷ ಮಹಬೂಬ್ ಅಲಿ, ಕಲಬುರಗಿ ನಗರ ಅಧ್ಯಕ್ಷೆ ಸುಹಾಸಿನಿ, ಮುಖಂಡರಾದ ಅರವಿಂದ ನಾಟಿಕಾರ, ಜಗದೇವಿ ಹೆಗಡೆ, ತಬರೇಜ್, ಅಝರ್, ಆದಿಲ್, ಸುರೇಶ, ಪ್ರಕಾಶ್ ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಹಾಗೂ ಮುಖಂಡರು ಉಪಸ್ಥಿತರಿದ್ದರು.






