ಕಲಬುರಗಿ | ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ : ಗಮನ ಸೆಳೆದ ಸಾಹಿತ್ಯ ಸಿಂಚನ ಗೋಷ್ಠಿ

ಕಲಬುರಗಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಕನ್ನಡ ಭವನದಲ್ಲಿ 9ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು.
ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಕುವೆಂಪು ಭಾಷಾ ಪ್ರಾಧಿಕಾರದ ಅಧ್ಯಕ್ಷ ಡಾ. ಚನ್ನಪ್ಪ ಕಟ್ಟಿ, ಜನಪದಕಾರರು, ತತ್ವಪದಕಾರರು ಈ ನಾಡು ಮತ್ತು ದೇಶಕ್ಕೆ ಬಹು ಮೌಲಿಕ ಕೊಡುಗೆ ನೀಡಿದ್ದಾರೆ. ಸಾಹಿತ್ಯ ಉತ್ಪನ್ನವಾಗದೆ ಪ್ರಕ್ರಿಯೆ ರೀತಿಯಲ್ಲಿ ಸಾಹಿತ್ಯ ರಚಿಸಬೇಕಾಗಿದೆ. ವಿಮರ್ಶಕನು ವಿಶ್ಲೇಷಣೆ ಮಾಡುವ ಜವಬ್ದಾರಿ ಹೆಚ್ಚಿದೆ. ಪರಂಪರೆಯಿoದ ಹೊಸ ವ್ಯವಸ್ಥೆಯನ್ನು ಕಟ್ಟಬೇಕು. ಇಂಥ ಹೊಸ ಸಿದ್ದಾಂತ ಇಂದಿನ ಯುವ ಬರಹಗಾರರು ಅನುಸರಿಸಬೇಕೆಂದರು.
ಸಮ್ಮೇಳನಾಧ್ಯಕ್ಷ ಡಾ. ಶ್ರೀಶೈಲ ನಾಗರಾಳ ಮಾತನಾಡಿ, ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾಗಿರುವ ಕಲಬುರಗಿ ತನ್ನದೇ ಆದ ವಿಶಿಷ್ಟ ಇತಿಹಾಸ-ಪರಂಪರೆ ಹೊಂದಿದೆ ಎಂದು ಹೇಳಿದರು. ಮೌರ್ಯ, ಶಾತವಾಹನ, ಕಲ್ಯಾಣ ಚಾಲೂಕ್ಯರು, ಬಹಮನಿ ಸುಲ್ತಾನರು, ಅದಿಲ್ ಶಾಹಿ ಹಾಗೂ ನಿಜಾಮ ಅರಸರು ಆಳ್ವಿಕೆ ನಡೆಸಿದ್ದಾರೆ. ಆಯಾ ಕಾಲಘಟ್ಟದಲ್ಲಿ ಕಲೆ, ಸಾಹಿತ್ಯ, ಧಮ್, ಭಾಷೆ, ಸಂಸ್ಕೃತಿ ಬೆಳೆದು ಬಂದಿದೆ ಎಂದರು. ಶಿವಕೋಟ್ಯಾಚಾರ್ಯರ ವಡ್ಡಾರಾಧನೆ, ನೃಪತುಂಗನ ಕವಿರಾಜ ಮಾರ್ಗ, ವಚನ ಸಾಹಿತ್ಯ, ತತ್ವಪದ ಸಾಹಿತ್ಯ, ಸೂಫಿ ಸಂತರ ತವರೂರು ಇದಾಗಿದೆ ಎಂದು ಅಭಿಪ್ರಾಯಪಟ್ಟರು.
ಕಲಬುರಗಿ ಶಿಕ್ಷಣ ಕಾಶಿ, ಪುಸ್ತಕ ಕಾಶಿಯೂ ಅಗಿದ್ದು, ಈ ನೆಲದಲ್ಲಿ ಈವರೆಗೆ ನಾಲ್ಕು ಅಖಿಲ ಭಾರತ ಸಾಹಿತ್ಯ ಸಮ್ಮೇಳನ, 21 ಜಿಲ್ಲಾ ಸಮ್ಮೇಳನ, 9 ತಾಲೂಕು ಸಮ್ಮೇಳನ ನಡೆದಿವೆ. ಆ ಮೂಲಕ ಕಲಬುರಗಿ ಭೌತಿಕವಾಗಿ ಮತ್ತು ಬೌಧ್ಧಿಕವಾಗಿ ಸಾಕಷ್ಟು ಪ್ರಗತಿ ಕಂಡಿದೆ ಎಂದರು. ಆದರೆ ಶಾಲಾ ಕಾಲೇಜು ಹಂತದ ಪಠ್ಯ ಪುಸ್ತಕಗಳಲ್ಲಿ ಈ ಭಾಗದ ಲೇಖಕರ, ಕವಿಗಳ ಜೀವನ ಚರಿತ್ರೆಯನ್ನು ಸೇರಿಸಬೇಕು ಎಂದು ಆಗ್ರಹಿಸಿದರು.
ಜಾನಪದ ಸಮಾಜೋ ಸಂಸ್ಕೃತಿ ಕೃತಿ ಬಿಡುಗಡೆ ಮಾಡಿದ ಗುಲಬರ್ಗಾ ವಿವಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ. ಹೆಚ್.ಟಿ. ಪೋತೆ, ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಾಂಸ್ಕೃತಿಕವಾಗಿ ಅನ್ಯಾಯವಾಗಿದೆ. ಈ ನಿಟ್ಟಿನಲ್ಲಿ ಸರಕಾರಕ್ಕೆ ಮನವಿ ಮಾಡಿದರೂ ಬೇಡಿಕೆ ಈಡೇರಿಲ್ಲ. ಸೃಜನಶೀಲ ಕಥೆಗೆ ಸಿಕ್ಕ ಗೌರವ ಜನಪದ ಸಾಹಿತ್ಯಕ್ಕೆ ಸಿಗುತ್ತಿಲ್ಲ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಸಮ್ಮೇಳನದ ನೇತೃತ್ವ ವಹಿಸಿದ್ದರು. ತಾಲೂಕಾಧ್ಯಕ್ಷೆ ಶಿವಲೀಲಾ ಕಲಗುರ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತ್ಯ ಪ್ರೇರಕರಾದ ಲಕ್ಷ್ಮೀ ದತ್ತಾತ್ರೇಯ ಪಾಟೀಲ ರೇವೂರ ಅವರು ಕವಿ ಹೂವಾನಂದ ಸಲಗಾರ ಅವರ ಜಗದ ಜನಕ ಕೃತಿ ಬಿಡುಗಡೆ ಮಾಡಿದರು. ಸಮ್ಮೇಳನದ ಸ್ಮರಣ ಸಂಚಿಕೆ ಕಾವ್ಯ ಕಳಸ ಕೃತಿಯನ್ನು ಸಾಹಿತ್ಯ ಪ್ರೇರಕಿ ಜಯಶ್ರೀ ಬಸವರಾಜ ಮತ್ತಿಮೂಡ ಬಿಡುಗಡೆಗೊಳಿಸಿದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಪ್ರಮೀಳಾ ಜಾನಪ್ಪಗೌಡ ಚಿಂಚೋಳಿ ಮಾತನಾಡಿದರು. ಸ್ವಾಗತ ಸಮಿತಿಯ ದಯಾನಂದ ದೇವರಮನಿ, ವಿಶ್ವನಾಥ ಹುಲಿ, ಫಾರೂಕ ಅಹ್ಮದ್ ಮಣೂರ, ವಿಶಾಲಾಕ್ಷಿ ಮಾಯನ್ಣವರ್, ಮಲ್ಲಿಕಾರ್ಜುನ ಇಬ್ರಾಹಿಂಪುರ, ಕುಪೇಂದ್ರ ಬರಗಾಲಿ, ಪ್ರಭವ ಪಟ್ಟಣಕರ್, ರೇವಯ್ಯಾ ಸ್ವಾಮಿ, ಭಾಗ್ಯಶ್ರೀ ಮರಗೋಳ, ಕವಿತಾ ಕವಳೆ, ಧರ್ಮಣ್ಣ ಹೆಚ್ ಧನ್ನಿ, ಶಿವರಾಜ ಅಂಡಗಿ, ಶರಣರಾಜ ಚಪ್ಪರಬಂದಿ, ಕಲ್ಯಾಣಕುಮಾರ ಶೀಲವಂತ, ಶಕುಂತಲಾ ಪಾಟೀಲ, ಜ್ಯೋತಿ ಕೋಟನೂರ, ಜಯಶ್ರೀ ಜಮಾದಾರ, ಚನ್ನಮಲ್ಲಯ್ಯ ಹಿರೇಮಠ, ಕಲ್ಯಾಣಕುಮಾರ ಸಂಗಾವಿ, ಮಹಾನಂದಾ ಹುಲಿ, ಎಸ್ ಕೆ ಬಿರಾದಾರ, ನಾಗಪ್ಪ ಸಜ್ಜನ್, ಸಂತೋಷ ಕುಡಳ್ಳಿ, ಸುರೇಶ ದೇಶಪಾಂಡೆ, ಸುರೇಶ ಲೇಂಗಟಿ, ಶರಣಬಸಪ್ಪ ಕೋಬಾಳ, ವೀರಭದ್ರಪ್ಪ ಗುರುಮಿಠಕಲ್, ಎಂ ಎನ್ ಸುಗಂಧಿ, ಶಿವಾನಂದ ಸುರವಸೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಗಮನ ಸೆಳೆದ ಸಾಹಿತ್ಯ ಸಿಂಚನ ಗೋಷ್ಠಿ:
ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ ಅಧ್ಯಕ್ಷತೆಯಲ್ಲಿ ನಡೆದ ಸಾಹಿತ್ಯ ಸಿಂಚನ ಗೋಷ್ಠಿಯಲ್ಲಿ ವಿಮರ್ಶಾ ನೋಟಗಳು-ಸಾಹಿತ್ಯದ ಮೌಲ್ಯಗಳ ಕುರಿತು ಡಾ. ಜಗನ್ನಾಥ ತರನಳ್ಳಿ, ಆಧುನಿಕ ಸಾಹಿತ್ಯಕ್ಕಿರುವ ಸವಾಲುಗಳು-ಪರಿಹಾರೋಪಾಯಗಳು ಕುರಿತು ಡಾ. ಅಪ್ಪಗೆರೆ ಸೋಮಶೇಕರ, ಸಮ್ಮೇಳನಾಧ್ಯಕ್ಷರ ಬದುಕು ಬರಹದ ಕುರಿತು ಡಾ. ಸಂತೋಷಕುಮಾರ ಕಂಬಾರ ಮಾತನಾಡಿದರು.
ವಿಠಲ ಬೀಮನ್, ಲತಾ ದೇಶಪಾಂಡೆ,. ನರಸಿಂಗರಾವ ಹೇಮನೂರ, ಸೈಯ್ಯದ್ ನಝೀರುದ್ದಿನ್ ಮುತ್ತವಲ್ಲಿ, ಸುನೀತ ಮಾಳಗಿ, ಶೇಖ್ ಸಮ್ರೀನ್, ಈರಣ್ಣಾ ಸೋನಾರ, ಕುಶಾಲ ಧರ್ಗಿ ಇತರರು ಉಪಸ್ಥಿತರಿದ್ದರು.
ಕಾವ್ಯ ಕಿರಣ ಎಂಬ ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಲೇಖಕಿ ಡಾ. ಜಯದೇವಿ ಗಾಯಕವಾಡ, ಕಾವ್ಯ ಪರಂಪರೆಗೆ ಅಧ್ಯಯನ ಮುಖ್ಯ. ಆಗ ಮಾತ್ರ ಕಾವ್ಯಕ್ಕೆ ಹೊಸ ಸ್ಪರ್ಶ ಕೊಡಲು ಸಾಧ್ಯ. ಅನುಭವದ ಕೊರತೆಯಿಂದ ಕಾವ್ಯ ಮಿಡಿಯುತ್ತಿಲ್ಲ. ಬದುಕು ಮತ್ತು ಬರಹ ಒಂದಾಗಬೇಕು. ಸಾಹಿತಿಗೆ ವರ್ತಮಾನದ ತಲ್ಲಣಗಳಿಗೆ ಸ್ಪಂದಿಸಬೇಕು ಹಾಗೂ ಸಾಮಾಜಿಕ ಜವಾಬ್ದಾರಿ ಇರಬೇಕಾಗಿದೆ ಎಂದರು.
ಪತ್ರಕರ್ತ-ಸಾಹಿತಿ ಡಾ. ಶಿವರಂಜನ್ ಸತ್ಯಂಪೇಟೆ ಸಮಾರೋಪ ನುಡಿಗಳನ್ನಾಡಿ, ಕನ್ನಡ ಭಾಷೆ ಉಳಿಯಬೇಕಾದರೆ ಕನ್ನಡ ಸಾಹಿತ್ಯವನ್ನು ಓದಬೇಕು. ಇಂದಿನ ಯುವಕರಿಗೆ ಸಾಹಿತ್ಯದ ಸಂಗವಿಲ್ಲದಿರುವುದರಿoದ ಮನುಷ್ಯ ಸಂಬoಧಗಳು ಹಾಳಾಗುತ್ತಿವೆ. ಸಾಹಿತ್ಯವೆಂದರೆ ಬರೀ ಮಾತಲ್ಲ. ಅದು ನುಡಿದರೆ ಮುತ್ತಿನ ಹಾರ, ಮಾತೆಂಬುದು ಜ್ಯೋತಿರ್ಲಿಂಗ ಇದ್ದಂತೆ. ಒಂದು ನಾಡಿನ ಶ್ರೇಷ್ಠತೆ ಸಾಹಿತ್ಯದಲ್ಲಿಯೇ ಇದೆ ಎಂದರು.







