ಕಲಬುರಗಿ | ಸೆ.6ರಂದು ತಾಲೂಕು 9 ನೇ ಕನ್ನಡ ಸಾಹಿತ್ಯ ಸಮ್ಮೇಳನ

ಕಲಬುರಗಿ: ಸೆ.6 ರಂದು ಜರುಗಲಿರುವ ಕಲಬುರಗಿ ತಾಲೂಕು 9 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಪೂರಕವಾಗಿ ರಚಿಸಲ್ಪಟ್ಟಿರುವ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡ ಉದ್ಯಮಿ ದಯಾನಂದ ದೇವರಮನಿ ಹಾಗೂ ಕಾರ್ಯಾಧ್ಯಕ್ಷ ವಿಶ್ವನಾಥ ಎನ್ ಹುಲಿ ಅವರನ್ನು ನಗರದ ಕನ್ನಡ ಭವನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಾಡಿನ ಹಿರಿಯ ಸಾಹಿತಿ ಡಾ.ಶ್ರೀಶೈಲ ನಾಗರಾಳ ಅವರು ಆಯ್ಕೆಯಾಗಿದ್ದು, ಈ ಸಮ್ಮೇಳನ ವಿಶೇಷ ರೀತಿಯಲ್ಲಿ ಆಯೋಜಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ನಮ್ಮ ಕನ್ನಡ ಸಾಹಿತ್ಯ-ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಸಮ್ಮೇಳನ ಪೂರಕವಾಗಲಿದ್ದು, ಹೊಸ ಬರಹಗಾರರಿಗೆ ಪ್ರೋತ್ಸಾಹ ಕೊಡುವಂತಾಗಲಿ ಎಂದು ಆಶಿಸಿದರು.
ಸ್ವಾಗತ ಸಮಿತಿ ಅಧ್ಯಕ್ಷ ದಯಾನಂದ ದೇವರಮನಿ ಮಾತನಾಡಿ, ಸಮ್ಮೇಳನದ ಯಶಸ್ವಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. ಜಿಲ್ಲೆಯ ನೆಲ ಪ್ರತಿಭಾವಂತರ ನೆಲೆವೀಡಾಗಿದೆ. ಇಲ್ಲಿನ ಸಂಸ್ಕೃತಿ-ಪರಂಪರೆಯನ್ನು ಮುಂದಿನ ಪೀಳಿಗೆ ಮುಟ್ಟಿಸುವಲ್ಲಿ ಈ ಸಮ್ಮೇಳನ ಜರುಗಲಿ ಎಂದು ಸಲಹೆ ನೀಡಿದರು.
ಕಸಾಪ ತಾಲೂಕಾಧ್ಯಕ್ಷೆ ಶಿವಲೀಲಾ ಎಸ್ ಕಲಗುರ್ಕಿ, ಜಿಲ್ಲಾ ಕಸಾಪ ಕಾರ್ಯದರ್ಶಿ ಧರ್ಮಣ್ಣ ಎಚ್.ಧನ್ನಿ, ಪ್ರಮುಖರಾದ ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ಕುಪೇಂದ್ರ ಬರಗಾಲಿ, ವಿಶಾಲಾಕ್ಷಿ ಮಾಯಣ್ಣವರ್, ಮಲ್ಲಿಕಾರ್ಜುನ ಇಬ್ರಾಹಿಂಪುರ, ಪ್ರಭವ ಪಟ್ಟಣಕರ್, ಈರಣ್ಣಾ ಸೋನಾರ, ಕವಿತಾ ಕಾವಳೆ, ಲಲಿತಾ ಪಾಟೀಲ, ಸುನೀತಾ ಮಾಳಗೆ, ಶೇಖ್ ಸಮ್ರೀನ್, ನಾಗಪ್ಪ ಸಜ್ಜನ್, ಡಾ. ರೆಹಮಾನ್ ಪಟೇಲ್, ರೇವಣಸಿದ್ದ ಗುಂಡಗುರ್ತಿ, ಶಿವಾನಂದ ಮಠಪತಿ, ಚಂದ್ರಕಾಂತ ಸುರನ್, ಎಂ.ಎನ್. ಸುಗಂಧಿ, ರಾಜೇಂದ್ರ ಮಾಡಬೂಳ, ದಿನೇಶ ಮದಕರಿ, ಶಿವಾನಂದ ಪೂಜಾರಿ, ಮಲ್ಲಿನಾಥ ಸಂಗಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







