ಕಲಬುರಗಿ | ಪ್ರಿಯಾಂಕ್ ಖರ್ಗೆ ಅವರ ಬೆಳವಣಿಗೆಯನ್ನು ಕೇಂದ್ರ ಬಿಜೆಪಿ ಸರಕಾರ ಸಹಿಸುತ್ತಿಲ್ಲ: ಶಾಸಕ ಅಲ್ಲಂಪ್ರಭು ಪಾಟೀಲ್

ಕಲಬುರಗಿ: ಜಿಲ್ಲಾ ಉಸ್ತುವಾರಿ ಸಚಿವ, ಆರ್ಡಿಪಿಆರ್ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬೊಸ್ಟ್ನ್ನಲ್ಲಿ ನಡೆಯಲಿರುವ ''ಬೋಸ್ಟನ್ ಬಯೋ’ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಜರುಗಲಿರುವ ''''ಡಿಸೈನ್ ಆಟೋಮೇಷನ್ ಕಾನ್ಫರೆನ್ಸ್''''ನಲ್ಲಿ ಭಾಗವಹಿಸಲು ಅಮೇರಿಕಾಕ್ಕೆ ಹೋಗುವ ದಾರಿಯಲ್ಲಿ ಅವರಿಗೆ ವೀಸಾ ನಿರಾಕರಿಸಿ ಅಮೇರಿಕಾಕ್ಕೆ ಹೋಗೋದನ್ನು ತಡೆದಿರುವ ಕೇಂದ್ರ ಸರ್ಕಾರದ ಕ್ರಮವನ್ನು ಶಾಸಕ ಅಲ್ಲಂಪ್ರಭು ಪಾಟೀಲ್ ಖಂಡಿಸಿದ್ದಾರೆ.
ಅಮೇರಿಕಾದಲ್ಲಿ ಎರಡು ಪ್ರಮುಖ ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಕರ್ನಾಟಕದ ನಿಯೋಗವನ್ನು ಅವರು ಮುನ್ನಡೆಸಬೇಕಿತ್ತು. ರಾಜ್ಯದ ಐಟಿ ಮತ್ತು ಬಿಟಿ ವಲಯಕ್ಕೆ ಜಾಗತಿಕ ಮಟ್ಟದಲ್ಲಿ ಹೊಸ ಅವಕಾಶಗಳನ್ನು ಮತ್ತು ಹೂಡಿಕೆಗಳನ್ನು ತರುವುದು ಈ ಭೇಟಿಯ ಪ್ರಮುಖ ಉದ್ದೇಶವಾಗಿತ್ತು. ಆದರೆ, ಕೇಂದ್ರ ಸರ್ಕಾರ ಅಮೆರಿಕಾಗೆ ತೆರಳಲು ಅವಕಾಶ ನೀಡದಿರುವುದು ಕನ್ನಡಿಗರಿಗೆ, ಕಲಬುರಗಿ ಜನತೆಗೆ ಮಾಡಿರುವ ಅವಮಾನವಾಗಿದೆ ಎಂದು ಶಾಸಕ ಪಾಟೀಲ್ ಕೇಂದ್ರದ ನಡೆಯನ್ನು ಟೀಕಿಸಿದ್ದಾರೆ.
ಐಟಿಬಿಟಿ ಸಚಿವರಾಗಿ ಪ್ರಿಯಾಂಕ್ ಮಾಡಿರುವ ಸಾಧನೆ ದೊಡ್ಡದಾಗಿದೆ. ಅದಕ್ಕೇ ಇವರನ್ನೇ ಈ ಖಾತೆಗೆ ಸಚಿವರನ್ನಾಗಿಸುವಂತೆ ಐಟಿ ಕಂಪನಿಗಳೇ ದುಂಬಾಲು ಬೀಳುತ್ತಿವೆ. ಈ ಪರಿಯಲ್ಲಿ ಐಟಿ ರಂಗಕ್ಕೆ ಹೊಸತನ ತುಂಬುವ ದಿಶೆಯಲ್ಲಿ ಖರ್ಗೆ ಶ್ರಮಿಸುತ್ತಿರುವಾಗ ಅವರಿಗೆ ಅಮೇರಿಕಾಕ್ಕೆ ಹೋಗಲು, ರಾಜ್ಯಕ್ಕೆ ಬಂವಾಳ ತರವ ಕೆಲಸ ಕೇಂದ್ರ ಮಾಡಬೇಕಿತ್ತು. ಅದೆಲ್ಲ ಬಿಟ್ಟು ಚಿಲ್ಲರೆ ರಾಜಕೀಯ ಮಾಡಿ ಅಮೇರಿಕಾಕ್ಕೆ ಹೋಗದಂತೆ ತಡೆದಿದೆ, ಇದನ್ನು ಪ್ರಜ್ಞಾವಂತರೆಲ್ಲರೂ ಖಂಡಿಸುತ್ತಾರೆ. ಪ್ರಿಯಾಂಕ್ ಅವರ ಭೇಟಿ ವೈಯಕ್ತಿಕವಾಗಿರಲಿಲ್ಲ, ರಾಜ್ಯದ ಏಳಿಗೆಗಾಗಿ ಆಗಿತ್ತು. ಇದನ್ನರಿತಾದರೂ ಕೇಂದ್ರ ಅವಕಾಶ ನೀಡಬೇಕಿತ್ತು ಎಂದು ಅವರು ತಿಳಿಸಿದ್ದಾರೆ.







