ಕಲಬುರಗಿ | ಶಿಕ್ಷಕರ ಕೈಯಲ್ಲಿ ಮಕ್ಕಳ ಭವಿಷ್ಯವಿದೆ : ಡಾ.ಚಂದ್ರಕಾಂತ ಕೆಳಮನಿ

ಕಲಬುರಗಿ: ಶಿಕ್ಷಕ ಕೇವಲ ವ್ಯಕ್ತಿಯಲ್ಲ, ಆ ವೃತ್ತಿ ಮಕ್ಕಳ ಮಕ್ಕಳ ಭವಿಷ್ಯ ರೂಪಿಸುವ ಶಕ್ತಿ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಚಂದ್ರಕಾಂತ ಕೆಳಮನಿ ಹೇಳಿದರು.
ಅವರು ಚಿತ್ತಾಪುರ ತಾಲ್ಲೂಕಿನ ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪರ್ಚನೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ಮಕ್ಕಳಲ್ಲಿ ನಾಕಾರಾತ್ಮಕ ಭಾವನೆಗಳನ್ನು ತುಂಬದೆ ನಿಮ್ಮಿಂದ ಎಲ್ಲವೂ ಸಾಧ್ಯವೆಂಬ ಸಕಾರಾತ್ಮಕ ಭಾವನೆಗಳನ್ನು ತುಂಬುವ ಕೆಲಸ ಮಾಡಬೇಕು. ಶಿಕ್ಷಕ ವೃತ್ತಿ ಎನ್ನುವುದು ಜಗತ್ತಿನ ಅತ್ಯಂತ ಪವಿತ್ರ ವೃತ್ತಿ ಎಂದು ಕರೆಯಲ್ಪಡುತ್ತದೆ. ಕಾಲಕ್ಕೆ ತಕ್ಕಂತೆ ನಮ್ಮ ವೃತ್ತಿಯ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಪ್ರಾಮಾಣಿಕವಾಗಿ ಮತ್ತು ಅಷ್ಟೇ ಭದ್ಧತೆಯಿಂದ ಕೆಲಸ ಮಾಡುವ ಮೂಲಕ ಮಕ್ಕಳ ಭವಿಷ್ಯ ರೂಪಿಸುವ ಕೆಲಸ ಮಾಡಿದಾಗ ಮಾತ್ರ ಶಿಕ್ಷಕರ ಶ್ರಮ ಸಾರ್ಥಕ ಎಂದರು.
ಕಾರ್ಯಕ್ರಮದ ಸಾನಿದ್ಯವನ್ನು ಸಂಸ್ಥೆಯ ಅಧ್ಯಕ್ಷ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಿದ್ದರು. ಆಡಳಿತ ಮಂಡಳಿಯ ಉಪಾಧ್ಯಕ್ಷ ಚೆನ್ನಣ್ಣ ಬಾಳಿ, ಸಹಕಾರ್ಯದರ್ಶಿ ಈಶ್ವರ ಜಿ ಬಾಳಿ, ಸದಸ್ಯರಾದ ಸಿದ್ದಲಿಂಗ ಜ್ಯೋತಿ, ಜಾಕೀರ್ ಹುಸೇನ್ ಫತ್ತೆಖಾನ್ ವೇದಿಕೆ ಮೇಲಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ವಿವಿಧ ಪ್ರಕಲ್ಪಗಳ ಶಿಕ್ಷಕ ಬಳಗ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮೇಘನಾ ನಿರೂಪಿಸಿದರೆ, ರಶ್ಮಿಕಾ, ಭಾಗ್ಯಶ್ರೀ ಪ್ರಾರ್ಥಿಸಿದರು.





