ಕಲಬುರಗಿ | ರೋಗಿ ಆರೈಕೆಯಲ್ಲಿ ವೈದ್ಯರಷ್ಟೇ ನರ್ಸ್ಗಳ ಪಾತ್ರವು ಪ್ರಮುಖ : ಶಶೀಲ್ ಜಿ.ನಮೋಶಿ

ಕಲಬುರಗಿ : ರೋಗಿಗಳ ಆರೋಗ್ಯ ಪಾಲನೆಯಲ್ಲಿ ವೈದ್ಯರಷ್ಟೇ ನರ್ಸ್ಗಳ ಪಾತ್ರವೂ ಮಹತ್ವದ್ದಾಗಿದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಹೇಳಿದರು.
ನಗರದ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿ ಹಾಗೂ ಶುಚಿತ್ವ ಕಾರ್ಮಿಕರ ಆಶ್ರಯದಲ್ಲಿ ಆಯೋಜಿಸಲಾದ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನರ್ಸಿಂಗ್ ಸಿಬ್ಬಂದಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳನ್ನು ದೇವರಂತೆ ಕಾಣಬೇಕು. ವ್ಯವಧಾನದಿಂದ ಕೆಲಸ ಮಾಡಿದರೆ ಮಾತ್ರ ಉತ್ತಮ ಫಲ ದೊರೆಯುತ್ತದೆ. ನಮ್ಮ ಬಸವೇಶ್ವರ ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುತ್ತಿರುವುದು ನನಗೆ ಸಂತೋಷ ತಂದಿದೆ ಎಂದು ನಮೋಶಿ ಹೇಳಿದರು.
ಶುಚಿತ್ವ ಕಾರ್ಮಿಕರು ಆಸ್ಪತ್ರೆಯ ಜೀವಾಳ. ಆಸ್ಪತ್ರೆಯ ಯಶಸ್ಸಿಗೆ ವೈದ್ಯರು ಮತ್ತು ನರ್ಸರೊಂದಿಗೆ ಸ್ವಚ್ಛತಾ ಸಿಬ್ಬಂದಿಯ ಸಹಕಾರವೂ ಅತ್ಯಂತ ಅವಶ್ಯಕ. ಇಲ್ಲಿ ವೈದ್ಯರು, ನರ್ಸರು ಮತ್ತು ಶುಚಿತ್ವ ಕಾರ್ಮಿಕರ ಒಟ್ಟುಗೂಡಿದ ಒಳ್ಳೆಯ ಕಾರ್ಯದಿಂದ ಅನೇಕ ರೋಗಿಗಳು ಚಿಕಿತ್ಸೆಗಾಗಿ ಈ ಆಸ್ಪತ್ರೆಗೆ ಬರುತ್ತಿದ್ದಾರೆ ಎಂದು ತಿಳಿಸಿದರು.
ನಂತರ ನರ್ಸಿಂಗ್ ಸಿಬ್ಬಂದಿ ಹಾಗೂ ಶುಚಿತ್ವ ಕಾರ್ಮಿಕರಿಂದ ಸನ್ಮಾನ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಶರಣಗೌಡ ಪಾಟೀಲ್, ವೈಸ್ ಡೀನ್ ಡಾ.ವಿಜಯಕುಮಾರ್ ಕಪ್ಪಿಕೇರಿ, ವೈದ್ಯಕೀಯ ಅಧೀಕ್ಷಕ ಡಾ.ಮಲ್ಲಿಕಾರ್ಜುನ ತೇಗನೂರ, ಆಡಳಿತಾಧಿಕಾರಿ ಡಾ.ಎಂ.ಆರ್.ಪೂಜಾರಿ, ಡಾ.ಗುರುಲಿಂಗಪ್ಪ ಪಾಟೀಲ್, ವಿಶೇಷಾಧಿಕಾರಿ ಡಾ.ಪರಮೇಶ ಬಿರಾದಾರ, ಮಾಧ್ಯಮ ಸಂಯೋಜಕ ಐ.ಕೆ.ಪಾಟೀಲ್ ಹಾಗೂ ಸಿಬ್ಬಂದಿ ಹಾಜರಿದ್ದರು.







