ಕಲಬುರಗಿ | ಮಕ್ಕಳ ಶೈಕ್ಷಣಿಕ ಪ್ರಗತಿಗೆ ಗುರುಗಳ-ಪಾಲಕರ ಪಾತ್ರ ಮುಖ್ಯ : ನಿಂಗಮ್ಮ ಕಟ್ಟಿಮನಿ

ಕಲಬುರಗಿ : ಮಕ್ಕಳ ಶೈಕ್ಷಣಿಕ ಪ್ರಗತಿಗೆ ಗುರುಗಳ-ಪಾಲಕರ ಪಾತ್ರ ಬಹಳ ಮುಖ್ಯವಾದುದು ಎಂದು ಕಲಬುರಗಿ ಮಹಾನಗರ ಪಾಲಿಕೆಯ ಸದಸ್ಯೆ ನಿಂಗಮ್ಮ ಕಟ್ಟಿಮನಿ ಹೇಳಿದರು.
ಅವರು ಕಲಬುರಗಿ ನಗರದ ತಾರಫೈಲ್ ಬಡಾವಣೆಯ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಪಾಲಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಅಕ್ಷರ ಕಲಿಸಿದ ಗುರುವಿಗೆ ಗೌರವ ಕೊಡುವುದನ್ನು ಪ್ರತಿಯೊಬ್ಬರೂ ಕಲಿಯಬೇಕು. ಜೀವನದಲ್ಲಿ ಆದರ್ಶ ಗುಣಗಳನ್ನು ಆಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಮನೆಯೇ ಮಕ್ಕಳಿಗೆ ಮೊದಲ ಪಾಠಶಾಲೆ. ನೀತಿ ಪಾಠಗಳು ಅಲ್ಲಿಂದಲೇ ಶುರುವಾಗಬೇಕು ಎಂದು ಕರೆ ನೀಡಿದರು.
ತಾಪಂ ಇಓ ಮಾನಪ್ಪ ಕಟ್ಟಿಮನಿ ಮಾತನಾಡಿ, ಶಾಲೆಗೆ ದಾಖಲಾತಿ ಮಾಡಿದ ಕೂಡಲೇ ಪಾಲಕರ ಜವಾಬ್ದಾರಿ ಮತ್ತು ಹೊಣೆಗಾರಿಕೆ ಮುಗಿಯುವುದಿಲ್ಲ. ನಿತ್ಯ ಶಾಲೆಯಲ್ಲಿ ಮಕ್ಕಳು ಏನು ಕಲಿಯುತ್ತಿದ್ದಾರೆ? ಅವರಿಗೆ ಏನು ಅರ್ಥ ಆಗಿದೆ ಎಂಬುದರ ಬಗ್ಗೆಯೂ ಪಾಲಕರು ತಿಳಿದುಕೊಳ್ಳಬೇಕು. ಪ್ರತಿನಿತ್ಯ ಮಕ್ಕಳನ್ನು ಶಾಲೆಗೆ ಕಳಿಸಬೇಕೆಂದು ತಿಳಿಸಿದರು.
ದಕ್ಷಿಣ ವಲಯದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ತಾರಫೈಲ್ ಮಾತನಾಡಿ, ಶಾಲೆಯಲ್ಲಿ ನಡೆದ ಪಾಠ, ಪ್ರವಚನಗಳ ಬಗ್ಗೆ ಮಕ್ಕಳಿಂದ ಮಾಹಿತಿ ಪಡೆದುಕೊಳ್ಳಬೇಕು. ನೋಟ್ ಪುಸ್ತಕಗಳನ್ನು ಪರಿಶೀಲನೆ ನಡೆಸಬೇಕು. ಆಗ ಮಕ್ಕಳಿಗೂ ಪೋಷಕರ ಕಾಳಜಿ ಅರ್ಥವಾಗುತ್ತದೆ. ಹೋಮ್ ವರ್ಕ್ ಗಳನ್ನೂ ಅವರು ಸಮರ್ಪಕವಾಗಿ ಮಾಡುತ್ತಾರೆ. ಕಲಿಕೆಯಲ್ಲೂ ಒಂದು ನಿರಂರತೆ ಉಳಿಯುತ್ತದೆ. ಕಲಿಕೆಯ ಮೇಲಿನ ಆಸಕ್ತಿಯೂ ಉಂಟಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಆಯುಕ್ತರ ಕಚೇರಿಯ ವಿಷಯ ಪರಿವೀಕ್ಷಕರಾದ ನಾಗೇಂದ್ರಪ್ಪ ಅವರಾದಿ, ಮುಖ್ಯಗುರುಗಳಾದ ಡಾ.ರಾಜಕುಮಾರ ಪಾಟೀಲ, ಡಾ.ಪ್ರಕಾಶ ರಾಠೋಡ, ಎಸ್.ಡಿ.ಎಮ್.ಸಿ ಅಅಧ್ಯಕ್ಷ ದೇವೆಂದ್ರಪ್ಪ, ಶಿಕ್ಷಕರಾದ ಅನೀಲುಮಾರ ದೇಸಾಯಿ, ಪರಮೇಶ್ವರ, ರೇಖಾ ಕಟ್ಟಿಮನಿ,ಶಾಂತಾಬಾಯಿ,ರೇಖಾ ಮಾವೀನ್,ಈರಣ್ಣ ಕೆಂಭಾವಿ ಇತರರು ಇದ್ದರು.







