ಕಲಬುರಗಿ | ಬಾಹ್ಯಾಕಾಶ ಕ್ಷೇತ್ರಕ್ಕೆ ರಾಜ್ಯದ ಕೊಡುಗೆ ಅಪಾರ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ಬಾಹ್ಯಾಕಾಶ ಕ್ಷೇತ್ರಕ್ಕೆ ರಾಜ್ಯದ ಕೊಡುಗೆ ಅಪಾರವಾಗಿದೆ. ಬೆಂಗಳೂರು ಬಾಹ್ಯಾಕಾಶದ ರಾಜಧಾನಿ ಎಂದು ಹೆಸರು ಮಾಡಿದೆ. ಹೆಚ್ಎಎಲ್ ಹಾಗೂ ಇಸ್ರೋದಂತಹ ಮಹತ್ತರ ಸಂಸ್ಥೆಗಳನ್ನು ಹೊಂದಿರುವ ಹೆಗ್ಗಳಿಕೆ ರಾಜ್ಯಕ್ಕೆ ಇದೆ. ಜೊತೆಗೆ ಬಾಹ್ಯಾಕಾಶ ಕ್ಷೇತ್ರಕ್ಕೆ ಬೇಕಾಗುವ ತಾಂತ್ರಿಕ ಅವಶ್ಯಕತೆಗಳ ತಯಾರಿಕೆ ಹಾಗೂ ರಕ್ಷಣಾ ಕ್ಷೇತ್ರದ ಸಂಶೋಧನೆಯಲ್ಲಿ ಶೇ.60 ರಷ್ಟು ಕೊಡುಗೆ ನೀಡಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.
ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಸ್ ಆರ್ ಎನ್ ಮೆಹ್ತಾ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಅವರು ಮಾತನಾಡಿದರು.
ತಂತ್ರಜ್ಞಾನದ ಶರವೇಗದ ಬೆಳವಣಿಗೆಗೆ ಅನುಗುಣವಾಗಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದನ್ನು ಗಮನದಲ್ಲಿಟ್ಟಿಕೊಂಡು ವಿದ್ಯಾರ್ಥಿಗಳು ಸಾಧನೆಯ ಹಾದಿಯೆಡೆಗೆ ದಿಟ್ಟ ಹೆಜ್ಜೆಗಳನ್ನಿಟ್ಟು ಸಾಗಬೇಕು ಎಂದು ಹೇಳಿದರು.
ಎಸ್ಆರ್ ಎನ್ ಮೆಹ್ತಾ ಶಾಲೆಯ ಹನ್ನೊಂದು ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಕಳೆದ ಜುಲೈ ತಿಂಗಳಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ಸಂಘದ ಅಡಿಯಲ್ಲಿ ಅಮೇರಿಕಾದ ಫ್ಲಾರಿಡಾದಲ್ಲಿ ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ಜರುಗಿದ ಅಂತರಾಷ್ಟ್ರೀಯ ಮಟ್ಟದ ಕಾರ್ಯಾಗಾರದಲ್ಲಿ ಭಾಗವಹಿಸಿ ಸುಸ್ಥಿರ ಬಾಹ್ಯಾಕಾಶ ವಸಾಹತು ಹಾಗೂ ಭವಿಷ್ಯತ್ತಿನಲ್ಲಿ ವೈಜ್ಞಾನಿಕ ನಿಖರತೆ ಕುರಿತು ತಾವೇ ಪ್ರಸ್ತುತ ಪಡಿಸಿದ ' ಇರಾ ' ಎನ್ನುವ ಯೋಜನೆಯನ್ನು ಪ್ರಸ್ತುತಪಡಿಸಿ ಪ್ರಥಮ ಬಹುಮಾನ ಪಡೆದ ಹಿನ್ನೆಲೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಸಚಿವರೊಂದಿಗೆ ಹಂಚಿಕೊಂಡರು.
ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಪೊಲೀಸ್ ಕಮಿಷನರ್ ಡಾ.ಶರಣಪ್ಪ ಎಸ್.ಡಿ., ಎಸ್ಪಿ ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಕಮಿಷನರ್ ಅವಿನಾಶ್ ಶಿಂಧೆ, ಸಹಾಯಕ ಆಯುಕ್ತೆ ಸಾಹಿತ್ಯ, ಡಿಡಿಪಿಐ ಸೂರ್ಯಕಾಂತ ಮದಾನೆ ಸೇರಿದಂತೆ ಎಸ್ಆರ್ ಎನ್ ಮೆಹ್ತಾ ಶಾಲೆಯ ಆಡಳಿತ ವರ್ಗದವರು ಹಾಗೂ ಸಿಬ್ಬಂದಿ ಹಾಜರಿದ್ದರು.







