ಕಲಬುರಗಿ | ಸೆ.27ರಿಂದ ಮೂರು ದಿನ ರಂಗ ದಸರಾ ನಾಟಕೋತ್ಸವ: ಸುಜಾತಾ ಜಂಗಮಶೆಟ್ಟಿ

ಕಲಬುರಗಿ: ಕರ್ನಾಟಕ ರಂಗಾಯಣ ಕಲಬುರಗಿ ವತಿಯಿಂದ ನಗರದ ಡಾ.ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿ ಇದೇ 27 ರಿಂದ 29ರವರೆಗೆ ಮೂರು ದಿನಗಳ ಕಾಲ ರಂಗ ದಸರಾ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.27 ರಂದು ಸಂಜೆ 6 ಗಂಟೆಗೆ ನಡೆಯುವ ನಾಟಕೋತ್ಸವ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಉದ್ಘಾಟಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಜಿಪಂ ಸಿಇಒ ಭಂವರ್ಸಿoಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಕಲಬುರಗಿ ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟೆ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ಆಗಮಿಸಲಿದ್ದು, ಡಾ. ಸುಜಾತಾ ಜಂಗಮಶೆಟ್ಟಿ ಅಧ್ಯಕ್ಷತೆಯಲ್ಲಿ ಡಾ.ವಿಶ್ವರಾಜ ಪಾಟೀಲ್ ನಿರ್ದೇಶನದ ಭೀಷ್ಮ ರಾಮಯ್ಯ ರಚನೆಯ ಭರ್ಜರಿ ಭಾಗ್ಯ ನಾಟಕವನ್ನು ನಗರದ ವಿಶ್ವರಂಗ ಪ್ರಸ್ತುತ ಪಡಿಸಲಿದೆ ಎಂದರು.
ಸೆ.28 ರಂದು ಸಂಜೆ 6ಕ್ಕೆ ಸಂಗ್ಯಾ ಬಾಳ್ಯ ನಾಟಕವನ್ನು ಮರಿಯಮ್ಮನಹಳ್ಳಿಯ ರಂಗ ಬಿಂಬ ತಂಡ ಪ್ರದರ್ಶನ ಮಾಡಲಿದ್ದು, ನಾಡೋಜ ಡಾ.ಚಂದ್ರಶೇಖರ ಕಂಬಾರ ರಚನೆ, ಬಿ.ಎಂ.ಎಸ್.ಪ್ರಭು ನಿರ್ದೇಶನ ಮಾಡಲಿದ್ದಾರೆ ಎಂದರು.
ಸೆ.29 ರಂದು ಸಂಜೆ 6ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಶಾಸಕ ಎಂ.ವೈ.ಪಾಟೀಲ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ಡಾ.ಮೀನಾಕ್ಷಿ ಬಾಳಿ, ಸುಭಾಷ ರಾಠೋಡ, ಬಾಬುರಾವ ಯಡ್ರಾಮಿ ಪಾಲ್ಗೊಳ್ಳುವ ಕಾರ್ಯಕ್ರಮದಲ್ಲಿ ನಾನು ಅಧ್ಯಕ್ಷತೆ ವಹಿಸಿಕೊಳ್ಳುವೆ ಎಂದರು.
ನಂತರ ಲಿಂ.ಶ್ರೀ ಗುರುಲಿಂಗೇಶ್ವರ ಮಹಾರಾಜರು ರಚನೆಯ ಭೀಮವಿಲಾಸ ಅರ್ಥಾತ್ ಕೀಚಕ ವಧೆ ಬಯಲಾಟವನ್ನು ಅಫಜಲಪುರದ ಶ್ರೀ ಸಿದ್ಧರಾಮೇಶ್ವರ ಹವ್ಯಾಸಿ ಬೈಲಾಟ ಮಂಡಳಿ ಪ್ರಸ್ತುತ ಪಡಿಸಲಿದೆ ಎಂದರು.







