Kalaburagi | ಶಸ್ತ್ರಚಿಕಿತ್ಸೆಯಿಲ್ಲದೆ ಹಲವು ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ಸಾಧ್ಯ: ಡಾ. ಸಂಕೇತ್ ಕುಲಕರ್ಣಿ

ಕಲಬುರಗಿ : ಪ್ರಮುಖ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದೆ ಅನೇಕ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಆಧುನಿಕ ವೈದ್ಯಕೀಯ ವಿಭಾಗವಾದ ಇಂಟರ್ವೆನ್ಷನಲ್ ರೇಡಿಯಾಲಜಿ (IR) ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಬೇಕಿದೆ ಎಂದು ಸಿಕಂದರಾಬಾದ್ನ ಯಶೋಧ ಆಸ್ಪತ್ರೆಯ ಇಂಟರ್ವೆನ್ಷನಲ್ ರೇಡಿಯಾಲಜಿಸ್ಟ್ ಡಾ. ಸಂಕೇತ್ ಕುಲಕರ್ಣಿ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಟ್ರಾಸೌಂಡ್, ಸಿಟಿ ಸ್ಕ್ಯಾನ್ ಹಾಗೂ ಆಂಜಿಯೋಗ್ರಫಿ ಸೇರಿದಂತೆ ಅತ್ಯಾಧುನಿಕ ಇಮೇಜಿಂಗ್ ತಂತ್ರಜ್ಞಾನಗಳ ನೆರವಿನಿಂದ ಸೂಜಿ ಅಥವಾ ಸಣ್ಣ ಕ್ಯಾಥೆಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದ ರೋಗಿಗಳಿಗೆ ಕಡಿಮೆ ನೋವು, ಅತಿ ಕಡಿಮೆ ಗಾಯದ ಗುರುತು, ಆಸ್ಪತ್ರೆಯಲ್ಲಿ ಕಡಿಮೆ ದಿನಗಳ ವಾಸ ಹಾಗೂ ಶೀಘ್ರ ಚೇತರಿಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಪಾರ್ಶ್ವವಾಯು (ಸ್ಟ್ರೋಕ್) ಕುರಿತು ಮಾತನಾಡಿದ ಅವರು, “ಸ್ಟ್ರೋಕ್ ಚಿಕಿತ್ಸೆಯಲ್ಲಿ ಸಮಯವೇ ಜೀವ. ಪ್ರತಿಯೊಂದು ನಿಮಿಷವೂ ಅಮೂಲ್ಯ. ಪ್ರತಿನಿಮಿಷಕ್ಕೂ ಲಕ್ಷಾಂತರ ಮೆದುಳಿನ ಕೋಶಗಳು ಹಾನಿಗೊಳಗಾಗುತ್ತವೆ. ಆದ್ದರಿಂದಲೇ Time is Brain ಎಂಬ ಮಾತು ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆತರೆ ಜೀವ ಉಳಿಯುವುದರ ಜೊತೆಗೆ ಶಾಶ್ವತ ಅಂಗವೈಕಲ್ಯವನ್ನೂ ತಡೆಯಬಹುದು” ಎಂದು ಹೇಳಿದರು.
ಸ್ಟ್ರೋಕ್ನ ಲಕ್ಷಣಗಳನ್ನು ಗುರುತಿಸಲು ಸಾರ್ವಜನಿಕರು BE FAST ಸೂತ್ರವನ್ನು ನೆನಪಿಟ್ಟುಕೊಳ್ಳಬೇಕು ಎಂದು ತಿಳಿಸಿದ ಅವರು, B – Balance (ಸಮತೋಲನ ಕಳೆದುಕೊಳ್ಳುವುದು), E – Eyes (ದೃಷ್ಟಿ ಸಮಸ್ಯೆ), F – Face (ಮುಖ ಓರೆಯಾಗುವುದು), A – Arm (ಕೈ ಅಥವಾ ಕಾಲಿನಲ್ಲಿ ದುರ್ಬಲತೆ), S – Speech (ಮಾತನಾಡಲು ತೊಂದರೆ), T – Time (ತಕ್ಷಣ ಆಸ್ಪತ್ರೆಗೆ ತೆರಳುವುದು) ಎಂದು ವಿವರಿಸಿದರು.
ಮೆದುಳಿನ ಪ್ರಮುಖ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿದಾಗ ಆಯ್ದ ರೋಗಿಗಳಲ್ಲಿ ಮೆಕ್ಯಾನಿಕಲ್ ಥ್ರಾಂಬೆಕ್ಟಮಿ (Mechanical Thrombectomy) ಎಂಬ ಅತ್ಯಾಧುನಿಕ ಚಿಕಿತ್ಸೆಯ ಮೂಲಕ ರಕ್ತಗಡ್ಡೆಯನ್ನು ತೆಗೆದುಹಾಕಿ ರಕ್ತಪ್ರವಾಹವನ್ನು ಪುನಃ ಸ್ಥಾಪಿಸಬಹುದು. ಈ ಚಿಕಿತ್ಸೆ ಸಮಯಕ್ಕೆ ನಡೆದರೆ ರೋಗಿಯ ಜೀವ ಉಳಿಯುವುದರ ಜೊತೆಗೆ ಅಂಗವೈಕಲ್ಯದ ಸಾಧ್ಯತೆಯೂ ಗಣನೀಯವಾಗಿ ಕಡಿಮೆಯಾಗುತ್ತದೆ ಎಂದು ಹೇಳಿದರು.
ಇಂಟರ್ವೆನ್ಷನಲ್ ರೇಡಿಯಾಲಜಿ ಮೂಲಕ ಮೆದುಳಿನ ಅನ್ಯುರಿಸಮ್, ದೇಹದ ಒಳಗಿನ ರಕ್ತಸ್ರಾವ, ಅಪಘಾತಗಳಿಂದ ಉಂಟಾಗುವ ರಕ್ತಸ್ರಾವ, ಕಾಲಿನ ರಕ್ತನಾಳಗಳ ತಡೆ, ಶ್ವಾಸಕೋಶದ ರಕ್ತಗಡ್ಡೆ (Pulmonary Embolism), ಡಯಾಲಿಸಿಸ್ ರಕ್ತನಾಳ ಸಮಸ್ಯೆಗಳು, ಯಕೃತ್ತಿನ ಗಡ್ಡೆಗಳು, ವೆರಿಕೋಸ್ ಶಿರೆಗಳು, ಥೈರಾಯ್ಡ್ ಗಂಟುಗಳು, ಗರ್ಭಾಶಯದ ಫೈಬ್ರಾಯ್ಡ್ಗಳು ಹಾಗೂ ವರಿಕೋಸೆಲ್ ಸೇರಿದಂತೆ ಅನೇಕ ಕಾಯಿಲೆಗಳಿಗೆ ಶಸ್ತ್ರಚಿಕಿತ್ಸೆಯಿಲ್ಲದೆ ಪರಿಣಾಮಕಾರಿ ಚಿಕಿತ್ಸೆ ನೀಡಬಹುದಾಗಿದೆ ಎಂದು ತಿಳಿಸಿದರು.
ಕಲಬುರಗಿಯವರಾದ ತಾವು ತಮ್ಮ ತಾಯ್ನಾಡಿನ ಜನರಿಗೆ ಈ ಅತ್ಯಾಧುನಿಕ ಚಿಕಿತ್ಸೆಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದು ತಮ್ಮ ಉದ್ದೇಶವಾಗಿದೆ ಎಂದ ಅವರು, ಶೀಘ್ರದಲ್ಲೇ ಕಲಬುರಗಿಯ ಯಶೋಧ ಕ್ಲಿನಿಕ್ನಲ್ಲಿ ನಿಯಮಿತ ತಜ್ಞರ ಸಲಹಾ ಸೇವೆ ಆರಂಭಿಸುವ ಯೋಜನೆ ಇದ್ದು, ಇದರಿಂದ ಸ್ಥಳೀಯ ರೋಗಿಗಳು ಹಾಗೂ ವೈದ್ಯರಿಗೆ ಇಂಟರ್ವೆನ್ಷನಲ್ ರೇಡಿಯಾಲಜಿ ಸೇವೆಗಳು ಇನ್ನಷ್ಟು ಸುಲಭವಾಗಿ ಲಭ್ಯವಾಗಲಿವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆಯ ಆಡಳಿತ ಪ್ರತಿನಿಧಿ ಕೇಶವ್ ಕುಲಕರ್ಣಿ ಉಪಸ್ಥಿತರಿದ್ದರು.






