Kalaburagi | ತಪಾಸಣೆಯ ವೇಳೆ ಕೇಂದ್ರ ಕಾರಾಗೃಹದಲ್ಲಿ ಎರಡು ಮೊಬೈಲ್ ಪತ್ತೆ : ಪ್ರಕರಣ ದಾಖಲು

ಕಲಬುರಗಿ: ನಗರದ ಕೇಂದ್ರ ಕಾರಾಗೃಹದಲ್ಲಿ ಜೈಲು ಅಧಿಕಾರಿಗಳು ನಡೆಸಿದ ಅನಿರೀಕ್ಷಿತ ತಪಾಸಣೆಯ ವೇಳೆ ಕೈದಿಯೊಬ್ಬನು ಮಣ್ಣಿನಲ್ಲಿ ಮುಚ್ಚಿಟ್ಟಿದ್ದ ಎರಡು ಮೊಬೈಲ್ ಫೋನ್ಗಳು ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಈ ಸಂಬಂಧ ಕೈದಿ ಕೃಷ್ಣಾ ಅಲಿಯಾಸ್ ಗಜು ತಂದೆ ನೀಲಕಂಠ ಪವಾರ್ ವಿರುದ್ಧ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇಂದ್ರ ಕಾರಾಗೃಹದ ಅಧೀಕ್ಷಕ ರಾಕೇಶ ಕಾಂಬಳೆ ಅವರ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಾದ ಶ್ರೀಮಂತಗೌಡ ಪಾಟೀಲ್, ಮೋಹನ ಮಾರನೂರ, ಬಸವರಾಜ ಮೇತ್ರಿ, ಬಾಹುಬಲಿ, ರಂಜಾನ್ ಹವಾಲ್ದಾರ, ವೀರೇಶ ಪಾಟೀಲ್ ಮತ್ತು ಭೀಮರಾಯ ಪಾಟೀಲ್ ಅವರು ಕಾರಾಗೃಹದ ಬ್ಯಾರಕ್ ಸಂಖ್ಯೆ 15ರಿಂದ 17ರವರೆಗೆ ಅನಿರೀಕ್ಷಿತ ತಪಾಸಣೆ ನಡೆಸಿದರು.
ತಪಾಸಣೆಯ ವೇಳೆ ಕೈದಿ ಕೃಷ್ಣಾ ಅಲಿಯಾಸ್ ಗಜು ಬಳಕೆಗೆ ಇಡಲಾಗಿದ್ದ ಎರಡು ಮೊಬೈಲ್ ಫೋನ್ಗಳನ್ನು ಮಣ್ಣಿನಲ್ಲಿ ಮುಚ್ಚಿಟ್ಟಿರುವುದು ಪತ್ತೆಯಾಗಿದೆ. ಜೈಲಿನ ಭದ್ರತಾ ನಿಯಮಗಳನ್ನು ಉಲ್ಲಂಘಿಸಿ ಮೊಬೈಲ್ಗಳನ್ನು ಅಕ್ರಮವಾಗಿ ಹೊಂದಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆಯ ಕುರಿತು ಕೇಂದ್ರ ಕಾರಾಗೃಹದ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮೊಬೈಲ್ಗಳು ಜೈಲಿನೊಳಗೆ ಹೇಗೆ ಬಂದವು ಹಾಗೂ ಇದರ ಹಿಂದೆ ಯಾರಾದರೂ ಸಹಕರಿಸಿದ್ದಾರೆಯೇ ಎಂಬ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.






