ಕಲಬುರಗಿ | ಉಡಚಾಣ ಮಠಕ್ಕೆ ಆಡಳಿತ ಮಂಡಳಿಯಿಂದ ಬೀಗ: ಹೊಸ ಸಮಿತಿ ರಚನೆಗೆ ಒತ್ತಾಯ

ಅಫಜಲಪುರ: ಕಳೆದ ಸುಮಾರು 18 ತಿಂಗಳಿಂದ ಶ್ರೀ ಶಂಕರಲಿಂಗೇಶ್ವರ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಶಾಂತಲಿಂಗ ಶಿವಾಚಾರ್ಯರು ಮತ್ತು ಉಡಚಾಣ ಗ್ರಾಮಸ್ಥರ ನಡುವೆ ನಡೆಯುತ್ತಿರುವ ಭಿನ್ನಾಭಿಪ್ರಾಯ ರವಿವಾರ ಹೊಸ ತಿರುವು ಪಡೆದಿದ್ದು, ಗ್ರಾಮಸ್ಥರ ಒತ್ತಾಯದ ಮೇರೆಗೆ ಮಠಕ್ಕೆ ಆಡಳಿತ ಮಂಡಳಿ ಬೀಗ ಜಡಿದ ಘಟನೆ ನಡೆದಿದೆ.
ಪೀಠಾಧಿಪತಿ ಶ್ರೀ ಶಾಂತಲಿಂಗ ಶಿವಾಚಾರ್ಯರ ನಡೆ-ನುಡಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಮಸ್ಥರು, ಹೊಸ ಪೀಠಾಧಿಪತಿಯನ್ನು ನೇಮಕ ಮಾಡಬೇಕು ಎಂದು ಹಲವು ತಿಂಗಳುಗಳಿಂದ ಆಗ್ರಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಎಂ.ವೈ. ಪಾಟೀಲ್ ಹಾಗೂ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಅವರ ಸಮ್ಮುಖದಲ್ಲಿ ಗ್ರಾಮಸ್ಥರ ಸಭೆ ಕರೆಯಲಾಗಿತ್ತು. ಸಭೆಗೆ ಹಾಜರಾಗುವಂತೆ ಆಡಳಿತ ಮಂಡಳಿ ನೋಟಿಸ್ ನೀಡಿದ ಬಳಿಕ ಪೀಠಾಧಿಪತಿಗಳು ಅನಾರೋಗ್ಯದ ಕಾರಣ ನೀಡಿ ಮಠ ತೊರೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸಭೆಯಲ್ಲಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಮಠದ ಆಡಳಿತದಲ್ಲಿ ಬದಲಾವಣೆ ತರಬೇಕು ಹಾಗೂ ಮಠಕ್ಕೆ ಬೀಗ ಹಾಕುವಂತೆ ಒತ್ತಾಯಿಸಿದರು. ಬಳಿಕ ಆಡಳಿತ ಮಂಡಳಿ ಮಠಕ್ಕೆ ಬೀಗ ಜಡಿಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಂ.ವೈ. ಪಾಟೀಲ್, ಹಿಂದಿನ ಕಾಲದಲ್ಲಿ ಮಠಗಳು ಸಮಾಜಕ್ಕೆ ನ್ಯಾಯ ಹಾಗೂ ಶಿಕ್ಷಣ ನೀಡುವ ಕೇಂದ್ರಗಳಾಗಿದ್ದವು. ಶ್ರೀ ಶಂಕರಲಿಂಗ ಮಹಾರಾಜರು ಮತ್ತು ಶ್ರೀ ಚಂದ್ರಶೇಖರ ಮಹಾರಾಜರು ತಮ್ಮ ಶ್ರಮದಿಂದ ಮಠ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಬೆಳೆಸಿದ್ದರು. ಆದರೆ ಈಗಿನ ಪೀಠಾಧಿಪತಿಗಳ ಕೆಲವು ನಡೆಗಳು ಮಠದ ಗೌರವಕ್ಕೆ ಧಕ್ಕೆ ತಂದಿವೆ ಎಂಬ ಆರೋಪಗಳು ಕೇಳಿಬಂದಿವೆ. ಮಠದ ಜೊತೆಗೆ ಶಿಕ್ಷಣ ಸಂಸ್ಥೆಗಳ ಕಾರ್ಯಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಮಾತನಾಡಿ, ಮಠಾಧೀಶರು ಗ್ರಾಮಸ್ಥರು ಮತ್ತು ಭಕ್ತರನ್ನು ಒಗ್ಗೂಡಿಸಿಕೊಂಡು ಸಾಗಬೇಕು. ಆದರೆ ಆಡಳಿತದ ಕುರಿತು ಗ್ರಾಮಸ್ಥರು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿರುವುದು ದುರದೃಷ್ಟಕರ. ಮಠದ ಅಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆಗಳ ಸುಗಮ ನಿರ್ವಹಣೆಗಾಗಿ ಹೊಸ ಆಡಳಿತ ಮಂಡಳಿ ರಚಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನಗೌಡ ಪಾಟೀಲ್, ಗಡೇಪ್ಪ ಮೇತ್ರಿ, ಪ್ರಕಾಶ್ ಜಮಾದಾರ, ಉಮೇಶ್ ಮೋನಳ್ಳಿ, ಶಂಕರಲಿಂಗ ಮೇತ್ರಿ, ಶಿವಶರಣಪ್ಪ ಪಡಶೆಟ್ಟಿ, ಶಿವಾನಂದ ಗಾಡಿ ಸಾಹುಕಾರ, ಸಿದ್ದಣ್ಣ ಅಳ್ಳಗಿ, ರಮೇಶ್ ಪೂಜಾರಿ, ಪುಟ್ಟು ಹೂಗಾರ, ವಿಶ್ವನಾಥ ಮಠಪತಿ, ಕಾಶಿನಾಥ ನಿಲಂಗಿ, ಗುರುರಾಜ ಮೇತ್ರಿ ಸೇರಿದಂತೆ ಹಲವಾರು ಗ್ರಾಮಸ್ಥರು ಹಾಗೂ ಮುಖಂಡರು ಉಪಸ್ಥಿತರಿದ್ದರು.






