Kalaburagi | ಕನಕದಾಸರ ಬಹುಮುಖ ವ್ಯಕ್ತಿತ್ವ ಅರಿಯುವುದು ಇಂದಿನ ಅಗತ್ಯ: ಡಾ.ಶಿವರಂಜನ ಸತ್ಯಂಪೇಟೆ

ಕಲಬುರಗಿ : ಕನಕದಾಸರನ್ನು ಕೇವಲ ಭಕ್ತ ಕವಿ ಅಥವಾ ದಾರ್ಶನಿಕರಾಗಿ ಮಾತ್ರವಲ್ಲದೆ, ಅವರ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ಗುರುತಿಸಿ ಅರ್ಥೈಸಿಕೊಳ್ಳುವುದು ಇಂದಿನ ಸಮಾಜಕ್ಕೆ ಅತ್ಯಗತ್ಯ ಎಂದು ಪತ್ರಕರ್ತ ಹಾಗೂ ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಹೇಳಿದರು.
ನಗರದ ಎಂ.ಎನ್. ದೇಸಾಯಿ ಪದವಿ ಮಹಾವಿದ್ಯಾಲಯದಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಗರದ ಕಲಾನಿಕೇತನ ಟ್ರಸ್ಟ್ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ “ಕನ್ನಡದ ಸಂತಕವಿ ಕನಕದಾಸ” ಕುರಿತ ಕನಕ ದರ್ಶನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮುಖ್ಯ ಉಪನ್ಯಾಸ ನೀಡಿದರು.
ಪಾಳೆಗಾರನ ಮನೆಯಲ್ಲಿ ಜನಿಸಿದ ಕನಕ ನಾಯಕನು ಕನಕದಾಸನಾಗಿ ರೂಪುಗೊಂಡ ಬದುಕಿನ ಪಯಣವು ಕೇವಲ ಭಕ್ತಿ ಮತ್ತು ತತ್ವಚಿಂತನೆಗೆ ಸೀಮಿತವಾಗಿರಲಿಲ್ಲ. ಸಮಾಜದಲ್ಲಿದ್ದ ಅಸಮಾನತೆ, ಜಾತಿ-ಪಂಗಡದ ಭೇದಭಾವ ಹಾಗೂ ಮೂಢನಂಬಿಕೆಗಳ ವಿರುದ್ಧ ಧ್ವನಿ ಎತ್ತಿದ ಅವರು ಸಮಾಜ ಸುಧಾರಕರಾಗಿಯೂ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಯುವ ಮುಖಂಡ ತಿರುಪತಿ ಹತ್ತಿಕಟಗಿ ಮಾತನಾಡಿ, ಸಮಾಜಕ್ಕೆ ಅಂಟಿಕೊಂಡಿರುವ ಮೂಢ ಸಂಪ್ರದಾಯಗಳ ವಿರುದ್ಧ ಕನಕದಾಸರು ನಿರಂತರವಾಗಿ ಹೋರಾಡಿದರು. ಅನೇಕ ಕಷ್ಟ-ನೋವುಗಳನ್ನು ಎದುರಿಸಿದರೂ ತಮ್ಮ ತತ್ವ, ಜ್ಞಾನ ಹಾಗೂ ಸಾಹಿತ್ಯದ ಮೂಲಕ ನಾಡಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಚಿಂತನೆಗಳ ಆಳವನ್ನು ಯುವಜನತೆ ಮತ್ತು ವಿದ್ಯಾರ್ಥಿಗಳು ಅರಿತುಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.
ಎಂ.ಎನ್. ದೇಸಾಯಿ ಪದವಿ ಮಹಾವಿದ್ಯಾಲಯದ ಕಾರ್ಯದರ್ಶಿ ಜಗನ್ನಾಥ್ ನಾಗೂರ ಅಧ್ಯಕ್ಷತೆ ವಹಿಸಿದ್ದರು.
ಪ್ರಜ್ಞಾ ಸೇವಾ ಸಂಸ್ಥೆಯ ಅಧ್ಯಕ್ಷ ಕಾಶಿನಾಥ್ ಮರತೂರ, ಸಮಾಜಸೇವಕ ಹಾಗೂ ವಕೀಲ ಹಣಮಂತರಾವ ಅಟ್ಟೂರ, ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ, ಸಗರದ ಕಲಾನಿಕೇತನ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಸಂದೀಪ್ ದೇಸಾಯಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರ ಪ್ರಸ್ತಾವಿಕವಾಗಿ ಮಾತನಾಡಿದರು. ಅಂಬಿಕಾ ಪಾಟ್ನಾ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ್ ಪಟ್ಟಣಕರ ಸ್ವಾಗತಿಸಿದರು. ಡಿ.ಪಿ. ಸಜ್ಜನ್ ವಂದಿಸಿದರು.






