ಕಲಬುರಗಿ | ಅಕ್ಷರ ಕ್ರಾಂತಿಯಿಂದ ಅಸ್ಪೃಶ್ಯತೆ ನಿವಾರಣೆ ಸಾಧ್ಯ : ಹುಣಚಪ್ಪ

ಕಲಬುರಗಿ : ಅಕ್ಷರ ಕ್ರಾಂತಿಯಿಂದ ಮಾತ್ರ ಅಸ್ಪೃಶ್ಯತೆ ನಿವಾರಣೆ ಸಾಧ್ಯ ಎಂದು ಭಕ್ತ ಕನಕದಾಸರ ಸಂಘದ ಅಧ್ಯಕ್ಷ ಹುಣಚಪ್ಪ ಪೂಜಾರಿ ಹೇಳಿದರು.
ಅವರು ಶಹಾಬಾದ್ ತಾಲೂಕಿನ ಮರತೂರ ಗ್ರಾಮದಲ್ಲಿ ಚಿತ್ತಾಪೂರ ಸಮಾಜ ಕಲ್ಯಾಣ ಇಲಾಖೆ ಹಾಗೂ ಲಕ್ಷ್ಮೀ ಯುವತಿ ಸಂಘ ಮರತೂರ ವತಿಯಿಂದ ಆಯೋಜಿಸಲಾದ ಅಸ್ಪೃಶ್ಯತೆ ನಿರ್ಮೂಲನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಸ್ಪೃಶ್ಯತೆ ಹಿಂದಿಗಿಂತ ಈಗ ಕಡಿಮೆಯಾಗಿದೆ. ಸಂಪೂರ್ಣ ನಿವಾರಣೆಯಾಗಿಲ್ಲ. ಆರ್ಥಿಕ ಸಬಲತೆಗಿಂತ ಸಾಮಾಜಿಕ ಬದಲಾವಣೆ ಮೂಲಕ ಈ ವ್ಯವಸ್ಥೆಯನ್ನು ಸರಿಪಡಿಸಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಶಿಕ್ಷಣವಂತರಾಗಬೇಕು. ಸಮಾಜದ ಎಲ್ಲ ವರ್ಗ ಶಿಕ್ಷಣದಿಂದ ಅರಿವು ತಂದುಕೊಂಡರೆ ಸಮಾನತೆಯ ಸಮಾಜ ಸ್ಥಾಪಿಸುವ ಜತೆ ಅಸ್ಪೃಶ್ಯತೆ ಪದ್ಧತಿ ನಿವಾರಿಸಬಹುದು ಎಂದರು.
ಸoವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಶೋಷಿತ ಸಮಾಜದ ಧ್ವನಿಯಾಗಿದ್ದರು. ಸಾಮಾಜಿಕವಾಗಿ ಮಾನವರೆಲ್ಲರೂ ಒಂದೇ ಎಂಬ ಭಾವನೆ ಬರಬೇಕು. ಜಾತಿ ಪದ್ಧತಿ ವಿರುದ್ಧ 12ನೇ ಶತಮಾನದಲ್ಲಿ ಬಸವಣ್ಣನವರು ಕ್ರಾಂತಿ ಮಾಡಿದರು ಹಾಗೂ ಮಹಿಳೆಯರಿಗೆ ಸಮಾನತೆ ನೀಡಬೇಕು ಎಂದಿದ್ದರು. ಸಾಮಾಜಿಕ ಅಸಮತೋಲನ ಹೋಗಲಾಡಿಸಬೇಕಾಗಿದೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.
ದೇವಾನಂದ ಪೂಜಾರಿ, ಪ್ರಭುಲಿಂಗಷ್ಟಗಿ ಸಂಸ್ಥೆಯ ಕಾರ್ಯದರ್ಶಿಯಾದ ಮಲ್ಲಿಕಾರ್ಜುನದೊಡ್ಡಿ ವೇದಿಕೆ ಮೇಲೆ ಇದ್ದರು . ಸಿದ್ದಯ್ಯ ಸ್ವಾಮಿ, ಚಂದ್ರಕಲಾ ಆಳಂದ, ರಮೇಶ ಗಾಯಕ್ವಾಡ, ಶಿವಮ್ಮ ಲಿಂಗದಳ್ಳಿ, ಪ್ರಭುಲಿಂಗ, ಪ್ರಭು ನೀಲೂರ ಇತರರು ಇದ್ದರು.







