ಕಲಬುರಗಿ | ವಿದ್ಯಾರ್ಥಿಗಳಲ್ಲಿ ಮೌಲ್ಯಗಳು, ಪ್ರಯತ್ನಶೀಲತೆ ಮೈಗೂಡಲಿ : ಡಾ.ವಾಸುದೇವ ಸೇಡಂ ಎಚ್.

ಕಲಬುರಗಿ : ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಗುರಿಯನ್ನು ನಿರ್ಧರಿಸಿ, ಅದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಬೇಕು. ಕೀಳರಿಮೆ ತಾಳದೆ, ಧನಾತ್ಮಕ ಚಿಂತನೆ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ತಂದೆ-ತಾಯಿ, ಗುರು-ಹಿರಿಯರಿಗೆ ಗೌರವ ನೀಡಬೇಕು. ಸತತ ಅಧ್ಯಯನ, ನಿರಂತರವಾಗಿ ಪ್ರಯತ್ನ ಮಾಡಿದರೆ ಉತ್ತಮ ಫಲಿತಾಂಶ ಪಡೆದು ಉನ್ನತ ಸಾಧನೆ ಮಾಡಬಹುದಾಗಿದೆ ಎಂದು ಗುಲ್ಬರ್ಗಾ ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಎಚ್. ಹೇಳಿದರು.
ಜೇವರ್ಗಿ ಪಟ್ಟಣದ ಶಹಾಪುರ ರಸ್ತೆಯಲ್ಲಿರುವ ಜೈನಾಪುರ ಫಂಕ್ಷನ್ ಹಾಲ್ ನಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ‘ಶ್ರೀ ನರೇಂದ್ರ ಪದವಿ ಪೂರ್ವ ಕಾಲೇಜ್’ನ ವಾರ್ಷಿಕೋತ್ಸವ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕದಂಬ ಪಿಯು ಕಾಲೇಜಿನ ಪ್ರಾಚಾರ್ಯ ಶ್ರೀಶೈಲ್ ಕೆ.ಖಣದಾಳ ಮಾತನಾಡಿ, ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಧ್ಯಯನ ಮಾಡಬೇಕು. ತುಳಿಯುವವರ ನಡುವೆ, ಏಳುವವರಾಗಿರಿ. ಉತ್ತಮವಾದ ಫಲಿತಾಂಶ ಪಡೆದು ಪಾಲಕರು, ಶಿಕ್ಷಕರು, ಸಂಸ್ಥೆಗೆ ಹೆಸರು ತರುವ ಕೆಲಸ ಮಾಡಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಮಂಜುನಾಥ ಬಿ.ಗುತ್ತೇದಾರ, ಉಪನ್ಯಾಸಕ ಎಚ್.ಬಿ.ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಉದ್ಯಮಿ ಗುರು ತಳವಾರ ಜೈನಾಪುರ, ಯಡ್ರಾಮಿ ಕದಂಬ ಪಿಯು ಕಾಲೇಜಿನ ಪ್ರಾಚಾರ್ಯ ದೇವಿಂದ್ರ ಬಿ.ಗುಡೂರ, ಗೌನಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅಮೃತ ಮಾಲಿ ಪಾಟೀಲ, ಗಂವ್ಹಾರ ತ್ರವಿಕ್ರಮಾನಂದ ಸರಸ್ವತಿ ಸ್ವಾಮಿಗಳ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವಿಜಯಕುಮಾರ ರೆಡ್ಡಿ, ಕೂಡಿ ದರ್ಗಾ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಸುಭಾಷ, ಕಾಲೇಜಿನ ಪ್ರಾಚಾರ್ಯ ದೇವಣ್ಣಗೌಡ ಪಾಟೀಲ ಹಂದನೂರ, ಉಪನ್ಯಾಸಕರಾದ ಮಲ್ಲಿಕಾರ್ಜುನ ಭಾಸಗಿ, ರಾಯಣ್ಣ ಕಟ್ಟಿಮನಿ, ನಿ ಪಟೇಲ್, ಕಲ್ಪನಾ ರೆಡ್ಡಿ, ವಿರೇಶ ಗೋಗಿ, ಶಾಂತಕುಮಾರ ಕುರಡೇಕರ್, ಶಿವಾನಂದ ಬಡಿಗೇರ, ಆಶಾರಾಣಿ ಹವಲ್ದಾರ, ಬಸವರಾಜ ಕೆ.ಪಾಟೀಲ ಹಾಗೂ ವಿದ್ಯಾರ್ಥಿಗಳು, ಪಾಲಕ-ಪೋಷಕರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಕಳೆದ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಕಾಲೇಜಿನ ಎಲ್ಲಾ ಉಪನ್ಯಾಸಕರಿಗೆ ಗೌರವಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.







