ಕಲಬುರಗಿ | ವಿವೇಕಾನಂದರು ಭಾರತದ ಆತ್ಮವಿದ್ದಂತೆ : ಸತ್ಯಂಪೇಟೆ

ಕಲಬುರಗಿ: ಧರ್ಮವು ಅಧ್ಯಾತ್ಮದ ತಳಹದಿಯ ಮೇಲೆ ನಿಂತಿರಬೇಕು ಎಂದು ಹೇಳಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಭಾರತದ ಆತ್ಮವಿದ್ದಂತೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕಲಬುರಗಿ ಪ್ರಾದೇಶಿಕ ಕೇಂದ್ರ, ಯುವ ರೆಡ್ ಕ್ರಾಸ್ ಮತ್ತು ಎನ್ ಎಸ್ ಎಸ್ ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಪ್ರಾದೇಶಿಕ ಕೇಂದ್ರದ ಸೆಮಿನಾರ್ ಹಾಲ್ ನಲ್ಲಿ ಜರುಗಿದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿವೇಕಾನಂದರು ಹಿಂದೂ ಧರ್ಮ, ದೇಶದ ಸಂಸ್ಕೃತಿಯ ಶ್ರೇಷ್ಠತೆಯ ಜೊತೆಗೆ ಭಾರತದ ರಾಷ್ಟ್ರೀಯತೆ ಮತ್ತು ಬಹುತ್ವವನ್ನು ಪ್ರತಿಪಾದಿಸಿದ ಮಹಾನ್ ಸಂತ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿಟಿಯು ಪ್ರಾದೇಶಿಕ ಕೇಂದ್ರದ ನಿರ್ದೇಶಕಿ ಡಾ.ಶುಭಾಂಗಿ ಡಿ.ಸಿ. ಮಾತನಾಡಿ, ದಯೆ ಎಲ್ಲ ಧರ್ಮಗಳ ಮೂಲ. ಮಾನವೀಯತೆ, ಕ್ರೀಯಾಶೀಲ ಗುಣಗಳನ್ನು ಯುವಕರು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿಶ್ವನಾಥರೆಡ್ಡಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಸವರಾಜ ಮಠಪತಿ ವಿಶೇಷ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿದ್ದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಪತಿ ಅರುಣಕುಮಾರ ಲೋಯಾ, ಉಪಸಭಾಪತಿ ಭಾಗ್ಯಲಕ್ಷ್ಮೀ ಎಂ.ಗೌರವ ಕಾರ್ಯದರ್ಶಿ ರವೀಂದ್ರ ಶಾಬಾದಿ ಮಾತನಾಡಿದರು.
ಖಜಾಂಚಿ ಜಿ.ಎಸ್. ಪದ್ಮಾಜಿ, ಯುವ ರೆಡ್ ಕ್ರಾಸ್ ಸಂಚಾಲಕ ಡಾ.ಪದ್ಮರಾಜ ರಾಸಣಗಿ ವೇದಿಕೆಯಲ್ಲಿದ್ದರು. ವಿಟಿಯು ಯುವ ರೆಡ್ ಕ್ರಾಸ್ ಸಂಸ್ಥೆಯ ಡಾ. ಶರಣಗೌಡ ಬಿರಾದಾರ ಸ್ವಾಗತಿಸಿದರು. ವಿಟಿಯು ಎನ್ ಎಸ್ ಎಸ್ ಘಟಕದ ಕಾರ್ಯಕ್ರಮ ಅಧಿಕಾರಿ ಪ್ರೊ.ಸಂಜಯ ಪಟ್ಟಣಶೆಟ್ಟಿ ವಂದಿಸಿದರು. ದೀಪಿಕಾ ನಿರೂಪಿಸಿದರು.







