ಕಲಬುರಗಿ: ನೀರಿನ ಪಂಪ್ಸೆಟ್ ಕಳ್ಳರ ಬಂಧನ: ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿ ವಶ

ಯಡ್ರಾಮಿ: ಯಡ್ರಾಮಿ ಹಾಗೂ ನೆಲೋಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ನೀರಿನ ಪಂಪ್ಸೆಟ್, ಮೋಟಾರ್ ಸ್ಟಾರ್ಟರ್ ಹಾಗೂ ಕೇಬಲ್ ವೈರ್ ಕಳ್ಳತನ ಪ್ರಕರಣಗಳನ್ನು ಯಡ್ರಾಮಿ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಕಳುವಾದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ಶಹಾಪುರ ತಾಲೂಕಿನ ಗೋಗಿ ತಾಂಡಾದ ನಿವಾಸಿ ಕಿಶನ್ ಜಾಧವ (26) ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ 16 ವರ್ಷದ ಬಾಲಾಪರಾಧಿಯನ್ನು ಸಹ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹರವಾಳ, ಕಾಚಾಪೂರ, ನಾಗರಹಳ್ಳಿ, ತೆಲಗಬಾಳ ಹಾಗೂ ಹೊನ್ನಳ್ಳಿ ಕ್ರಾಸ್ ಸಮೀಪದ ಜಮೀನುಗಳಲ್ಲಿ ರೈತರು ಅಳವಡಿಸಿದ್ದ ನೀರಿನ ಪಂಪ್ಸೆಟ್, ಮೋಟಾರ್ ಸ್ಟಾರ್ಟರ್ ಹಾಗೂ ಕೇಬಲ್ ವೈರ್ಗಳನ್ನು ಕಳವು ಮಾಡಲಾಗಿತ್ತು. ಈ ಕುರಿತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 64/2026 ಹಾಗೂ 90/2026 ಮತ್ತು ನೆಲೋಗಿ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 07/2026 ಪ್ರಕರಣಗಳು ಭಾರತೀಯ ನ್ಯಾಯ ಸಂಹಿತೆ (BNS) ಕಲಂ 303(2)ರಡಿ ದಾಖಲಾಗಿದ್ದವು.
ಪ್ರಕರಣಗಳ ತನಿಖೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಅದ್ದೂರು ಶ್ರೀನಿವಾಸಲು (ಐಪಿಎಸ್) ಅವರ ನಿರ್ದೇಶನದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ ಮೇಘಣ್ಣನವರ್, ಗ್ರಾಮೀಣ ಉಪವಿಭಾಗದ ಡಿವೈಎಸ್ಪಿ ಲೋಕೇಶ್ವರಪ್ಪ ಹಾಗೂ ಜೇವರ್ಗಿ ವೃತ್ತದ ಸಿಪಿಐ ಬಾಪುಗೌಡ ಪಾಟೀಲ ಅವರ ಮಾರ್ಗದರ್ಶನದಲ್ಲಿ ಯಡ್ರಾಮಿ ಪಿಎಸ್ಐ ಶ್ರೀಶೈಲ ಅಂಬಾಟಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ತಾಂತ್ರಿಕ ಮಾಹಿತಿ ಹಾಗೂ ಖಚಿತ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನದ ಪ್ರಕರಣಗಳು ಬೆಳಕಿಗೆ ಬಂದಿವೆ. ಆರೋಪಿಗಳಿಂದ ಒಟ್ಟು 5 ನೀರಿನ ಪಂಪ್ಸೆಟ್ಗಳು, 3 ಮೋಟಾರ್ ಸ್ಟಾರ್ಟರ್ಗಳು ಹಾಗೂ ಕೇಬಲ್ ವೈರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿ ಕಿಶನ್ ಜಾಧವನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಬಾಲಾಪರಾಧಿಯ ವಿರುದ್ಧ ಬಾಲನ್ಯಾಯ ಮಂಡಳಿಯ ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣವನ್ನು ಶೀಘ್ರವಾಗಿ ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಯಡ್ರಾಮಿ ಪಿಎಸ್ಐ ಶ್ರೀಶೈಲ ಅಂಬಾಟಿ ಹಾಗೂ ತನಿಖಾ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ.






