Kalaburagi | ಸಹಕಾರ ಕ್ಷೇತ್ರ ಬಲಗೊಂಡರೆ ರೈತರ ಕಲ್ಯಾಣ ಸಾಧ್ಯ: ಸುನಂದಾ ಬಿ.ಪಾಟೀಲ
ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ತರಬೇತಿ ಕಾರ್ಯಕ್ರಮ

ಕಲಬುರಗಿ: ರೈತ ದೇಶದ ಬೆನ್ನೆಲುಬಾಗಿದ್ದು, ಸಹಕಾರ ಕ್ಷೇತ್ರ ಬಲಗೊಂಡಾಗ ಮಾತ್ರ ರೈತರ ಕಲ್ಯಾಣ ಸಾಧ್ಯ ಎಂದು ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷೆ ಸುನಂದಾ ಬಿ. ಪಾಟೀಲ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕಲಬುರಗಿ ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ಸಹಕಾರ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಗುಬ್ಬಿ ಕಾಲೋನಿಯ ಕೆಐಸಿಎಂ ತರಬೇತಿ ಸಂಸ್ಥೆಯಲ್ಲಿ ಆಳಂದ ಮತ್ತು ಅಫಜಲಪುರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗಾಗಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಹಕಾರ ಸಂಘಗಳ ಸಿಇಒಗಳು ಸಹಕಾರ ತತ್ವದ ಮೂಲ ಆಶಯವನ್ನು ಅರ್ಥಮಾಡಿಕೊಂಡು ಕಾರ್ಯನಿರ್ವಹಿಸಬೇಕು. ರೈತರ ಸಹಕಾರದೊಂದಿಗೆ ಸಂಘಗಳು ಲಾಭದಾಯಕ ವ್ಯವಹಾರ ನಡೆಸುವ ಮೂಲಕ ರೈತರ ಆರ್ಥಿಕ ಪ್ರಗತಿಗೆ ನೆರವಾಗಬೇಕು ಎಂದು ಕರೆ ನೀಡಿದರು.
ಇದಕ್ಕೂ ಮುನ್ನ ಕಲಬುರಗಿ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ವೀರಾರೆಡ್ಡಿ ಎಸ್. ಪಾಟೀಲ ತರಬೇತಿ ಕಾರ್ಯಕ್ರಮ ಉದ್ಘಾಟಿಸಿದರು.
ರಾಯಚೂರು ಕೃಷಿ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ರವೀಂದ್ರ ಪಾಟೀಲ ಅವರು ಒತ್ತಡ ನಿರ್ವಹಣೆ, ಕಲಬುರಗಿ ಸರ್ಕಾರಿ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಟಿ. ಗುರುಬಸಪ್ಪ ಅವರು ಸಹಕಾರ ಸಂಘಗಳ ಇತ್ತೀಚಿನ ಕಾಯ್ದೆ ತಿದ್ದುಪಡಿಯ ಸ್ವರೂಪ ಹಾಗೂ ಅರುಣಕುಮಾರ ಹರಸೂರ ಅವರು ಸಹಕಾರ ಸಂಘಗಳ ಲೆಕ್ಕಪತ್ರ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರಾದ ಪಂಡಿತ್, ಮಹೇಶ ಪಸಾರ್, ಆಳಂದ ಸಹಕಾರಿ ಅಭಿವೃದ್ಧಿ ಅಧಿಕಾರಿ ಶಂಕರ ಪಾಟೀಲ್, ಅಫಜಲಪೂರ ಸಹಕಾರಿ ಅಭಿವೃದ್ಧಿ ಅಧಿಕಾರಿ ಚಾಂದ ಭಾಷಾ ಆನ್ಸಾರಿ ಸ್ಭೆರಿದಂತೆ ತಾಲೂಕಿನ ಪ್ಯಾಕ್ಸ್ ಸಂಸ್ಥೆಗಳ ಸಿ.ಇ.ಓ ಗಳು ಭಾಗಿಯಾಗಿದ್ದರು. ಜಿಲ್ಲಾ ಸಹಕಾರ ಒಕ್ಕೂಟದ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಂಜುಳಾ ಎಸ್. ಬಿರಾದಾರ ಕಾರ್ಯಕ್ರಮ ನಿರೂಪಿಸಿದರು. ಕೆ.ಐ.ಸಿ.ಎಂ ಪ್ರಾಂಶುಪಾಲ ಅರುಣಕುಮಾರ ಹರಸೂರ ಸ್ವಾಗತಿಸಿದರು. ಮಹಿಳಾ ಸಹಾಯಕ ಶಿಕ್ಷಕಿ ಇಸ್ಮಾಯಿಲ್ ಬಿ. ಅವರು ವಂದಿಸಿದರು.






