Kalaburagi | ಸಂವಿಧಾನದ ಅರಿವು ಮೂಡಿಸುವ ಕೆಲಸ ಅಗತ್ಯ: ಸಿದ್ಧಲಿಂಗ ಮಹಾಸ್ವಾಮಿಗಳು

ಕಲಬುರಗಿ : ಪುರೋಹಿತಶಾಹಿಯ ಕಪಿಮುಷ್ಠಿಯಲ್ಲಿ ಸಿಲುಕಿ ಮೂಢನಂಬಿಕೆಗಳಲ್ಲಿ ಮುಳುಗಿರುವ ಜನರಿಗೆ ಅಂಬೇಡ್ಕರ್ ಹಾಗೂ ಸಂವಿಧಾನದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುವ ಮೂಲಕ ಸಮಾಜದಲ್ಲಿ ಪ್ರಜ್ಞೆ ಮೂಡಿಸಬೇಕು ಎಂದು ನೆಲೋಗಿ ವಿರಕ್ತಮಠದ ಸಿದ್ಧಲಿಂಗ ಮಹಾಸ್ವಾಮಿಗಳು ಹೇಳಿದರು.
ಜೇವರ್ಗಿ ಪಟ್ಟಣದಲ್ಲಿ ತಥಾಗತ ಗೌತಮ ಬುದ್ಧರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವ ಅಂಗವಾಗಿ ಜಯಂತ್ಯೋತ್ಸವ ಸಮಿತಿ ವತಿಯಿಂದ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ “ಡಾ. ಅಂಬೇಡ್ಕರ್ ಅರಿವು ಉತ್ಸವ” ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
800 ವರ್ಷ ಮೊಗಲರು ಹಾಗೂ 200 ವರ್ಷ ಬ್ರಿಟಿಷರು ಆಳಿದರೂ ದೇಶದಲ್ಲಿ ಜಾತೀಯತೆ, ಅಸ್ಪೃಶ್ಯತೆ ಮತ್ತು ಮೂಢನಂಬಿಕೆಗಳು ಮುಂದುವರಿದಿವೆ. “ರಾಮಬಾಣಕ್ಕೆ ಭೀಮಬಾಣವೇ ಮದ್ದು” ಎಂದು ಅವರು ಹೇಳಿದರು.
ಮುಖ್ಯ ಭಾಷಣಕಾರರಾಗಿದ್ದ ಚಿಂತಕ ಸುರೇಶ್ ಗೌತಮ ಮಾತನಾಡಿ, ಡಾ. ಅಂಬೇಡ್ಕರ್ ಕೇವಲ ದಲಿತರಿಗಾಗಿ ಮಾತ್ರವಲ್ಲ, ಮಹಿಳೆಯರು ಹಾಗೂ ಹಿಂದುಳಿದ ವರ್ಗಗಳ ಏಳಿಗೆಗಾಗಿ ಹೋರಾಡಿದ ಮಹಾನ್ ನಾಯಕರು ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ದೇಶದ ಎಲ್ಲಾ ಸಮಸ್ಯೆಗಳಿಗೆ ಬ್ರಿಟಿಷರೇ ಕಾರಣ ಎಂಬ ಭಾವನೆ ಇತ್ತಾದರೂ, ಸಮಾಜದಲ್ಲಿನ ಶ್ರೇಣಿಕೃತ ವ್ಯವಸ್ಥೆಯೂ ಶೋಷಣೆಗೆ ಪ್ರಮುಖ ಕಾರಣ ಎಂದು ಅಂಬೇಡ್ಕರ್ ಅರಿತು ಅದರ ವಿರುದ್ಧ ಹೋರಾಟ ನಡೆಸಿದರು. ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಸಮಾನ ಸಮಾಜ ನಿರ್ಮಿಸಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ, ಸಂಗೀತ ಹಾಗೂ ಶೈಕ್ಷಣಿಕ ಕ್ಷೇತ್ರದ ಸಾಧಕರನ್ನು ಹಾಗೂ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಇದಕ್ಕೂ ಮೊದಲು ಪಟ್ಟಣದ ವಿಜಯಪುರ ಕ್ರಾಸ್ನಿಂದ ಗೌತಮ ಬುದ್ಧರ ಮೂರ್ತಿಯನ್ನು ಮೆರವಣಿಗೆಯ ಮೂಲಕ ಕರೆತಂದು ಅಂಬೇಡ್ಕರ್ ಭವನದಲ್ಲಿ ಪ್ರತಿಷ್ಠಾಪಿಸಲಾಯಿತು. ಮೆರವಣಿಗೆಯನ್ನು ಜಿಪಂ ಮಾಜಿ ಸದಸ್ಯ ಚಂದ್ರಶೇಖರ ಹರನಾಳ ಉದ್ಘಾಟಿಸಿದರು.
ಅಣದೂರು ಬುದ್ಧ ವಿಹಾರದ ಭಂತೆ ವರಜ್ಯೋತಿ ಹಾಗೂ ಇನ್ನಿತರ ಭಂತೇಜಿಗಳು ಸಾನ್ನಿಧ್ಯ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಶಾಂತಪ್ಪ ಕೂಡಲಗಿ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿದ್ದ ಅಖಿಲ ಭಾರತ ವೀರಶೈವ, ಲಿಂಗಾಯತ ಸಮಾಜದ ರಾಜ್ಯ ಸದಸ್ಯ ರಾಜಶೇಖರ ಸೀರಿ ಮಾತನಾಡಿದರು. ದಸಂಸ ರಾಜ್ಯ ಸಂಚಾಲಕರಾದ ಅರ್ಜುನ ಭದ್ರೆ, ಮರೆಪ್ಪ ಹಳ್ಳಿ, ಜಿಪಂ ಮಾಜಿ ಸದಸ್ಯ ಗುರುಲಿಂಗಪ್ಪಗೌಡ ಮಾಲಿಪಾಟೀಲ ಪ್ರಮುಖರಾದ ಚನ್ನಮಲ್ಲಯ್ಯ ಹಿರೇಮಠ, ಬಾಪೂಗೌಡ ಪಾಟೀಲ ಬಿರಾಳ, ವಸಂತ ನರಿಬೋಳ, ಕೆರೆಪ್ಪ ಹಿಪ್ಪರಗಿ, ಸುಭಾಷ ಚನ್ನೂರ, ಭೀಮರಾಯ ಜನಿವಾರ ಮತ್ತಿತರರು ವೇದಿಕೆಯಲ್ಲಿದ್ದರು. ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಪುಂಡಲೀಕ ಗಾಯಕವಾಡ ಅಧ್ಯಕ್ಷತೆ ವಹಿಸಿದ್ದರು. ಪಂಡಿತ ಮದಗುಣಕಿ, ಅನಿಲ್ ಟೆಂಗಳಿ, ಡಾ. ಅಶೋಕ ದೊಡ್ಡಮನಿ, ನಿಜಲಿಂಗ ದೊಡ್ಡಮನಿ, ವಿಠಲ್ ಚಿಕಣಿ, ಮರೆಪ್ಪ ಬೇಗಾರ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.
ಶಾಂತಿ, ಕರುಣೆ, ಸಮಾನತೆ ಸಾರಿದ ಮಹನೀಯರು
ಪತ್ರಕರ್ತ ಹಾಗೂ ಸಾಹಿತಿ ಡಾ. ಶಿವರಂಜನ ಸತ್ಯಂಪೇಟೆ ಮಾತನಾಡಿ, ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರಿಗೆ ಸಾವಿರಾರು ವರ್ಷಗಳ ಅಂತರವಿದ್ದರೂ, ಶಾಂತಿ, ಕರುಣೆ, ಸಮಾನತೆ ಹಾಗೂ ಸ್ವಾತಂತ್ರ್ಯದ ಕನಸನ್ನು ಮೂವರು ಮಹನೀಯರೂ ಸಮಾಜಕ್ಕೆ ನೀಡಿದ್ದಾರೆ. “ಆಸೆಯೇ ದುಃಖಕ್ಕೆ ಮೂಲ” ಎಂದು ಬುದ್ಧ ಹೇಳಿದರೆ, “ಮಾನವ ನಿರ್ಮಿತ ಸಾಮಾಜಿಕ ವ್ಯವಸ್ಥೆಯೇ ದುಃಖಕ್ಕೆ ಕಾರಣ” ಎಂದು ಬಸವಣ್ಣ ಹೇಳಿದ್ದಾರೆ. ಈ ಎಲ್ಲ ಅನ್ಯಾಯಗಳಿಗೆ ಶಿಕ್ಷಣವೇ ಶಕ್ತಿಯುತ ಅಸ್ತ್ರ ಎಂದು ಅಂಬೇಡ್ಕರ್ ಬೋಧಿಸಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.






