ಕಲಬುರಗಿ | ಯೋಗ ಜಾಥಾಕ್ಕೆ ಚಾಲನೆ

ಕಲಬುರಗಿ: 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆಯುಷ್ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಯೋಗ ಜಾಥಾ (ಯೋಗ ನಡಿಗೆ) ಕ್ಕೆ ಕಲಬುರಗಿ ನಗರದ ಜಗತ್ ವೃತ್ತದಲ್ಲಿ ಕಲಬುರಗಿ ದಕ್ಷಿಣ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಅವರು ಶುಕ್ರವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಆರೋಗ್ಯಕರ ಜೀವನಕ್ಕಾಗಿ ಪ್ರತಿಯೊಬ್ಬರೂ ಯೋಗಾಸನ ಮಾಡಬೇಕು. ಇದರಿಂದ ನಾವು ರೋಗಮುಕ್ತರಾಗಿ ಬದುಕಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ ಸಿಂಗ್ ಮೀನಾ ಅವರು ಯೋಗದ ಮಹತ್ವವನ್ನು ತಿಳಿಸಿದರು.
ಕಲಬುರಗಿ ಪ್ರಭಾರ ಜಿಲ್ಲಾ ಆಯುಷ್ ಅಧಿಕಾರಿ ಡಾ. ಕೆ.ಬಿ. ಬಬಲಾದಿ ಅವರು ಮಾತನಾಡಿ, ಜೂ.21 ರಂದು ಶನಿವಾರ ಜರುಗುವ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಎಲ್ಲಾ ಯೋಗ ಸಂಘ-ಸಂಸ್ಥೆಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲೆಯ ಯೋಗ ಸಂಸ್ಥೆಗಳಾದ ಪತಂಜಲಿ ಯೋಗ ಸಮಿತಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಭೂಮಿ ಯೋಗ ಫೌಂಡೇಶನ್, ಓಂ ಯೋಗ ಕೇಂದ್ರ, ವಿವೇಕ ಜಾಗೃತಿ ಯೋಗ ವಿದ್ಯಾಪೀಠ ಹರಿ ಓಂ ಯೋಗ ಕೇಂದ್ರ, ಸೃಷ್ಠಿ ಯೋಗ ಕೇಂದ್ರ, ಜೈ ಶ್ರೀರಾಮ ಯೋಗ ತಂಡ ಹಾಗೂ ಮಾನವೀಯ ಕಲ್ಯಾಣ ಟ್ರಸ್ಟ್ನ ಮುಖ್ಯಸ್ಥರು, ಶಿಬಿರಾರ್ಥಿಗಳು ಹಾಗೂ ನಗರದ ಆಯುಷ್ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಕಲಬುರಗಿ ನಗರದ ಜಗತ್ ವೃತ್ತದಿಂದ ಆರಂಭಗೊಂಡ ಈ ಜಾಥಾವು (ಯೋಗ ನಡಿಗೆ) ಸರ್ದಾರ ವಲ್ಲಭ್ಭಾಯಿ ಪಟೇಲ್ ವೃತ್ತ ಮಾರ್ಗವಾಗಿ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಕೊನೆಗೊಂಡಿತು.







