ಕಲಬುರಗಿ|ಆಳಂದದಲ್ಲಿ ಕಳಪೆ ರಸ್ತೆ ಕಾಮಗಾರಿ ನಡೆಸಿ ಕೋಟ್ಯಾಂತರ ರೂ.ಲೂಟಿ : ಮಾಜಿ ಶಾಸಕ ಗುತ್ತೇದಾರ್ ದೂರು

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ (ಕೆಕೆಆರ್ಡಿಬಿ) ಯೋಜನೆಯಡಿಯಲ್ಲಿ ಕೈಗೊಳ್ಳುತ್ತಿರುವ ಅನೇಕ ಕಾಮಗಾರಿಗಳು ಕಳಪೆ ಮಟ್ಟದಲ್ಲಿ ನಿರ್ಮಿಸಿ ಸರಕಾರದ ಹಣ ಲೂಟಿ ಮಾಡುವ ಕೆಲಸ ಆಳಂದ ತಾಲೂಕಿನಲ್ಲಿ ನಡೆಯುತ್ತಿದ್ದರೂ ತಪ್ಪಿತಸ್ಥರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ದೂರು ನೀಡಿದ್ದಾರೆ.
ಕಲಬುರಗಿ ಆಳಂದ ರಾಜ್ಯ ಹೆದ್ದಾರಿ ಎಸ್ಎಚ್ 10 ರಿಂದ ಎಲೆನಾವದಗಿ- ಕೊಡಲಹಂಗರಗಾ ಹತ್ತಿರದಿಂದ ಎಲೆನಾವದಗಿ ಗ್ರಾಮದ ರಸ್ತೆ 4.50 ಕಿ.ಮೀ ಕಾಮಗಾರಿ ಮುಗಿಯುವ ಹಂತದಲ್ಲಿ ಕಿತ್ತು ಹೋಗಿರುತ್ತದೆ. ಮನುಷ್ಯರಿಗೆ ನಡೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ದ್ವಿಚಕ್ರ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಜನರು ಬಿದ್ದು ಕೈಕಾಲು ಮುರಿದು ಕೊಂಡಿರುತ್ತಾರೆ. ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಸುಭಾಷ್ ಆರ್ ಗುತ್ತೇದಾರ್ ಆರೋಪಿಸಿದ್ದಾರೆ.
4 ಕೋಟಿ ರೂಪಾಯಿ ವೆಚ್ಚ ಮಾಡಿ ರಸ್ತೆ ನಿರ್ಮಿಸಲಾಗಿದೆ. ನಾಲ್ಕು ತಿಂಗಳು ರಸ್ತೆ ಬಾಳಿಕೆ ಬಂದಿರುವುದಿಲ್ಲ. ಇದು ಯಾವ ವೈಜ್ಞಾನಿಕ ಪದ್ಧತಿ ಇರಬಹುದು. ಇಡೀ ರಸ್ತೆಯ ತುಂಬೆಲ್ಲ ಹುಡುಕಿದರು ಡಾಂಬರ್ ನೋಡಲು ಸಿಗುವುದಿಲ್ಲ. ಹೀಗಿರುವಾಗ ಯಾವ ಗುಣಮಟ್ಟದ ರಸ್ತೆ ನಿರ್ಮಿಸಿರಬೇಕು ಯೋಚನೆ ಮಾಡಬೇಕಾಗಿರುತ್ತದೆ. ಅಂದಾಜು ಪಟ್ಟಿಯಂತೆ ಕಾಮಗಾರಿ ಮಾಡಿಲ್ಲ. ಪಟ್ಟಿಯಲ್ಲಿನ ಯಾವ ನಿಯಮಗಳು ಕೂಡ ಪಾಲನೆಯಾಗಿಲ್ಲ ಸುಳ್ಳು ಲೆಕ್ಕ ತೋರಿಸಿ 4 ಕೋಟಿ. ರೂ. ಹಣ ಲೂಟಿ ಮಾಡಿರುತ್ತಾರೆ ಎಂದು ದೂರು ನೀಡಿದ್ದಾರೆ.
ಇದೇ ರೀತಿ ವಾಗ್ಧರಿ ರಿಪ್ಪನಪಲ್ಲಿ ಮುಖ್ಯ ರಸ್ತೆಯಿಂದ ಪಡಸಾವಳಿ ಗ್ರಾಮದವರೆಗಿನ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿಗೆ 1ಕೋಟಿ( ಕೆಕೆಆರ್ಡಿಬಿ 2023-24ನೇ ಸಾಲಿನ) ರೂ. ವೆಚ್ಚ ಮಾಡಿರುತ್ತಾರೆ. ಈ ರಸ್ತೆಯೂ ಮಾಡಿದ 2 ತಿಂಗಳಲ್ಲೇ ಹಾಳಾಗಿ ಹೋಗಿರುತ್ತದೆ. ಇಲ್ಲಿಯೂ ಸರಕಾರದ ಬೊಕ್ಕಸಕ್ಕೆ 1 ಕೋಟಿ ನಷ್ಟವಾಗಿರುತ್ತದೆ ಎಂದು ದೂರಿದ್ದಾರೆ.
ಆಳಂದ ತಾಲೂಕಿನ ವಾಗ್ಧರಿ- ರಿಪ್ಪನಪಲ್ಲಿ ಮುಖ್ಯರಸ್ತೆಯಿಂದ ಪಡಸಾವಳಿ ರಸ್ತೆ ಕಾಮಗಾರಿಯು ಕರ್ನಾಟಕ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮದವರಿಗೆ ವಹಿಸಿಕೊಟ್ಟಿದ್ದು, ಅದು ನಿಯಮಬಾಹಿರವಾಗಿ ಹಣ ಲೂಟಿ ಮಾಡಲೆಂದೇ ಚಿತ್ತಾಪೂರ ಉಪವಿಭಾಗದವರಿಗೆ ನೀಡಿರುತ್ತಾರೆ. ಆಳಂದ ಕಾಮಗಾರಿಯ ಬಿಲ್ಲನ್ನು ಎಇ, ಎಇಇ ಏಖIಆಐ ಚಿತ್ತಾಪೂರದವರು ದಾಖಲಿಸಿ ಹಣ ಲೂಟಿ ಮಾಡಿರುತ್ತಾರೆ. ಆಳಂದ ತಾಲೂಕು ಎಇಇ JEE KRIDL SUB DIVISION AFZALPUR ವ್ಯಾಪ್ತಿಗೆ ಬರುತ್ತದೆ. ಇಷ್ಟೆಲ್ಲ ನಡೆದರೂ ಜಿಲ್ಲಾಡಳಿತ ಮೌನವಾಗಿರಲು ಕಾರಣವೇನು? ಇದಕ್ಕೆ ಸರಕಾರವೇ ಉತ್ತರಿಸಬೇಕಾಗಿದೆ ಎಂದು ಹೇಳಿದ್ದಾರೆ.
ಆಳಂದ ತಾಲೂಕಿನಾದ್ಯಂತ ಕೆಕೆಆರ್ಡಿಬಿ ಅನುದಾನದ ಅನೇಕ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ನಿರ್ಮಿಸಿ ಕೋಟ್ಯಾಂತರ ರೂ.ಗಳನ್ನು ಲೂಟಿ ಮಾಡುತ್ತಿರುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಭಯವಿಲ್ಲದಂತಾಗಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದೆಲ್ಲವನ್ನು ಖಂಡಿಸಿ ಡಿ.4ರಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಚೇರಿ ಎದುರುಗಡೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಸುಭಾಷ್ ಆರ್ ಗುತ್ತೇದಾರ್ ಹೇಳಿದ್ದಾರೆ.







