ಕಾಳಗಿ | ಮಂಗಲಗಿಯಲ್ಲಿ 11 ಅಡಿ ಅಶ್ವಾರೋಢ ಬಸವೇಶ್ವರ ಮೂರ್ತಿ ಅನಾವರಣ

ಕಾಳಗಿ: ತಾಲೂಕಿನ ಮಂಗಲಗಿ ಗ್ರಾಮದಲ್ಲಿ ಬಸವೇಶ್ವರ ಅಶ್ವಾರೋಢ ಮೂರ್ತಿ ಸಮಿತಿಯಿಂದ ಪ್ರತಿಷ್ಠಾಪಿಸಲಾದ 11 ಅಡಿ ಎತ್ತರದ ಅಶ್ವಾರೋಢ ಬಸವೇಶ್ವರ ಮೂರ್ತಿಯನ್ನು ಕಲಬುರಗಿ ಮಾಜಿ ಸಂಸದ ಡಾ. ಉಮೇಶ್ ಜಾಧವ್ ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಯಕಯೋಗಿ ಬಸವಣ್ಣ ಅವರು ಅನುಭವ ಮಂಟಪದ ಮೂಲಕ ವಿಶ್ವದಲ್ಲೇ ಮೊದಲ ಬಾರಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆಗೆ ಅಡಿಪಾಯ ಹಾಕಿದ ಮಹಾನ್ ಚಿಂತಕರಾಗಿದ್ದಾರೆ. ಬಸವಣ್ಣರ ಜೀವನ, ಆದರ್ಶ ಹಾಗೂ ತತ್ವಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಅವರು ತೋರಿದ ಮಾರ್ಗದಲ್ಲಿ ಸಾಗಬೇಕು ಎಂದು ಕರೆ ನೀಡಿದರು.
ಬಸವಕಲ್ಯಾಣ ಮಹಾಮನೆಯ ಪೂಜ್ಯ ಬಸವಪ್ರಭು ಮಹಾಸ್ವಾಮಿಗಳು ಮಾತನಾಡಿ, ಬಸವಣ್ಣರು ಜಾತಿ-ಭೇದವಿಲ್ಲದ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಸಾಂಸ್ಕೃತಿಕ ನಾಯಕರು. ಅವರ ವಚನಗಳಲ್ಲಿರುವ ತತ್ವಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು.
ಆಳಂದದ ಪೂಜ್ಯ ವಿಶ್ವನಾಥ ಕೋರಣೇಶ್ವರ ಮಹಾಸ್ವಾಮಿಗಳು, ಬಸವಣ್ಣರು ಸಮಾಜವನ್ನು ಜಾತಿ ವ್ಯವಸ್ಥೆಯಿಂದ ಮುಕ್ತಗೊಳಿಸಿ ಸಮಾನತೆಯ ಬದುಕಿಗೆ ಒತ್ತು ನೀಡಿದರು. ಅವರ ಸಾಮಾಜಿಕ ಸುಧಾರಣಾ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಅಭಿಪ್ರಾಯಪಟ್ಟರು.
ಶರಣ ಸಾಹಿತಿ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ ಮಾತನಾಡಿ, ವಿಶ್ವ ಅಜ್ಞಾನದ ಕತ್ತಲಲ್ಲಿದ್ದ ಕಾಲದಲ್ಲಿ ಬಸವಣ್ಣರು ಸರಳ ಕನ್ನಡದ ವಚನಗಳ ಮೂಲಕ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದರು ಎಂದು ಹೇಳಿದರು.
ಭರತನೂರದ ಪೂಜ್ಯ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು, ಮಂಗಲಗಿಯ ಡಾ. ಶಾಂತಸೋಮನಾಥ ಶಿವಾಚಾರ್ಯರು, ಸೇಡಂನ ಡಾ. ಸದಾಶಿವ ಮಹಾಸ್ವಾಮಿಗಳು ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಆರ್.ಜಿ. ಶೆಟಗಾರ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ವೇಳೆ ಅಶ್ವಾರೋಢ ಬಸವೇಶ್ವರ ಮೂರ್ತಿ ಸಮಿತಿ ಸದಸ್ಯರಿಗೆ ಜಾಗತಿಕ ಲಿಂಗಾಯತ ಮಹಾವೇದಿಕೆ ಹಾಗೂ ಕಾಳಗಿ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ತಲಾ 21 ಸಾವಿರ ರೂ. ದೇಣಿಗೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ರಾಜ್ಯ ಸಂಚಾಲಕ ರವೀಂದ್ರ ಶಾಬಾದಿ, ಬಸವೇಶ್ವರ ಮೂರ್ತಿ ಪ್ರತಿಷ್ಟಾಪನೆ ಸಮಿತಿ ಕೊಶಾಧ್ಯಕ್ಷ ನಾಗೇಂದ್ರ ದೇಶಮುಖ, ಕಾರ್ಯಧ್ಯಕ್ಷ ಸಂತೋಷ ಆರ್.ಪಾಟೀಲ, ಶರಣಗೌಡ ಪೊಲೀಸ್ ಪಾಟೀಲ, ಶಿವಶರಣಪ್ಪ ಕಮಲಾಪೂರ, ಮಲ್ಲಿನಾಥ ಕೊಲಕುಂದಿ, ಶೇಖರ ಪಾಟೀಲ, ಮಲ್ಲಿನಾಥ ಪಾಟೀಲ, ಜಗನ್ನಾಥ ತೇಲಿ, ಪ್ರಶಾಂತ ಕದಮ, ಪುರುಷೋತ್ತಮ ಗುತ್ತೇದಾರ, ರಮೇಶ ಕಿಟ್ಟದ, ರಾಜಶೇಖರ ತಿಮ್ಮನಾಯಕ, ಮಾರುತಿ ಜಮಾದಾರ, ಸಂಗ್ರಾಮ ಉಚ್ಚೇದ ಕೊಟಗಾ, ರಾಮುಗೌಡ ಗೋಟೂರ, ಶರಣು ಚಂದಾ, ರೇವಣಸಿದ್ದ ಕಲಶೆಟ್ಟಿ, ನಾಗರಾಜ ಚಿಕ್ಕಮಠ, ಬಂಡು ಬೊಮ್ಮಣ್ಣಿ, ಸಂಗಾರೆಡ್ಡಿ ಕೌಳಾಸ ಈಶುಗೌಡ ಮಳಗಿ, ಮೋನಪ್ಪ ವಿಶ್ವಕರ್ಮ ಸೇರಿದಂತೆ ಅನೇಕರು ಇದ್ದರು.
ಸಂಗಣ್ಣ ವೀರಪ್ಪ ದೂಳಾಗುಂಡಿ ಸ್ವಾಗತಿಸಿದರು, ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಸಮಿತಿ ಅಧ್ಯಕ್ಷ ನಿಂಬೆಣಪ್ಪ ಕೋರವಾರ ಪ್ರಾಸ್ತಾವಿಕ ಮಾತನಾಡಿದರು, ಬಸವರಾಜ ದೂಳಗುಂಡಿ ನಿರೂಪಿಸಿ ವಂದಿಸಿದರು.






