ಕಾಳಗಿ | ಯಶಸ್ವಿನಿ ಯೋಜನೆ ನೋಂದಣಿಗೆ ವರ್ಷಪೂರ್ತಿ ಅವಕಾಶ ನೀಡಲು ಆಗ್ರಹ

ಕಾಳಗಿ : ಸಹಕಾರ ಸಂಘಗಳ ಸದಸ್ಯರು ಹಾಗೂ ರೈತರಿಗೆ ಆರೋಗ್ಯ ಭದ್ರತೆ ಒದಗಿಸುವ ಯಶಸ್ವಿನಿ ಆರೋಗ್ಯ ಯೋಜನೆಯಡಿ ಕಾರ್ಡ್ ನೋಂದಣಿಗೆ ಕೊನೆಯ ದಿನಾಂಕ ನಿಗದಿಪಡಿಸದೆ, ವರ್ಷಪೂರ್ತಿ 365 ದಿನಗಳಲ್ಲಿಯೂ ನೋಂದಣಿ ಅವಕಾಶ ಕಲ್ಪಿಸಬೇಕು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ರಟಕಲ್ ಅಧ್ಯಕ್ಷ ರೇವಣಸಿದ್ದ ಬಡಾ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆಯಲ್ಲಿ ಅವರು, ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ದೊರಕಿಸುವ ಈ ಯೋಜನೆಯಿಂದ ಕೊನೆಯ ದಿನಾಂಕದ ಕಾರಣ ಅನೇಕ ರೈತರು ಹಾಗೂ ಸದಸ್ಯರು ವಂಚಿತರಾಗುತ್ತಿದ್ದಾರೆ ಎಂದು ಹೇಳಿದರು.
ಕೃಷಿ ಕೆಲಸದ ಒತ್ತಡ, ಆರ್ಥಿಕ ತೊಂದರೆ ಹಾಗೂ ಮಾಹಿತಿ ಕೊರತೆಯಿಂದಾಗಿ ಅನೇಕ ರೈತರಿಗೆ ನಿಗದಿತ ಅವಧಿಯಲ್ಲಿ ನೋಂದಣಿ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ವರ್ಷಪೂರ್ತಿ ನೋಂದಣಿ ಅವಕಾಶ ನೀಡುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಜೊತೆಗೆ ನೋಂದಣಿ, ಪರಿಶೀಲನೆ, ಕಾರ್ಡ್ ವಿತರಣೆ ಹಾಗೂ ನವೀಕರಣದ ಸಂಪೂರ್ಣ ಅಧಿಕಾರವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ನೀಡಿದರೆ ಗ್ರಾಮ ಮಟ್ಟದಲ್ಲೇ ವೇಗವಾಗಿ ಸೇವೆ ದೊರೆಯಲಿದ್ದು, ರೈತರು ತಾಲೂಕು ಅಥವಾ ಜಿಲ್ಲಾ ಕೇಂದ್ರಗಳಿಗೆ ತೆರಳುವ ಅವಶ್ಯಕತೆ ಇರುವುದಿಲ್ಲ ಎಂದು ಹೇಳಿದರು.
ಈ ಕ್ರಮದಿಂದ ಯೋಜನೆಯ ವ್ಯಾಪ್ತಿ ವಿಸ್ತರಿಸಿ ಹೆಚ್ಚಿನ ರೈತರು ಆರೋಗ್ಯ ಭದ್ರತಾ ಯೋಜನೆಯ ಸೌಲಭ್ಯ ಪಡೆಯಲು ಸಾಧ್ಯವಾಗಲಿದೆ. ಆದ್ದರಿಂದ ಸರ್ಕಾರವು ವರ್ಷಪೂರ್ತಿ ನೋಂದಣಿ ವ್ಯವಸ್ಥೆ ಜಾರಿಗೆ ತಂದು, ಆಡಳಿತಾತ್ಮಕ ಅಧಿಕಾರವನ್ನು ಸಹಕಾರ ಸಂಘಗಳಿಗೆ ವಹಿಸಬೇಕು ಎಂದು ರೇವಣಸಿದ್ದ ಬಡಾ ಒತ್ತಾಯಿಸಿದ್ದಾರೆ.






