ಕಾಳಗಿ | ಬರಗಾಲ ಘೋಷಣೆ ಆಗ್ರಹಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ಕಾಳಗಿ: ಮಳೆ ಕೊರತೆಯಿಂದ ಕಾಳಗಿ ಹಾಗೂ ಚಿಂಚೋಳಿ ತಾಲೂಕುಗಳಲ್ಲಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಎರಡೂ ತಾಲೂಕುಗಳನ್ನು ತಕ್ಷಣ ಬರಪೀಡಿತ ಪ್ರದೇಶಗಳೆಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ಹಾಗೂ ಅಗತ್ಯ ನೆರವು ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಶಾಸಕ ಡಾ. ಅವಿನಾಶ ಜಾಧವ ನೇತೃತ್ವದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು.
ಪಟ್ಟಣದ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದ ಬಿಜೆಪಿ ಕಾರ್ಯಕರ್ತರು, ಕಾಳಗಿ–ಚಿಂಚೋಳಿ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ಟೈರ್ಗಳಿಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಅವಿನಾಶ ಜಾಧವ, ಮಳೆ ಕೊರತೆಯಿಂದ ರೈತರ ಬೆಳೆಗಳು ಒಣಗಿ ಹೋಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ಬಿಜೆಪಿ ಶಾಸಕರಿರುವ ಕಾಳಗಿ–ಚಿಂಚೋಳಿ ತಾಲೂಕುಗಳಿಗೆ ಬರಗಾಲ ಘೋಷಣೆ ಮಾಡಲು ಸರ್ಕಾರ ಹಿಂದೇಟು ಹಾಕುತ್ತಿದ್ದು, ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ರಾಜಕೀಯ ಭೇದಭಾವ ಬದಿಗಿಟ್ಟು ರೈತರ ಹಿತದೃಷ್ಟಿಯಿಂದ ಮೂರನೇ ಹಂತದ ಬರಪೀಡಿತ ಪಟ್ಟಿಯಲ್ಲಿ ಕಾಳಗಿ ಹಾಗೂ ಚಿಂಚೋಳಿ ತಾಲೂಕುಗಳನ್ನು ಸೇರಿಸಬೇಕು. ಇಲ್ಲದಿದ್ದರೆ ಚಿಂಚೋಳಿಯ ಕೊಂಚಾವರಂನಿಂದ ಕಲಬುರಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪಾದಯಾತ್ರೆ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪ್ರತಿಭಟನೆ ಬಳಿಕ ತಹಶೀಲ್ದಾರ್ ಪೃಥ್ವಿರಾಜ್ ಪಾಟೀಲ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಶಹಾಬಾದ್ ಡಿವೈಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ವಿಜಯಕುಮಾರ ಚೆಂಗಟಿ, ಕಾಳಗಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಜಗದೀಶ ಮಾಲಿಪಾಟೀಲ, ಮಲ್ಲಿನಾಥ ಪಾಟೀಲ ಕಾಳಗಿ, ರಾಮರೆಡ್ಡಿ ಪಾಟೀಲ, ಗೌತಮ್ ಪಾಟೀಲ, ಶಿವರಾಜ ಪಾಟೀಲ ಗೋಣಗಿ, ಶರಣಪ್ಪ ತಳವಾರ, ಶಶಿಕಲಾ ತೆಂಗಳಿ, ಬಸವರಾಜ ಬೆಣ್ಣೂರಕರ್, ಗೋಪಾಲರಾವ ಕಟ್ಟಿಮನಿ, ಕೆ.ಎಂ.ಬಾರಿ, ಉಮಾ ಪಾಟೀಲ, ಮಲ್ಲಿಕಾರ್ಜುನ ಪಾಟೀಲ ರುದನೂರ, ಶ್ರೀಮಂತ ಕಟ್ಟಿಮನಿ, ಸುಂದರ ಡಿ.ಸಾಗರ, ಮಹೇಂದ್ರ ಪೂಜಾರಿ, ಜಗನ್ನಾಥ ತೇಲಿ, ಸಿದ್ದು ಮಾನಕರ್, ಮಲ್ಲಿಕಾರ್ಜುನ ಸಿಂಗೆ, ರತ್ನಮ್ಮ ಡೊಣ್ಣೂರ, ವೆಂಕಟ ಮಹಾರಾಜ, ಜಿತೇಂದ್ರ ರಠೋಡ, ರಮೇಶ ಕಿಟ್ಟದ, ಪಪ್ಪು ಲಕ್ಷ್ಮಣ ನಾಯಕ ತಾಂಡಾ, ಅಂಬವ್ವ ರಾಜಾಪೂರ, ರಾಜಶೇಖರ ಗುಡದಾ, ಶಿವಕುಮಾರ ಪಾಟೀಲ, ಅಶೋಕ ಜಾಜಿ, ಪ್ರಶಾಂತ ಕದಂ, ಶೇಖರ ಮಾಲಿಪಾಟೀಲ್, ಶಿವರಾಜ ಪಾಟೀಲ ಅರಣಕಲ್, ರವಿ ಸಿಂಗೆ, ಶರಣು ಚಂದಾ, ಶಂಕರ ಚೋಕಾ, ಬಲರಾಮ್ ವಲ್ಲ್ಯಾಪುರ, ಶಿವಕುಮಾರ ಕೊಡಸಾಲಿ, ಪುರುಷೋತ್ತಮ ಗುತ್ತೇದಾರ, ಭೀಮರಾಯ ಮಲಘಾಣ, ಸುನೀಲ ರಾಜಾಪೂರ ಸೇರಿದಂತೆ ಅನೇಕರಿದ್ದರು.






