ಕಾಳಗಿ | ಸಾಲಬಾಧೆಯಿಂದ ರೈತ ಆತ್ಮಹತ್ಯೆ

ಕಾಳಗಿ : ಸಾಲಬಾಧೆಯಿಂದ ಮನನೊಂದು ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕೊಡದೂರ ಗ್ರಾಮದಲ್ಲಿ ನಡೆದಿದೆ.
ಮೃತ ರೈತನನ್ನು ನಾಗೀಂದ್ರಪ್ಪ ರೇವಣಸಿದ್ದಪ್ಪ ಕಾಳಗಿ (45) ಎಂದು ಗುರುತಿಸಲಾಗಿದೆ.
ರೈತ ನಾಗೀಂದ್ರಪ್ಪ ಅವರು ಜ.22ರಂದು ರಾತ್ರಿ ಮನೆಯಲ್ಲಿ ಕೊರಳಿಗೆ ನೇಣು ಬಿಗಿದುಕೊಂಡು ಒದ್ದಾಡುತ್ತಿದ್ದುದನ್ನು ಕುಟುಂಬಸ್ಥರು ಗಮನಿಸಿದ್ದು, ತಕ್ಷಣ ಸಾರ್ವಜನಿಕರ ಸಹಾಯದಿಂದ ರಕ್ಷಿಸಿ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜ.29ರ ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತ ರೈತ ನಾಗೀಂದ್ರಪ್ಪ ಅವರು ಸ್ವಂತವಾಗಿ ಎರಡು ಎಕರೆ ಜಮೀನು ಹೊಂದಿದ್ದು, ಸಾಲ ಮಾಡಿ ಸುಮಾರು 15 ಎಕರೆ ಭೂಮಿಯನ್ನು ಲೀಸ್ಗೆ ಪಡೆದುಕೊಂಡಿದ್ದರು. ಜಮೀನಿನಲ್ಲಿ ಬೆಳೆದಿದ್ದ ತೊಗರಿ ಬೆಳೆ ಅತಿವೃಷ್ಟಿಯಿಂದ ಸಂಪೂರ್ಣ ಹಾನಿಗೀಡಾಗಿತ್ತು. ಮಾಡಿಕೊಂಡ ಸಾಲವನ್ನು ಹೇಗೆ ತೀರಿಸಬೇಕೆಂಬ ಚಿಂತೆ ಮನಸ್ಸಿಗೆ ಬಿದ್ದು, ಇದರಿಂದಲೇ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.
ಮೃತ ರೈತನು ಕೊಡದೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಕಾಳಗಿ ಕೆಜಿಬಿ ಬ್ಯಾಂಕ್ ಸೇರಿದಂತೆ ಖಾಸಗಿ ಮೂಲಗಳಿಂದ ಒಟ್ಟು ಸುಮಾರು 10 ಲಕ್ಷ ರೂ. ಸಾಲ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಈ ಕುರಿತು ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.







