ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಹೆಚ್ಚು ಮಂತ್ರಿ ಸ್ಥಾನ ನೀಡಬೇಕು: ಡಾ.ಲಕ್ಷ್ಮಣ ದಸ್ತಿ ಒತ್ತಾಯ

ಕಲಬುರಗಿ: ನೂತನ ಮಂತ್ರಿಮಂಡಲದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಕನಿಷ್ಠ ಎಂಟಕ್ಕೂ ಮೇಲ್ಪಟ್ಟು ಮಂತ್ರಿ ಸ್ಥಾನಗಳು ನೀಡಬೇಕೆಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವಾಧ್ಯಕ್ಷರಾದ ಬಸವರಾಜ ದೇಶಮುಖ್ ಮತ್ತು ಸಂಸ್ಥಾಪಕ ಅಧ್ಯಕ್ಷರಾದ ಡಾ. ಲಕ್ಷ್ಮಣ ದಸ್ತಿ ಕಾಂಗ್ರೆಸ್ ಹೈಕಮಾಂಡಗೆ ಒತ್ತಾಯಿಸಿದ್ದಾರೆ.
ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ನೀರಾವರಿ, ಲೋಕೋಪಯೋಗಿ, ಕೈಗಾರಿಕೆ, ಪ್ರೌಢ ಶಿಕ್ಷಣ, ಯೋಜನಾ, ಆರೋಗ್ಯ ಮತ್ತು ವೈದ್ಯಕೀಯ, ಉನ್ನತ ಶಿಕ್ಷಣ, ಪ್ರವಾಸೋಧ್ಯಮ ಸೇರಿದಂತೆ ಅಭಿವೃದ್ಧಿಗೆ ಪೂರಕವಾದ ಸ್ಥಾನಗಳು ನೀಡಲು ಸಮಿತಿ ಆಗ್ರಹಿಸಿದೆ.
ಗೋವಿಂದರಾವ್ ಸಮಿತಿ ವರದಿಯನ್ನು ಆಧಾರವಾಗಿಟ್ಟುಕೊಂಡು ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಮತ್ತು 371ನೇ ಜೇ ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಈಗಾಗಲೇ ಸರಕಾರ ತೀರ್ಮಾನಿಸಿರುವಂತೆ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಪ್ರತ್ಯೇಕ ಸಚಿವಾಲಯ ಕಾಲಮಿತಿಯಲ್ಲಿ ಅನುಷ್ಠಾನಕ್ಕೆ ಕ್ರಮಕೈಗೊಳ್ಳವುದು ಅತಿ ಅವಶ್ಯಕವಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಮತ್ತು ಅದರ ಉಸ್ತುವಾರಿಯನ್ನು ಕಲ್ಯಾಣ ಕರ್ನಾಟಕ ಭಾಗದ ಸಚಿವರಿಗೆ ಮಾತ್ರ ನೀಡಬೇಕು ಎಂದು ಆಗ್ರಹಿಸಿದೆ.
ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಯ ಬಗ್ಗೆ ಸಂಪೂರ್ಣ ಮಾಹಿತಿ ಇರುವ ಮತ್ತು ಅಭಿವೃದ್ಧಿಗೆ ಕೈಗೊಳ್ಳುಬೇಕಾದ ಕ್ರಮಗಳ ಬಗ್ಗೆ ಅರಿವು ಇರುವ ರಾಷ್ಟ್ರ ಮಟ್ಟದ ನಾಯಕರು, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಒತ್ತಾಯಿಸಿದೆ.






