ಕೆೆಕೆಆರ್ ಡಿಬಿ ಮಂಡಳಿ ಸಭೆ: 5,000 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆ ರೂಪಿಸಲು ಸಭೆಯಲ್ಲಿ ಒಪ್ಪಿಗೆ

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 2026-27ನೇ ಆರ್ಥಿಕ ಸಾಲಿಗೆ ರಾಜ್ಯ ಸರ್ಕಾರದಿಂದ ಹಂಚಿಕೆಯಾದ 5,000 ಕೋಟಿ ರೂ. ಮೊತ್ತದ ಅನುದಾನಕ್ಕೆ ಕ್ರಿಯಾ ಯೋಜನೆ ರೂಪಿಸಲು ಸೋಮವಾರ ನಡೆದ ಮಂಡಳಿ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡಿದೆ.
ಮೈಕ್ರೋ ಮತ್ತು ಮ್ಯಾಕ್ರೊ ನಿಧಿಗೆ 2,900 ಕೋಟಿ ರೂ.ಕಾಯ್ದಿರಿಸಿದ್ದು, ಇದರಲ್ಲಿ ಮೈಕ್ರೋಗೆ ಶೇ.70 ಮತ್ತು ಮ್ಯಾಕ್ರೋಗೆ ಶೇ.30 ಅನುದಾನ ಬಳಸಿಕೊಳ್ಳಲು ನಿರ್ಧರಿಸಿದೆ. ಅಲ್ಲದೆ ಬಜೆಟ್ ನಲ್ಲಿ ಘೋಷಿಸುವ ಯೋಜನೆಗಳಿಗೆ 1500 ಕೋಟಿ ರೂ., ಉನ್ನತ ಶಿಕ್ಷಣ ಮತ್ತು ವಿಶ್ವವಿದ್ಯಾನಿಲಯಕ್ಕೆ 100 ಕೋಟಿ ರೂ., ಪ್ರಾದೇಶಿಕ ನಿಧಿ ಒಳಗೊಂಡಂತೆ ಸಿ.ಎಂ, ಮಂಡಳಿ ಅಧ್ಯಕ್ಷರು, ಸರ್ಕಾರದ ವಿವೇಚನಾ ನಿಧಿಗೆ 450 ಕೋಟಿ ರೂ. ಹಾಗೂ ಆಡಳಿತಾತ್ಮಕ ವೆಚ್ಚಕ್ಕೆ 50 ಕೋಟಿ ರೂ. ಅನುದಾನ ಬಳಕೆಗೆ ಒಮ್ಮತದ ನಿರ್ಣಯ ಕೈಗೊಂಡಿದೆ.
ಮೈಕ್ರೊ ಯೋಜನೆಯಡಿ ಸಾಂಸ್ಥಿಕ ವಲಯ ಅಭಿವೃದ್ಧಿಗೆ ಮೀಸಲಾದ ಅನುದಾನದಲ್ಲಿ ಅಕ್ಷರ ಅವಿಷ್ಕಾರಕ್ಕೆ 25% ಇತರೆ ಸಾಂಸ್ಥಿಕ ವಲಯಕ್ಕೆ 15% ಹಾಗೂ ಮೂಲಭೂತ ಸೌಲಭ್ಯ ಕಾರ್ಯಕ್ಕೆ ಶೇ.60ರಷ್ಟು ಅನುದಾನ ನಿಗದಿ ಮಾಡಲಾಗಿದೆ. ಅದೇ ರೀತಿ ಇದೇ ಮೊದಲ ಬಾರಿಗೆ ಆಯವ್ಯಯದಲ್ಲಿ ಘೋಷಿಸಿದಂತೆ ಮ್ಯಾಕ್ರೋ ಯೋಜನೆ ಅನುದಾನದಡಿ ಶೇ.40ರಷ್ಟು ಅನುದಾನ ಆರೋಗ್ಯ, ಶಿಕ್ಷಣ, ಹಾಗೂ ಅಪೌಷ್ಟಿಕತೆ ನಿವಾರಣೆಗೆ ಮೀಸಲಿರಿಸಲು ಸಭೆ ಒಪ್ಪಿಗೆ ಸೂಚಿಸಿದೆ.
ಬೀದರ್-ಬೆಂಗಳೂರು ಆರ್ಥಿಕ ಕಾರಿಡಾರ್ ಆಗಿ ಪರಿವರ್ತನೆಗೆ 4 ಪಥದ 400 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲು 8,200 ಕೋಟಿ ರೂ. ಅನುದಾನ ಅವಶ್ಯಕತೆ ಇದ್ದು, ಇದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಭರಿಸಿ ಅಭಿವೃದ್ಧಿಪಡಿಸಲು ಮತ್ತು ರಾಜ್ಯ ಸರ್ಕಾರದ ಮಾದರಿಯಲ್ಲಿ ಮಂಡಳಿಗೆ ಕೇಂದ್ರ ಸರಕಾರ ಸಹ ಮ್ಯಾಚಿಂಗ್ ಗ್ರ್ಯಾಂಟ್ ಅನುದಾನ ಬಿಡುಗಡೆ ಮಾಡಬೇಕೆಂದು ನಿರ್ಧರಿಸಿ ಸಭೆ ಠರಾವು ಪಾಸು ಮಾಡಿದೆ.
ಇನ್ನು ಮಂಡಳಿಗೆ ಮಾಹಿತಿ ಇಲ್ಲದೆ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗಳಿಗೆ ಮಂಜೂರಾತಿ ನೀಡಿ ಮಂಡಳಿಯಿಂದ ಅನುದಾನ ಹಂಚಿಕೆ ಮಾಡುತ್ತಿದ್ದು, ಇದು ಸರಿಯಾದ ಕ್ರಮವಲ್ಲ. ಯೋಜನೆಗೆ ಒಪ್ಪಿಗೆ ನೀಡುವ ಮುನ್ನ ಆಯಾ ಇಲಾಖೆಗಳು ಮಂಡಳಿಯ ಅನುಮತಿ ಪಡೆಯಬೇಕು. ಈ ನಿಟ್ಟಿನಲ್ಲಿ ಮಂಡಳಿಯು ಎಲ್ಲಾ ಇಲಾಖೆಗೆ ಪತ್ರ ಬರೆಯುವಂತೆ ಸಭೆಯಲ್ಲಿ ಭಾಗಹಿಸಿದ್ದ ಸಚಿವರು, ಶಾಸಕರು ಸಲಹೆ ನೀಡಿದರು.
ಇನ್ನು ಪ್ರಸಕ್ತ 2026-27ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಲಾದ ಯೋಜನೆಗೆ ಮಂಡಳಿ ಪಾಲಿನ ಅನುದಾನ ನೀಡಲು ಒಪ್ಪಿಗೆ ಸೂಚಿಸಿದೆ. ಇದಲ್ಲದೆ ಈ ವರ್ಷ ಸಹ ಅಕ್ಷರ ಆವಿಷ್ಕಾರ ಯೋಜನೆಯಡಿ ಪ್ರತಿ ತಾಲೂಕಿಗೆ ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗೆ ತಲಾ 25 ಲಕ್ಷ ರೂ. ವಿಶೇಷ ಅನುದಾನ ನೀಡಲು ಸಭೆ ಸಮ್ಮತಿಸಿದೆ.
ಇನ್ನು ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕೈಗಾರಿಕೆ, ಪ್ರವಾಸೋದ್ಯಮ, ಕೃಷಿ ಹಾಗೂ ಜವಳಿ ನೀತಿಯಲ್ಲಿ ಪ್ರದೇಶದಲ್ಲಿ ಹೆಚ್ಚು ಹೂಡಿಕೆಯಾಗಿ ಸ್ಥಳೀಯರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಪ್ರೋತ್ಸಾಹ, ಸಬ್ಸಿಡಿ ನೀಡಬೇಕು. ಕೈಗಾರಿಕೆ ಇಲಾಖೆಯಿಂದ ಪ್ರತ್ಯೇಕ ಕೈಗಾರಿಕೆ ನೀತಿಗೆ ಮಂಡಳಿಯು ಎಷ್ಟು ಪ್ರೋತ್ಸಾಹ ಧನ ನೀಡಬಹುದು ಎಂದು ಕೇಳಿದ್ದಾರೆ. ಆದರೆ ಮಂಡಳಿ ಯಾವುದೇ ಪ್ರೋತ್ಸಾಹ ಧನ ನೀಡಲ್ಲ. ಅದನ್ನು ರಾಜ್ಯ ಸರಕಾರವೇ ಮಾಡಬೇಕು ಎಂದು ಸಭೆಯಲ್ಲಿ ಸರ್ವ ಸಮ್ಮತದ ನಿರ್ಣಯ ತೆಗೆದುಕೊಂಡಿದೆ.
ಸಭೆಯಲ್ಲಿ ಮಂಡಳಿ ಸದಸ್ಯರಾಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಸಚಿವ ಪ್ರಿಯಾಂಕ್ ಖರ್ಗೆ, ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವ ಈಶ್ವರ ಖಂಡ್ರೆ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪುರ, ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು, ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್, ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರು ಹಾಗೂ ಆಳಂದ ಶಾಸಕ ಬಿ.ಆರ್.ಪಾಟೀಲ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಮತ್ತು ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ವಿಧಾನ ಪರಿಷತ್ ಶಾಸಕ ಭೀಮರಾವ ಪಾಟೀಲ್, ಪ್ರಾದೇಶಿಕ ಆಯುಕ್ತರಾದ ಜಹೀರಾ ನಸ್ಸೀಮ್, ಯೋಜನಾ ಸಲಹಾ ಸಮಿತಿ ಸದಸ್ಯೆ ಪ್ರೊ.ಛಾಯಾ ದೇಗಾಂವಕರ್, ಮಂಡಳಿ ಉಪ ಕಾರ್ಯದರ್ಶಿ ಸುರೇಖಾ ಕಿರಣಗಿ, ಜಂಟಿ ನಿರ್ದೇಶಕಿ ಪ್ರವೀಣ ಪ್ರಿಯಾ ಸೇರಿದಂತೆ ಇತರ ಅಧಿಕಾರಿಗಳಿದ್ದರು.






