ಮದಗುಣಕಿ: ಗುರುಪೂರ್ಣಿಮಾ ಮಹೋತ್ಸವ, ಪುಸ್ತಕ ಬಿಡುಗಡೆ

ಆಳಂದ: ತಾಲೂಕಿನ ಮದಗುಣಕಿ ಗ್ರಾಮದ ಶ್ರೀ ಶಿವಲಿಂಗೇಶ್ವರ ವಿರಕ್ತ ಮಠದಲ್ಲಿ ಗುರುಪೂರ್ಣಿಮೆಯ ಅಂಗವಾಗಿ ಮಾದನಹಿಪ್ಪರಗಾ ಹಾಗೂ ಶಾಖಾ ಮಠ ಮದಗುಣಕಿ ಮಠದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳಿಗೆ ಭಕ್ತಾದಿಗಳು ನೆರವೇರಿಸಿದ ಗುರುವಂದನೆ, ಪ್ರವಚನ ಹಾಗೂ ಮದಗುಣಕಿ ಇತಿಹಾಸ ಪುಸ್ತಕ ಬಿಡುಗಡೆ ಸಮಾರಂಭ ಜರುಗಿತು.
ಶ್ರೀ ಮಠದ ಪೀಠಾಧಿಪತಿಗಳಾದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳವರಿಗೆ ಸದ್ಭಕ್ತರಿಂದ 'ಗುರುವಂದನಾ' ಕಾರ್ಯಕ್ರಮವನ್ನು ಭಕ್ತಿಪೂರ್ವಕವಾಗಿ ನೆರವೇರಿಸಲಾಯಿತು.
ಆರಂಭದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಕುಂಭಮೇಳದೊoದಿಗೆ ಶ್ರೀ ಶಿವಲಿಂಗೇಶ್ವರ ವಿರಕ್ತ ಮಠದವರೆಗೆ ನಡೆದ ಅದ್ಧೂರಿ ಮೆರವಣಿಗೆಯು ಭಕ್ತರ ಕಣ್ಮನ ಸೆಳೆಯಿತು.
ನಂತರ ‘ಗುರು ಕರುಣೆ’ ಪ್ರವಚನ ಕಾರ್ಯಕ್ರಮದಲ್ಲಿ ಗದುಗಿನ ನೂರೊಂದಯ್ಯ ಶಾಸ್ತ್ರಿ ಪ್ರವಚನ ನಡೆಸಿಕೊಟ್ಟರು. ಗವಾಯಿ ಅಪ್ಪಾಸಾಹೇಬ ಆರ್. ಪಾಟೀಲ, ಗುರುಶಾಂತ ಕುಂಬಾರಗೆ ಗಾಯನಕ್ಕೆ ಮಲ್ಲಯ್ಯಾ ಸ್ವಾಮಿ ತಬಲಾ ಸಾಥ್ ನೀಡಿದರು.
ಶಿಕ್ಷಕರಾದ ಅಂಬಾರಾಯ ಮಡ್ಡೆ ಮತ್ತು ಶಿವರಾಜ ಸಣಮನಿ ಅವರು ರಚಿಸಿರುವ 'ಮದಗುಣಕಿ ಗ್ರಾಮದ ಸಮಗ್ರ ಐತಿಹಾಸಿಕ ಮತ್ತು ಸಾಂಸ್ಕೃತಿಕ ದರ್ಶನ' ಎಂಬ ಮೌಲ್ಯಯುತ ಕೃತಿಯನ್ನು ಶ್ರೀಗಳು ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಶರಣಿ ಶಿವದೇವಿ ತಾಯಿ ಸಮ್ಮುಖ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪುಸ್ತಕ ಪ್ರಕಾಶನ ದಾನಿಗಳಾದ ರಾಜಶೇಖರ ಅಣ್ಣಾರಾಯ ಸಣಮನಿ, ಮಹೇಶ ನಾಗೇಂದ್ರಪ್ಪ ಪಾಟೀಲ ಸನ್ಮಾನಿಸಲಾಯಿತು.
ಗ್ರಾಮದ ಮಾಣಿಕ ಎಸ್. ಬರೂಡೆ ಅವರಿಂದ ಪುಷ್ಪ ಸೇವೆ ಹಾಗೂ ರಾಜಕುಮಾರ ಭಜಂತ್ರಿ ಅವರಿಂದ ನೆನಪಿನ ಕಾಣಿಕೆ ಸೇವೆ, ಭೀಮಸೇನ ಆಳಂದ ಪರಿವಾರದವರು ಶ್ರೀಗಳ ಪಾದಪೂಜೆ ಸೇವೆ ನೆರವೇರಿಸಿ, ಆಗಮಿಸಿದ ಭಕ್ತಾದಿಗಳಿಗೆ ಅನ್ನದಾಸೋಹದ ವ್ಯವಸ್ಥೆ ಕಲ್ಪಿಸಿದ್ದರು.
ಮದಗುಣಕಿಯ ಶಿವಲಿಂಗೇಶ್ವರ ವಿರಕ್ತ ಮಠದ ಸದ್ಭಕ್ತ ಮಂಡಳಿಯು ಈ ಸಂಪೂರ್ಣ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿತ್ತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತಾದಿಗಳು ಗುರುಬೋಧೆ-ದರ್ಶನ-ಆಶೀರ್ವಾದ ಪಡೆದು ಕೃತಾರ್ಥರಾದರು. ಮಹಾಂತೇಶ ಸಣಮನಿ ನಿರೂಪಿಸಿದರು.






