ರಾಯಚೂರಿನಲ್ಲಿ ನಡೆದ ದೌರ್ಜನ್ಯ ಪ್ರಕರಣಗಳ ವಿರುದ್ಧ ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ

ಕಲಬುರಗಿ: ರಾಯಚೂರು ಜಿಲ್ಲೆಯಲ್ಲಿ ದಲಿತ ಸಮುದಾಯದ ಯುವಕರು ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ಕೊಲೆ, ಅತ್ಯಾಚಾರ, ಜಾತಿ ನಿಂದನೆ ಸೇರಿದಂತೆ ವಿವಿಧ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಕಲಬುರಗಿ ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ತಿಮ್ಮಾಪುರಿ ಸರ್ಕಲ್ನಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿತು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ರಾಯಚೂರು ಜಿಲ್ಲೆಯಲ್ಲಿ ದಲಿತ ಸಮುದಾಯದ ಯುವಕರು ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಬೇಕು. ಕೊಲೆ, ಅತ್ಯಾಚಾರ, ಜಾತಿ ನಿಂದನೆ ಸೇರಿದಂತೆ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ದಲಿತ ಸಮುದಾಯದ ಜನರಿಗೆ ರಕ್ಷಣೆ ಒದಗಿಸುವಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ದಲಿತರು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಸಂತ್ರಸ್ತರಿಗೆ ನ್ಯಾಯ ಒದಗಿಸುವ ಜತೆಗೆ ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಜರುಗಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಸುರೇಶ್ ಮೆಂಗನ್, ವಿಭಾಗೀಯ ಸಂಚಾಲಕ ಧರ್ಮಣ್ಣ ಕೋಣೆಕರ್, ಜಿಲ್ಲಾ ಸಂಚಾಲಕ ಭೀಮೇಶ್ ಖನ್ನಾ, ಜಿಲ್ಲಾ ಸಹ ಸಂಚಾಲಕರಾದ ಶಿವಕುಮಾರ ಅಜಾದಪುರ, ರಾಣು ಮುದ್ದನಕರ್, ದವಲಪ್ಪ ಮದನ್, ಭರತ ಧನಾ, ಬಸವರಾಜ ಮಯೂರ್, ಶಿವಪುತ್ರ ಹಾಗರಗಿ, ವಿಜಯಕುಮಾರ್ ಟ್ರಿಗರ್, ವಿಜಯಕುಮಾರ್ ಜೋಗೂರ, ಶ್ಯಾಮರಾಯ ಶಿಂದೆ, ವಿಜಯ್ ವಿಜಯಕುಮಾರ್ ಶಿಂಧೆ, ಮಡಿವಾಳಪ್ಪ ಕಟ್ಟಿಮನಿ, ಸವಿತಾ ತೀರ್ಥ, ಜ್ಯೋತಿ ಕಾಂಬ್ಳೆ, ಅಭಿಷೇಕ್ ಉಪಾಧ್ಯಾಯ, ವಿಠ್ಠಲ್ ಹಾಗರಗಿ, ಗುಂಡಪ್ಪ ಮಂದೇವಾಲ್, ಜಗದೀಶ್ ಸಾಗರ್, ಬಸವರಾಜ್ ಬಿಲ್ಕರ್, ಗೌತಮ್ ಉಪಾಧ್ಯಾಯ, ಮಹೇಶ್ ರಾಂಪುರೆ, ಮಲ್ಲಿಕಾರ್ಜುನ ಹೊಸಮನಿ, ದಯಾನಂದ ಕೊಹಿನೂರ್, ಕಪಿಲ ಧನ್ನಿ, ಅರುಣ್ ಕುಮಾರ್ ಇನಾಮದಾರ್, ನವೀನ್ ಡಾಂಗೆ, ಪಾಂಡುರಂಗ ಬಿಲ್ಕರ್, ಶ್ರೀಶೈಲ್ ಮಂದೇವಾಲ, ಮಾಂತೇಶ್ವರಿ ಜ್ಞಾನಗೊಳ, ಸರೋಜಿನಿ ಯಳಸಂಗಿ, ಮಾಯಾದೇವಿ ಬಂಡಾರಿ ಸೇರಿದಂತೆ ಹಲವು ಮುಖಂಡರು ಹಾಗೂ ಹೋರಾಟಗಾರರು ಭಾಗವಹಿಸಿದ್ದರು.






