ಬಸವೇಶ್ವರ ನಗರದ ರಾಘವೇಂದ್ರ ಮಠದಲ್ಲಿ 355ನೇ ಪೂರ್ವ ಆರಾಧನಾ ಮಹೋತ್ಸವ: ಸಚಿವ ಡಾ. ಅಜಯ್ ಸಿಂಗ್ಗೆ ಸನ್ಮಾನ

ಜೇವರ್ಗಿ: ಪಟ್ಟಣದ ಬಸವೇಶ್ವರ ನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಪೂರ್ವ ಆರಾಧನೆ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ-ಭಕ್ತಿಯಿಂದ ಜರುಗಿದವು.
ಪೂರ್ವ ಆರಾಧನೆ ಸಂದರ್ಭದಲ್ಲಿ ಮಠದ ಅರ್ಚಕರಾದ ಸರ್ವೋತ್ತಮಾಚಾರ್ಯ ಜೋಶಿ ಅವರು ಶ್ರೀಗಳ ವೃಂದಾವನಕ್ಕೆ ವಿಶೇಷ ಪೂಜೆ ಹಾಗೂ ಅಲಂಕಾರವನ್ನು ನೆರವೇರಿಸಿದರು. ಆರಾಧನಾ ಮಹೋತ್ಸವದ ನಿಮಿತ್ತ ಬೆಳಗ್ಗೆಯಿಂದಲೇ ಸುಪ್ರಭಾತ, ಅಷ್ಟೋತ್ತರ, ಪಂಚಾಮೃತ ಅಭಿಷೇಕ ಹಾಗೂ ಆಗಮಿಸಿದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಈ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ರಾಜ್ಯದ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ. ಅಜಯ್ ಸಿಂಗ್ ಅವರು ಆಗಮಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ತಾಲೂಕು ಬ್ರಾಹ್ಮಣ ಸಮಾಜದ ವತಿಯಿಂದ ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ರಮೇಶ್ ವಕೀಲ ಅವರು ಸಚಿವರನ್ನು ಸನ್ಮಾನಿಸಿದರು.
ಸಂಜೆ ಶ್ರೀಮತಿ ಐಶ್ವರ್ಯ ಗುರುರಾಜ್ (ನೃತ್ಯಪ್ರಿಯ ನೃತ್ಯಕಲಾ ಕೇಂದ್ರ, ಕಲಬುರಗಿ) ಅವರಿಂದ ಭರತನಾಟ್ಯ ಕಾರ್ಯಕ್ರಮ ಹಾಗೂ ರಾತ್ರಿ ಮಹಾ ಮಂಗಳಾರತಿಯೊಂದಿಗೆ ಇಂದಿನ ಆರಾಧನಾ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಅಂಜುಮ್ ತಬಸ್ಸುಮ್, ಸಮಾಜದ ಮುಖಂಡರಾದ ರಾಜೇಂದ್ರ ಕುಲಕರ್ಣಿ, ಮುದ್ಗಲರಾವ್ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ, ವಿನೋದ್ ಸಾತಖೇಡ, ಸುಧೀಂದ್ರ ವಕೀಲ, ಶಾಮರಾವ್ ರೇವನೂರ್, ಸುಧೀಂದ್ರ ಆಲ್ಬಾಳ, ದತ್ತಾತ್ರೇಯರಾವ್ ಕುಲಕರ್ಣಿ, ಭೀಮಸೇನ ಜೋಶಿ, ರವೀಂದ್ರ ವಕೀಲ, ಪ್ರಕಾಶ್ ಆಲ್ಬಾಳ, ಪ್ರಶಾಂತಕುಮಾರ ಕುಲಕರ್ಣಿ, ಲಕ್ಷ್ಮೀಕಾಂತ ಕುಲಕರ್ಣಿ ಹೊತಿನಮಡು, ಗುರುರಾಜ್ ಪೊದ್ದಾರ್, ಮಲ್ಹಾರರಾವ್ ಕುಲಕರ್ಣಿ, ಅಪ್ಪಣ್ಣ ಕೂಟನೂರು, ಪ್ರವೀಣ್ ಅಲಬಾಳ್, ನಾರಾಯಣ ನಿಲೂರ್ ಸೇರಿದಂತೆ ಸಮಾಜದ ಪ್ರಮುಖರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು.






