ಕಲ್ಯಾಣ ಕರ್ನಾಟಕ ಜೈವಿಕ-ಆರ್ಥಿಕ ಮಿಷನ್ಗೆ ಸಚಿವ ಪ್ರಿಯಾಂಕ್ ಖರ್ಗೆ ಮೆಚ್ಚುಗೆ

ಕಲಬುರಗಿ: ಬೆಂಗಳೂರು ಜೈವಿಕ-ಆರ್ಥಿಕ ಮಿಷನ್ ಕೇಂದ್ರ (BBC) ವತಿಯಿಂದ ಕಲ್ಯಾಣ ಕರ್ನಾಟಕ ಜೈವಿಕ-ಆರ್ಥಿಕ ಮಿಷನ್ನ ಮಾರ್ಗಸೂಚಿಯನ್ನು ಗೃಹ, ಐಟಿ-ಬಿಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಮುಂದೆ ಮಂಡಿಸಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಪ್ರಮುಖ ಬೆಳೆಗಳಾದ ತೊಗರಿ, ಕೆಂಪು ಬಾಳೆ ಮತ್ತು ಕಬ್ಬು ಆಧಾರಿತ ಪ್ರಾದೇಶಿಕ ಜೈವಿಕ ಆರ್ಥಿಕತೆಯನ್ನು ನಿರ್ಮಿಸುವ ಸಮಗ್ರ ಯೋಜನೆಯನ್ನು ಬಿಬಿಸಿ ಅಧಿಕಾರಿಗಳು ವಿವರಿಸಿದರು.
ಮಾರ್ಗಸೂಚಿಯಲ್ಲಿ ಅಂಗಾಂಶ ಕೃಷಿ, ರೋಗಮುಕ್ತ ನೆಟ್ಟ ವಸ್ತುಗಳ ಉತ್ಪಾದನೆ, ಜೈವಿಕ ಗೊಬ್ಬರ ಹಾಗೂ ಸ್ಥಳೀಯ ಮಣ್ಣಿನ ಸೂಕ್ಷ್ಮಜೀವಿಗಳಿಂದ ಅಭಿವೃದ್ಧಿಪಡಿಸಿದ ಜೈವಿಕ ಒಳಹರಿವು, ಮೌಲ್ಯವರ್ಧನೆ ಮತ್ತು ಸಂಸ್ಕರಣೆ, ಕೃಷಿ ಉಪ ಉತ್ಪನ್ನಗಳ ಉತ್ಪಾದಕ ಬಳಕೆ, ತಂತ್ರಜ್ಞಾನ ವರ್ಗಾವಣೆ ಹಾಗೂ ಮಾರುಕಟ್ಟೆ ಸಂಪರ್ಕಗಳ ಕುರಿತು ಪ್ರಸ್ತಾವನೆ ಸಲ್ಲಿಸಲಾಯಿತು.
ಬಿಬಿಸಿಯ ವ್ಯವಸ್ಥಾಪಕ ನಿರ್ದೇಶಕ ಡಾ.ಮುಹಮ್ಮದ್ ಆದಿಲ್ ಎ.ಎ. ಅವರು ಕಲಬುರಗಿ ಪಲ್ಸ್ ಮಿಷನ್ನನ್ನೂ ಪ್ರಸ್ತುತಪಡಿಸಿದರು. ಈ ಯೋಜನೆಯು ಜಮೀನಿನಿಂದ ಮಾರುಕಟ್ಟೆಯವರೆಗೆ ಕಾಳುಬೆಳೆಗಳ ಮೌಲ್ಯ ಸರಪಳಿಯನ್ನು ಬಲಪಡಿಸುವುದು, ಸ್ಥಳೀಯ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯನ್ನು ವಿಸ್ತರಿಸುವುದು ಹಾಗೂ ರೈತರು ಮತ್ತು ರೈತ ಉತ್ಪಾದಕ ಸಂಸ್ಥೆಗಳ ಆದಾಯ ಹೆಚ್ಚಿಸುವ ಗುರಿ ಹೊಂದಿದೆ ಎಂದು ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಬೆಂಗಳೂರು ಬಯೋ ಇನ್ನೋವೇಶನ್ ಸೆಂಟರ್ ಹಾಗೂ ಕಲಬುರಗಿ ಕೃಷಿ ಇಲಾಖೆಯ ಸಹಯೋಗದಲ್ಲಿ ಸ್ಥಳೀಯವಾಗಿ ಬೆಳೆಯುವ ತೊಗರಿ, ಉದ್ದು, ಹೆಸರು ಮತ್ತು ಕಡಲೆಬೇಳೆ ಬಳಸಿ ಆರು ಬಗೆಯ ರೆಡಿ-ಟು-ಈಟ್ ಎನರ್ಜಿ ಬಾರ್ಗಳನ್ನು ಪ್ರಾಯೋಗಿಕವಾಗಿ ತಯಾರಿಸಿರುವುದು ಶ್ಲಾಘನೀಯವಾಗಿದೆ ಎಂದರು.
ಬಿಬಿಸಿಯು ಮೌಲ್ಯವರ್ಧನೆ, ಅಂಗಾಂಶ ಸಂವರ್ಧನೆ ಮತ್ತು ಜೈವಿಕ ಗೊಬ್ಬರ ತಂತ್ರಜ್ಞಾನಗಳಲ್ಲಿ ಆರಂಭಿಕ ಹಂತದ ಸಂಶೋಧನೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡುತ್ತಿದೆ. ಕಲಬುರಗಿಯ ಕಾಳುಬೆಳೆಗಳನ್ನು ಕಚ್ಚಾ ಉತ್ಪನ್ನಗಳಿಂದ ಮೌಲ್ಯವರ್ಧಿತ ಹಾಗೂ ಬ್ರಾಂಡೆಡ್ ಉತ್ಪನ್ನಗಳಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.
ಈ ಯೋಜನೆಯಿಂದ ರೈತರಿಗೆ ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ಮೌಲ್ಯ ದೊರೆಯಲಿದ್ದು, ಎಫ್ಪಿಒಗಳು, ಸ್ವಸಹಾಯ ಸಂಘಗಳು ಮತ್ತು ಎಂಎಸ್ಎಂಇಗಳಿಗೆ ಹೊಸ ಉದ್ಯಮ ಅವಕಾಶಗಳು ಸೃಷ್ಟಿಯಾಗಲಿವೆ. ಜೊತೆಗೆ ಉತ್ತಮ ಪೌಷ್ಟಿಕಾಂಶಯುಕ್ತ ಉತ್ಪನ್ನಗಳು ಹಾಗೂ ಬಲಿಷ್ಠ “ಕಲಬುರಗಿ ಪಲ್ಸಸ್” ಬ್ರ್ಯಾಂಡ್ ರೂಪುಗೊಂಡು ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಕರ್ನಾಟಕ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸೈಯದ್ ಮಹೆಮೂದ್ ಚಿಸ್ತಿ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಜಿಲ್ಲಾಧಿಕಾರಿ ಇಕ್ರಂ ಶರೀಫ್, ಜಿಲ್ಲಾ ಪಂಚಾಯತ್ ಸಿ.ಇ.ಓ ರಾಹುಲ್ ಶರಣಪ್ಪ ಸಂಕನೂರ್, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ತೋಟಗಾರಿಕೆ ಜಂಟಿ ನಿರ್ದೇಶಕ ಸಂತೋಷ ಇನಾಂದಾರ ಇದ್ದರು.






