ಮಹಾರಾಷ್ಟ್ರದಲ್ಲಿ ಕೆಕೆಆರ್ಟಿಸಿ ಬಸ್ ಚಾಲಕನ ಮುಖಕ್ಕೆ ಕಪ್ಪು ಮಸಿ ಬಳಿದ ದುಷ್ಕರ್ಮಿಗಳು

ಕಲಬುರಗಿ : ಮಹಾರಾಷ್ಟ್ರದ ಪುಣೆಯಲ್ಲಿ ಸ್ವಾರ್ ಗೇಟ್ ಓವರ್ ಬ್ರಿಡ್ಜ್ ದಾಟುವ ಸಂದರ್ಭದಲ್ಲಿ ಆಳಂದ-ಸೋಲಾಪೂರ-ಪುಣೆ ಬಸ್ ಸೇರಿದಂತೆ ಬಸ್ ಚಾಲಕನ ಮುಖಕ್ಕೆ ಕೆಲ ಪುಂಡರು ಕಪ್ಪು ಮಸಿ ಬಳಿದು ಉದ್ದಟತನ ಮೆರೆದಿರುವ ಘಟನೆ (ಮಂಗಳವಾರ) ರಾತ್ರಿ ನಡೆದಿದೆ.
ಇತ್ತೀಚೆಗೆ ಬೆಳಗಾವಿಯ ಬಾಳೇಕುಂದ್ರಿಯ ಕೆ.ಎಚ್. ಗ್ರಾಮದ ಬಳಿ ಕರ್ನಾಟಕ ರಾಜ್ಯ ಸಾರಿಗೆ ಬಸ್ಸಿನ ಕಂಡಕ್ಟರ್ ಮೇಲೆ ಮರಾಠಿ ಪ್ರಯಾಣಿಕರೊಂದಿಗೆ ಮರಾಠಿಯಲ್ಲಿ ಮಾತನಾಡದ ಕಾರಣ ಹಲ್ಲೆ ನಡೆದಿತ್ತು. ಆದರೆ ಇದೀಗ ಮತ್ತೆ ಕೆಲ ಪುಂಡರು ಕರ್ನಾಟಕದ ಬಸ್ಸುಗಳನ್ನು ಗುರಿಯಾಗಿಸಿ ಪುಣೆಯ ಸ್ವಾರ್ ಗೇಟ್ ಬ್ರಿಡ್ಜ್ ದಾಟುವಾಗ ಬಸ್ ಅನ್ನು ನಿಲ್ಲಿಸಿ, ಚಾಲಕನನ್ನು ಕೆಳಗೆ ಇಳಿಸಿ ಬಸ್ಸಿಗೆ ಹಾಗೂ ಡ್ರೈವರ್ ಮುಖಕ್ಕೆ ಕಪ್ಪು ಮಸಿ ಬಳಿದು ಬಸ್ಸಿನ ಮೇಲೆ 'ಜೈ ಮಹಾರಾಷ್ಟ್ರ ', 'ಜೈ ಮರಾಠಿ' ಎಂದು ಬರೆದಿದ್ದಾರೆ.
ಅಲ್ಲದೇ ನೀವು(ಕರ್ನಾಟಕದವರು) ಮರಾಠಿಗರನ್ನು ಕೆಣಕಬೇಡಿ, ನಾವು ಪುಂಡರು ನಮ್ಮ ತಂಟೆಗೆ ಬಂದರೆ ನಾವು ಸುಮ್ಮನಿರಲ್ಲ ಹಾಗೂ ನಮ್ಮವರನ್ನು(ಮರಾಠಿಗರನ್ನು) ಕರ್ನಾಟಕದಲ್ಲಿ ಏನಾದರೂ ಮಾಡಿದರೆ ನಿಮ್ಮನ್ನು ಇಲ್ಲಿ ಬರಲು ಬಿಡುವುದಿಲ್ಲ, ನಿಮಗೆ ಉಳಿಗಾಲವಿಲ್ಲ ಎಂದು ಘೋಷಣೆಗಳನ್ನು ಕೂಗಿದ್ದಾರೆ.
ನಿಮ್ಮ ಸರಕಾರಕ್ಕೆ ಹೇಳಿ, ಬೇಷರತ್ತಾಗಿ ಮರಾಠಿಗರ ಬಳಿ ಕ್ಷಮೆ ಕೇಳಿ ಎಂದು ಬಸ್ ಚಾಲಕ ಸಾದೀಕ ಮುಲಗೆ ಪಡಸಾವಳಿ ಅವರಿಗೆ ಧಮ್ಕಿ ಹಾಕಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಪುಣೆಯ ಹೊರ ವಲಯದಲ್ಲಿ ಮರಾಠಿ ಕಿಡಿಗೇಡಿಗಳು ಈ ರೀತಿ ಘಟನೆ ಮಾಡಿದ್ದಾರೆಂದು ಚಾಲಕ ಸಾದೀಕ ಮುಲಗೆ ಪಡಸಾವಳಿ ಮತ್ತು ನಿರ್ವಾಹಕ ಪರಮೇಶ್ವರ್ ಅವರ ನನ್ನ ಗಮನಕ್ಕೆ ತಂದಿದ್ದಾರೆ. ಕೂಡಲೇ ಈ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಫೆ.27ರ ರಾತ್ರಿಯಿಂದಲೇ ಪುಣೆಗೆ ಹೋಗುವ ಆಳಂದ ಬಸ್ ರದ್ದುಪಡಿಸಲಾಗಿದೆ. ಈ ಪ್ರಕರಣ ಕುರಿತು ಘಟನೆ ನಡೆದ ಸ್ಥಳದ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ, ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಪತ್ರ ಬರೆಯುತ್ತೇನೆ.
ಯೋಗಿರಾಜ ಸರಸಂಬಿ, ಘಟಕ ವ್ಯವಸ್ಥಾಪಕರು, ಬಸ್ ಡಿಪೋ, ಆಳಂದ.







