ಮದರ್ ತೆರೇಸಾ ಆಸ್ಪತ್ರೆಯ ಸೇವಾ ಕಾರ್ಯಗಳಿಗೆ 10 ಲಕ್ಷ ರೂ. ಅನುದಾನ ಘೋಷಿಸಿದ ಶಾಸಕ ಬಸವರಾಜ ಮತ್ತಿಮಡು
ಮದರ್ ತೆರೇಸಾ ಜಯಂತಿ ಅಂಗವಾಗಿ ಅಂತರ್ಧರ್ಮೀಯ ಹಬ್ಬಾಚರಣೆ

ಕಲಬುರಗಿ : ನಗರದ ಹೊರವಲಯದಲ್ಲಿರುವ ಮದರ್ ತೆರೇಸಾ ಆಸ್ಪತ್ರೆ ಆವರಣದಲ್ಲಿ ಸೋಮವಾರ ಅಂತರ್ಧರ್ಮೀಯ ಮದರ್ ತೆರೇಸಾ ಹಬ್ಬಾಚರಣೆ ಹಾಗೂ ಸಮಾಜಮುಖಿ ಸೇವಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ಮದರ್ ತೆರೇಸಾ ಆಸ್ಪತ್ರೆ ಬಡವರು ಮತ್ತು ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಮೂಲಕ ಸಮಾಜಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಶ್ಲಾಘಿಸಿದರು.
ಆಸ್ಪತ್ರೆಯ ವಿವಿಧ ಜನಪರ ಚಟುವಟಿಕೆಗಳಿಗೆ ತಮ್ಮ ಶಾಸಕ ನಿಧಿಯಿಂದ 10 ಲಕ್ಷ ರೂ. ಅನುದಾನ ನೀಡುವುದಾಗಿ ಇದೇ ವೇಳೆ ಘೋಷಿಸಿದರು. ಸಂಸ್ಥೆಯ ಮನವಿ ಪತ್ರ ಸ್ವೀಕರಿಸಿದ ಅವರು, ಅಗತ್ಯ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಬರ್ಟ್ ಮೈಕಲ್ ಮಿರಂದಾ ಅವರು ಮದರ್ ತೆರೇಸಾ ಅವರ ಮಾನವೀಯ ಸೇವೆ, ಕರುಣೆ ಮತ್ತು ಸಮಾಜದ ದುರ್ಬಲ ವರ್ಗಗಳಿಗಾಗಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿ, ಸೇವಾ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ‘ಮಾನಸ ಜ್ಯೋತಿ’, ‘ಮದರ್ ಕೇರ್’, ‘ದಿವ್ಯ ಸ್ಪರ್ಶ’ ಮತ್ತು ‘ಆರೋಗ್ಯ ಸಾಥಿ’ ಎಂಬ ನಾಲ್ಕು ನೂತನ ಸೇವಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಆಯೋಜಕರಾದ ಫಾದರ್ ಅನೀಲ್ ವರ್ಗಿಸ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮದರ್ ತೆರೇಸಾ ಸೇವಾ ಪ್ರಶಸ್ತಿಯನ್ನು ಆನಂದ ರಾಜ್, ಆಲೂರು ವೆಂಕಟ್, ವಿಲ್ಸನ್ ಪರೇರಾ, ಸೆಲೆನ್ ಡಿಸೋಜಾ, ಪತ್ರಕರ್ತ ರಾಜು ಕೋಸ್ಗಿ, ಜಿಎಸ್ಕಾಂ ಸಿಬ್ಬಂದಿ ಶೈಲೇಂದ್ರ ಹಾಗೂ ಸೈಯದ್ ಇಕ್ಬಾಲ್ ಅಲಿ ಅವರಿಗೆ ಪ್ರದಾನಿಸಲಾಯಿತು.
ಶೈಲಾಜ ಅವರು ಸಂವಿಧಾನದ ಪೀಠಿಕೆಯನ್ನು ವಾಚಿಸಿದರು. ಶೈಲೆನ್ ಡಿಸೋಜಾ ಸಂಸ್ಥೆಯ ವಿವಿಧ ಸೇವಾ ಕಾರ್ಯಗಳನ್ನು ಪರಿಚಯಿಸಿದರು. ಶ್ರೀರಾಮ ಶಾಲೆಯ ವಿದ್ಯಾರ್ಥಿಗಳ ಸಂಗೀತ ಮತ್ತು ನೃತ್ಯ ಪ್ರದರ್ಶನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ಕ್ರಿಶ್ಚಿಯನ್ ಕಮಿಟಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಜಯ ಜಾಗಿರದಾರ್ ಮಾತನಾಡಿ, ಬಿಷಪ್ ಮೈಕಲ್ ಮಿರಂದಾ ಅವರ ಸಮಾಜಮುಖಿ ಸೇವೆಯನ್ನು ಗುರುತಿಸಿ ಕಲ್ಯಾಣ ಕರ್ನಾಟಕ ಉತ್ಸವದ ಸಂದರ್ಭದಲ್ಲಿ ಸರ್ಕಾರದಿಂದ ಗೌರವಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಫಾದರ್ ಸಂತೋಷ್ ಬಾಪು, ಚೇಂಬರ್ ಆಫ್ ಕಾಮರ್ಸ್ ಸದಸ್ಯ ಶರಣಪ್ಪ, ಅವಿನಾಶ್ ದೊಡ್ಡಮನಿ, ಸ್ಟ್ಯಾನ್ಲಿ ಲೋಬೋ, ಸಂತೋಷ್ ವರ್ಗಿಸ್, ಫಾದರ್ ಸುನೀಲ್, ಔರಾದ್ ಪಿಡಿಒ ಬಂಡ್ಯಪ್ಪ ಎಸ್. ಧನ್ನಿ, ರೋಟರಿ ಕ್ಲಬ್ ಅಧ್ಯಕ್ಷ ಆಲೂರು, ಅರುಣ್, ಮಲ್ಲಿಕಾರ್ಜುನ, ಡಾ. ರೀಟಾ ಮಿತ್ರಾ, ಸೈಯದ್ ಅಹ್ಮದ್ ಅಲಿ, ಗೌಡೇಶ್ ಬಿರಾದಾರ್, ಫಾದರ್ ರೊನಾಲ್ಡ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.






