ಮುಂಬೈ–ಬೆಂಗಳೂರು ವಂದೇ ಭಾರತ್ ಸ್ಲೀಪರ್ ರೈಲು ಕಲಬುರಗಿ ಮಾರ್ಗವಾಗಿ ಸಂಚಾರ

ಕಲಬುರಗಿ : ಮುಂಬೈ–ಬೆಂಗಳೂರು ನಡುವಿನ ವಂದೇ ಭಾರತ ಸ್ಲೀಪರ್ ರೈಲು ಕಲಬುರಗಿ ಮಾರ್ಗವಾಗಿ ಸಂಚರಿಸಲಿರುವ ಮಹತ್ವದ ನಿರ್ಧಾರಕ್ಕೆ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಹರ್ಷ ವ್ಯಕ್ತಪಡಿಸಿದೆ.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇತ್ತೀಚೆಗೆ ಮುಂಬೈ–ಬೆಂಗಳೂರು ನಡುವೆ ವಂದೇ ಭಾರತ ಸ್ಲೀಪರ್ ರೈಲು ಆರಂಭಿಸುವುದಾಗಿ ಘೋಷಿಸಿದ್ದರೂ, ಮಾರ್ಗದ ಬಗ್ಗೆ ಸ್ಪಷ್ಟತೆ ಇಲ್ಲದ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿತ್ತು.
ಕಲಬುರಗಿ–ಬೆಂಗಳೂರು ನಡುವೆ ವೇಗವಾದ ರೈಲು ಸಂಪರ್ಕ ಕಲ್ಪಿಸುವುದು ಈ ಭಾಗದ ಜನರ ದೀರ್ಘಕಾಲದ ಬೇಡಿಕೆಯಾಗಿದ್ದು, ಈ ಕುರಿತು ಕೆಕೆಸಿಸಿಐ ಹಲವು ಬಾರಿ ಕೇಂದ್ರ ರೈಲ್ವೆ ಸಚಿವಾಲಯದ ಗಮನ ಸೆಳೆದಿತ್ತು.
ಈ ಸಂಬಂಧ 2025 ಡಿಸೆಂಬರ್ 17ರಂದು ಕೆಕೆಸಿಸಿಐ ನಿಯೋಗ ದೆಹಲಿಯಲ್ಲಿ ರೈಲ್ವೆ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಬಳಿಕ 2026 ಏಪ್ರಿಲ್ 8ರಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ಹೊಸ ರೈಲು ಸೇವೆ ಆರಂಭಿಸುವಂತೆ ಒತ್ತಾಯಿಸಿತ್ತು.
ಇದೀಗ ಏಪ್ರಿಲ್ 13ರಂದು ಪ್ರಹ್ಲಾದ್ ಜೋಶಿ ಅವರು ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಎಂ. ಪಪ್ಪಾ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ, ಮುಂಬೈ–ಬೆಂಗಳೂರು ವಂದೇ ಭಾರತ ಸ್ಲೀಪರ್ ರೈಲು ಕಲಬುರಗಿ ಮಾರ್ಗವಾಗಿ ಸಂಚರಿಸಲಿದೆ ಎಂದು ತಿಳಿಸಿದ್ದಾರೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಹಾಗೂ ಪ್ರಹ್ಲಾದ್ ಜೋಶಿ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಈ ಬೆಳವಣಿಗೆಯನ್ನು ಐತಿಹಾಸಿಕ ಸಾಧನೆ ಎಂದು ಕೆಕೆಸಿಸಿಐ ಪರಿಗಣಿಸಿದ್ದು, ಮುಂಬೈ–ಕಲಬುರಗಿ–ಬೆಂಗಳೂರು ಸಂಪರ್ಕ ಬಲಗೊಳ್ಳಲಿದೆ. ಇದರಿಂದ ವ್ಯಾಪಾರ, ಕೈಗಾರಿಕೆ, ಉದ್ಯಮಗಳಿಗೆ ಉತ್ತೇಜನ ದೊರೆಯಲಿದ್ದು, ಪ್ರಯಾಣಿಕರಿಗೆ ವೇಗವಾದ ಹಾಗೂ ಸುಗಮ ಸಂಚಾರ ಸಾಧ್ಯವಾಗಲಿದೆ. ಜೊತೆಗೆ ಕಲ್ಯಾಣ ಕರ್ನಾಟಕ ಭಾಗದ ಆರ್ಥಿಕ ಅಭಿವೃದ್ಧಿಗೂ ಇದು ಮಹತ್ವದ ಉತ್ತೇಜನ ನೀಡಲಿದೆ ಎಂದು ಮಂಡಳಿ ವಿಶ್ವಾಸ ವ್ಯಕ್ತಪಡಿಸಿದೆ.






