ಅಫಜಲಪುರದ 32 ಹಳ್ಳಿಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ಡಿಕೆಶಿ ಜೊತೆ ಎಂ.ವೈ.ಪಾಟೀಲ್ ಚರ್ಚೆ

ಅಫಜಲಪುರ : ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಕ್ಷೇತ್ರದ ಶಾಸಕ ಎಂ.ವೈ.ಪಾಟೀಲ್ ಅವರು ಭೇಟಿ ಮಾಡಿ, ಮತಕ್ಷೇತ್ರದ ಕಲಬುರಗಿ ತಾಲ್ಲೂಕಿನ ಕವಲಗಾ (ಕೆ) ಗ್ರಾಮ ಸೇರಿದಂತೆ ಒಟ್ಟು 32 ಹಳ್ಳಿಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆ ಕುರಿತು ಸುದೀರ್ಘ ಚರ್ಚೆ ನಡೆಸಿದರು.
ಸುಮಾರು 400 ಕೋಟಿ ರೂ. ವೆಚ್ಚದ ವಿಸ್ತೃತ ಯೋಜನಾ ವರದಿ (ಡಿ.ಪಿ.ಆರ್) ಈಗಾಗಲೇ ಸಿದ್ಧಗೊಂಡು ಸಲ್ಲಿಕೆಯಾಗಿರುವ ವಿಷಯವನ್ನು ಉಪಮುಖ್ಯಮಂತ್ರಿಗಳ ಗಮನಕ್ಕೆ ತಂದ ಶಾಸಕರು, ರೈತರ ಬದುಕಿಗೆ ನೇರವಾಗಿ ಬಲ ನೀಡುವ ಈ ಯೋಜನೆಯನ್ನು ಯಾವುದೇ ವಿಳಂಬವಿಲ್ಲದೆ ಶೀಘ್ರವಾಗಿ ಅನುಷ್ಠಾನಗೊಳಿಸುವಂತೆ ಮನವಿ ಮಾಡಿದರು.
ಈ ಯೋಜನೆಯಿಂದ ನೀರಾವರಿ ಸೌಲಭ್ಯ ದೊರೆತಲ್ಲಿ ಕೃಷಿಗೆ ಶಾಶ್ವತ ಪರಿಹಾರ ಸಿಗುವುದರೊಂದಿಗೆ ಭೂಮಿ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಹಾಗೂ ಗ್ರಾಮೀಣ ಆರ್ಥಿಕತೆಯ ಸಮಗ್ರ ಅಭಿವೃದ್ಧಿಗೆ ದಾರಿ ತೆರೆದುಕೊಳ್ಳಲಿದೆ ಎಂಬ ಅಂಶವನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಎಂ.ವೈ. ಪಾಟೀಲ ಅವರು ಉಪಸ್ಥಿತರಿದ್ದರು.





