ಕಲಬುರಗಿ| ಹೊಸತನದ ಬದುಕಿಗೆ ಪ್ರೇರಣೆ ನೀಡುವ ʼನೀಲಾಂಜನʼ ಗ್ರಂಥ: ಬಸವರಾಜ ಪಾಟೀಲ್ ಸೇಡಂ

ಕಲಬುರಗಿ: ಕನ್ನಡ ಸಾಹಿತ್ಯದಲ್ಲಿ ಚಿಂತನೆಯ ಬರಹಗಳಿಂದ ಪ್ರಖ್ಯಾತರಾಗಿ ಬಾಳಿಗೊಂದು ಬುತ್ತಿ ನೀಡಿದ ಡಾ. ನೀಲಮ್ಮ ಕತ್ನಳ್ಳಿ ಅವರ 'ನೀಲಾಂಜನ' ಗ್ರಂಥವು ಹೊಸತನದ ಬದುಕಿಗೆ ಪ್ರೇರಣೆ ನೀಡುತ್ತದೆ ಎಂದು ರಾಜ್ಯಸಭೆಯ ಮಾಜಿ ಸದಸ್ಯ ಬಸವರಾಜ ಪಾಟೀಲ್ ಸೇಡಂ ಹೇಳಿದ್ದಾರೆ.
ಲೇಖಕಿ ನೀಲಮ್ಮ ಕತ್ನಳ್ಳಿ ಅವರ ಅಮೃತ ಮಹೋತ್ಸವದ ಪ್ರಯುಕ್ತ ಶಹಾಬಾದ್ನ ರೇಣುಕಾ ಪ್ರಕಾಶನ ಹಾಗೂ ಅಭಿನಂದನ ಗ್ರಂಥ ಸಂಪಾದಕ ಮಂಡಳಿಯ ಸಹಯೋಗದಲ್ಲಿ ನಗರದ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ರವಿವಾರ ಆಯೋಜಿಸಿದ್ದ ‘ನೀಲಾಂಜನ’ ಅಭಿನಂದನ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
'60 ವರ್ಷದವರೆಗೂ ಮನುಷ್ಯ ಕಲಿಕೆಗೆ ತೆರೆದುಕೊಳ್ಳುತ್ತಾನೆ. 60 ವರ್ಷ ದಾಟಿದವರು ಕ್ರಿಯಾಶೀಲರಾಗಿರುತ್ತಾರೆ. ನಾನೂ 60 ವರ್ಷಗಳ ನಂತರ ಹೆಚ್ಚು ಕೆಲಸ ಮಾಡಿದ್ದೇನೆ. ಆದ್ದರಿಂದ ಹಿರಿಯರು ಕೇವಲ ವಾಯುವಿಹಾರಕ್ಕೆ ಸೀಮಿತವಾಗಬಾರದು. ಬೇರೆ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು’ ಎಂದು ಹೇಳಿದರು.
ಸಂಕಟ ಜೀವನದ ನಡುವೆ ಮೇಷ್ಟ್ರು ಆಗಿ ಕಾಯಕವನ್ನು ದೇವರ ಪೂಜೆ ಎಂದು ಅನುಭವಿಸಿದ್ದಾರೆ. ಕನ್ನಡ ಸಾಹಿತ್ಯಕ್ಕೆ 14 ಮೌಲಿಕ ಕೃತಿಗಳನ್ನು ಕೊಟ್ಟಿದ್ದಾರೆ. ಅವರ ಭವಿಷ್ಯದ ಬದುಕು ಆಧ್ಯಾತ್ಮದತ್ತ ಹೊರಳಿದೆ ಎಂದರು.
'ನೀಲಮ್ಮ ಕತ್ನಳ್ಳಿ ಅವರು ವಿಶಿಷ್ಟ ಪರಿಸ್ಥಿತಿಯಲ್ಲಿ ಮನಸ್ಸಿಗೆ ಆಘಾತವಾಗಿ ಕೆಲ ಕಾಲ ಮನೆಯಲ್ಲಿಯೇ ಕುಳಿತಿದ್ದರು. ಸಮಯಕ್ಕೆ ಮುಂಚೆಯೇ ಬಿಟ್ಟು ಹೋಗುತ್ತಾರೆ ಎಂದುಕೊಂಡಿದ್ದೆವು. ಸಮಾಜದ ಋಣ ಇರುತ್ತದೆ. ಬಸವಣ್ಣನವರ ಬದುಕನ್ನು ಆದರ್ಶವಾಗಿ ತೆಗೆದುಕೊಂಡು ಬದುಕಬೇಕು' ಎಂದು ಹೇಳಿದರು.
ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ ಮಾತನಾಡಿ, ‘ನೀಲಮ್ಮ ತಮ್ಮ ವ್ಯಕ್ತಿತ್ವವನ್ನು ತಾವೇ ನಿರ್ಮಾಣ ಮಾಡಿಕೊಂಡಿದ್ದಾರೆ. ಪ್ರೊ. ವಸಂತ ಕುಷ್ಟಗಿಯವರ ಯೋಗ್ಯ ಮಾರ್ಗದರ್ಶನ ಅವರಿಗೆ ಸಿಕ್ಕಿತು. ಗುಮಾಸ್ತೆಯಾಗಿ ಕೆಲಸ ಮಾಡಿದ ಕಾಲೇಜಿನಲ್ಲಿಯೇ ಉಪನ್ಯಾಸಕಿಯಾಗಿ ನೇಮಕವಾಗುವ ಮಟ್ಟಕ್ಕೆ ಅವರು ಬೆಳೆದರು’ ಎಂದರು.
ಗ್ರಂಥ ಕುರಿತು ಮಾತನಾಡಿದ ಪತ್ರಕರ್ತ, ಸಾಹಿತಿ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ , ಬದುಕಿನ ಬವಣೆಗಳ ಮಡುವನ್ನು ದಾಟಿಕೊಂಡು ಬದುಕಿದ ಮಾದರಿಯ ವ್ಯಕ್ತಿತ್ವ. ಸಿಮೆಂಟು ಧೂಳಿನ ಶಹಾಬಾದ್ ನಗರಿಯಲ್ಲಿ ಕಲ್ಲರಳಿ ಹೂವಾದವರು ಎಂದರು.
ಬರಹದಲ್ಲಿ ಭಾಷೆಯ ಲಾಲಿತ್ಯ, ಪ್ರಾದೇಶಿಕ ಭಾಷೆಗೆ ತಳಕು ಹಾಕಿದ್ದಾರೆ. ಕತ್ನಳ್ಳಿ ಅವರದು ಮಾನವೀಯ ಮನೋಧರ್ಮದ ಅಂತಃಕರಣ ಎಂದು ತಿಳಿಸಿದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರನ್ನು ಸನ್ಮಾನಿಸಲಾಯಿತು.
ನಿವೃತ್ತ ಪ್ರಾಚಾರ್ಯ ಕೆ.ವಿಶ್ವನಾಥ ಅಧ್ಯಕ್ಷತೆ ವಹಿಸಿದ್ದರು. ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ, ಲೇಖಕಿ ನೀಲಮ್ಮ ಕತ್ನಳ್ಳಿ, ನಿವೃತ್ತ ಪ್ರಾಧ್ಯಾಪಕ ವಿ.ಜಿ.ಪೂಜಾರ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಅನಿಲಕುಮಾರ ಮರಗೋಳ, ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಜೇಂದ್ರ ಕೊಂಡಾ, ನಿವೃತ್ತ ಪ್ರಾಚಾರ್ಯ ಎಸ್.ಎಸ್.ಮಾಕಲ್ ಹಾಗೂ ಉದ್ಯಮಿ ಮಲ್ಲಿಕಾರ್ಜುನ ಇಂಗಳೇಶ್ವರ ಹಾಜರಿದ್ದರು.