ನಾ.ಸು. ಹರ್ಡೀಕರ್ ದೇಶಕ್ಕೆ ಅನನ್ಯ ಕೊಡುಗೆ: ಶಶಿಲ್ ಜಿ. ನಮೋಶಿ

ಕಲಬುರಗಿ: ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಭಾರತ ಸೇವಾದಳ ಸಂಸ್ಥಾಪಕರಾದ ಪದ್ಮಭೂಷಣ ಡಾ. ನಾ.ಸು. ಹರ್ಡೀಕರ್ ಅವರ ಸೇವೆ ದೇಶಕ್ಕೆ ಅನನ್ಯವಾದ ಕೊಡುಗೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಭಾರತ ಸೇವಾದಳ ಜಿಲ್ಲಾ ಘಟಕದ ಅಧ್ಯಕ್ಷ ಶಶಿಲ್ ಜಿ. ನಮೋಶಿ ಹೇಳಿದರು.
ನಗರದ ಸೇವಾದಳ ಕಚೇರಿಯಲ್ಲಿ ಗುರುವಾರ ಭಾರತ ಸೇವಾದಳ ಜಿಲ್ಲಾ ಸಮಿತಿ ಹಾಗೂ ತಾಲೂಕು ಸಮಿತಿ ವತಿಯಿಂದ ಆಯೋಜಿಸಿದ್ದ ಡಾ. ನಾರಾಯಣರಾವ ಸುಬ್ಬರಾವ ಹರ್ಡೀಕರ್ ಅವರ 137ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಯುವಕರನ್ನು ಸಂಘಟಿಸಿ ರಾಷ್ಟ್ರಪ್ರೇಮ, ಸೇವಾ ಮನೋಭಾವ ಹಾಗೂ ಹೋರಾಟದ ಚೈತನ್ಯವನ್ನು ಬೆಳೆಸುವಲ್ಲಿ ಡಾ. ಹರ್ಡೀಕರ್ ಮಹತ್ವದ ಪಾತ್ರ ವಹಿಸಿದ್ದರು ಎಂದು ಹೇಳಿದರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಭಾರತ ಸೇವಾದಳ ಜಿಲ್ಲಾ ಕಾರ್ಯದರ್ಶಿ ಸುರೇಶ್ ಬಡಿಗೇರ, ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಯುವಕರನ್ನು ಒಂದೇ ವೇದಿಕೆಗೆ ತಂದು ರಾಷ್ಟ್ರಭಕ್ತಿ ಮತ್ತು ಸಂಘಟಿತ ಹೋರಾಟದ ದಾರಿಯನ್ನು ಡಾ. ಹರ್ಡೀಕರ್ ತೋರಿಸಿಕೊಟ್ಟಿದ್ದರು ಎಂದು ತಿಳಿಸಿದರು.
ಭಾರತ ಸೇವಾದಳ ಜಿಲ್ಲಾ ಸಮಿತಿ ಸದಸ್ಯ ಮಂಜುನಾಥ ನಾಲ್ವಾರಕರ್ ಮಾತನಾಡಿ, ಇಂದಿನ ಯುವಕರಲ್ಲಿ ಶಿಸ್ತು, ಸಂಘಟನೆ ಹಾಗೂ ಸೇವಾ ಮನೋಭಾವ ಬೆಳೆಸುವ ಜೊತೆಗೆ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಂಘಟಕ ಚಂದ್ರಶೇಖರ ಜಮಾದಾರ, ಡಾ. ಹರ್ಡೀಕರ್ ಅವರ ಜೀವನ ಸಾಧನೆ ಹಾಗೂ ಭಾರತ ಸೇವಾದಳದ ಸೇವಾ ಕಾರ್ಯಗಳ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿ ಸದಸ್ಯ ಶಿವಶರಣಪ್ಪ ಜಮಾದಾರ, ತಾಲೂಕು ಸಮಿತಿ ಅಧ್ಯಕ್ಷ ಜಯಪ್ರಕಾಶ ಕಟ್ಟಿಮನಿ, ತಾಲೂಕು ಸಮಿತಿ ಕಾರ್ಯದರ್ಶಿ ಗುರುಲಿಂಗಯ್ಯ ವಿಶ್ವನಾಥಮಠ, ಸದಸ್ಯ ನಾಗರಾಜ ನಂದೂರ, ಸಂಪನ್ಮೂಲ ಶಿಕ್ಷಕ ಲಕ್ಷೀಪುತ್ರ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.






