ಆಳಂದ | ಸರಕಾರಿ ಡಿಗ್ರಿ ಕಾಲೇಜಿನಲ್ಲಿ ಎನ್ನೆಸ್ಸೆಸ್ ಶಿಬಿರ ಉದ್ಘಾಟನೆ

ಆಳಂದ : ವಿದ್ಯಾರ್ಥಿ ಜೀವನದಲ್ಲಿ ಕಲಿಕೆಯ ಆಸಕ್ತಿ ಕುಸಿಯುತ್ತಿರುವುದು ವಿಷಾದನೀಯವಾಗಿದ್ದು, ಇದನ್ನು ತೊಡೆದುಹಾಕಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಕಲಬುರಗಿ ವಿಶ್ವವಿದ್ಯಾಲಯದ ಎನ್ಎಸ್ಎಸ್ ಕೋಶ ಸಂಯೋಜಕ ಪ್ರೊ. ಹೆಚ್.ಎಸ್. ಜಂಗೆ ಹೇಳಿದರು.
ಪಟ್ಟಣದ ಅಫ್ಜಲ್ ಮಶಾಕಬೀ ತಾಹೇರ್ ಅನ್ಸಾರಿ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ಆಯೋಜಿಸಿದ್ದ ಎನ್ಎಸ್ಎಸ್ ಒಂದು ವಾರದ ವಿಶೇಷ ಶಿಬಿರವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ದಿನಗಳಲ್ಲಿ ಶಿಕ್ಷಕರಿಗೆ ಇದ್ದ ಗೌರವ ಇಂದಿಗೆ ಕುಂಠಿತವಾಗುತ್ತಿದೆ. ಆ ಗೌರವವನ್ನು ಪುನಃ ಸ್ಥಾಪಿಸುವುದು ನಮ್ಮೆಲ್ಲರ ಹೊಣೆಗಾರಿಕೆ ಎಂದು ಅವರು ಅಭಿಪ್ರಾಯಪಟ್ಟರು. ವಿದ್ಯುತ್ ಸೌಲಭ್ಯಗಳಿಲ್ಲದ ಕಾಲದಲ್ಲಿ ಕಂದಿಲು-ಚಿಮಣಿ ಬೆಳಕಿನಲ್ಲಿ ಕಷ್ಟಪಟ್ಟು ಓದಿ ಸಾಧನೆ ಮಾಡಿದ ಹಿರಿಯರ ಉದಾಹರಣೆಗಳನ್ನು ಉಲ್ಲೇಖಿಸಿ, ಇಂದಿನ ವಿದ್ಯಾರ್ಥಿಗಳು ಎಲ್ಲ ಸೌಲಭ್ಯಗಳ ನಡುವೆಯೂ ಜ್ಞಾನಾರ್ಜನೆಗೆ ಹೆಚ್ಚಿನ ಆಸಕ್ತಿ ತೋರಬೇಕು ಎಂದು ಸಲಹೆ ನೀಡಿದರು.
ಎನ್ಎಸ್ಎಸ್ ಶಿಬಿರಗಳು ಕೇವಲ ಸಮಾಜ ಸೇವೆಗೆ ಸೀಮಿತವಲ್ಲ. ವ್ಯಕ್ತಿತ್ವ ವಿಕಾಸ, ಶಿಸ್ತು ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವ ವೇದಿಕೆಯಾಗಿದೆ ಎಂದು ತಿಳಿಸಿದರು. ತಾವು ವಿವಿಧ ದೇಶಗಳಿಗೆ ಭೇಟಿ ನೀಡಿದ ಅನುಭವ ಹಂಚಿಕೊಂಡ ಅವರು, ಅಭಿವೃದ್ಧಿ ಹೊಂದಿದ ದೇಶಗಳ ಶಿಕ್ಷಣ ಪದ್ಧತಿ ಹಾಗೂ ಶ್ರಮಪೂರ್ಣ ಜೀವನ ಶೈಲಿಯನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಮಾಜಿಕ ಅರಣ್ಯಾಧಿಕಾರಿ ವೀರೇಂದ್ರ ಸಿ. ವಾಯ ಅವರು ಮಾತನಾಡಿ, ವಿದ್ಯಾರ್ಥಿಗಳು ಎನ್ಎಸ್ಎಸ್ ಮೂಲಕ ಪರಿಸರ ಜಾಗೃತಿ, ಶಿಸ್ತು ಮತ್ತು ಸಮಯಪಾಲನೆ ಬೆಳೆಸಿಕೊಳ್ಳಬೇಕು. ಅರಣ್ಯ ಸಂರಕ್ಷಣೆ ಹಾಗೂ ಪ್ರಕೃತಿಯ ಮೇಲೆ ಜವಾಬ್ದಾರಿ ಹೊಂದಬೇಕು ಎಂದು ತಿಳಿಸಿದರು.
ನಿವೃತ್ತ ಪ್ರಾಧ್ಯಾಪಕ ದೇವಿಚಂದ ರಾಠೋಡ ಅವರು, ಎನ್ಎಸ್ಎಸ್ ಶಿಬಿರಗಳಿಂದ ದೊರೆಯುವ ಅನುಭವ ಹಾಗೂ ನಾಯಕತ್ವ ಗುಣಗಳನ್ನು ಜೀವನದಲ್ಲಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯೆ ಡಾ. ಪ್ರೇಮಿಳಾ ಅಂಬಾರಾಯ ಅವರು, ಕಾಲೇಜಿನಲ್ಲಿ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ, ಕಂಪ್ಯೂಟರ್ ಹಾಗೂ ಎಐ ಆಧಾರಿತ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಹಿರಿಯ ಪತ್ರಕರ್ತ ಮಹಾದೇವ ವಡಗಾಂವ ಅವರು ಮಾತನಾಡಿ, ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಜೀವನದಲ್ಲಿ ಯಶಸ್ಸಿಗೆ ಅತ್ಯಗತ್ಯ ಎಂದು ಒತ್ತಿ ಹೇಳಿದರು.
ವೇದಿಕೆಯಲ್ಲಿ ಮಹಾತ್ಮಾ ಗಾಂಧಿ ಪಿಯು ಕಾಲೇಜಿನ ಪ್ರಾಚಾರ್ಯ ಆಸೀಫ್ ಕೋತ್ವಾಲ್, ಪುರಖಾನ್ ಅನ್ಸಾರಿ, ಶಿಬಿರಾಧಿಕಾರಿ ಡಾ. ಶೋಭಾ ಕಣ್ಣಿ ಮತ್ತು ಮಲ್ಲಿಕಾರ್ಜುನ ಉಪಸ್ಥಿತರಿದ್ದರು.
ಪ್ರಾಧ್ಯಾಪಕ ರವಿಶ್ವಂದ್ರ ಕಂಟೇಕೂರೆ ಅತಿಥಿಗಳನ್ನು ಪರಿಚಯಿಸಿದರು. ಪ್ರಾಧ್ಯಾಪಕ ದಯಾನಂದ ಕಾರ್ಯಕ್ರಮ ನಿರೂಪಿಸಿದರು. ಡಾ. ಸಯಿದಾ ಬಾನು ಸ್ವಾಗತಿಸಿದರು. ಡಾ. ರಾಜಕುಮಾರ ಹಿರೇಮಠ ವಂದಿಸಿದರು.






