ಕಲಬುರಗಿ ಜಿಲ್ಲೆಯಾದ್ಯಂತ 4.43 ಲಕ್ಷ ಸಸಿ ನೆಡುವ ಯೋಜನೆ
ಅಮೃತ್ ಮಿತ್ರ ಅಭಿಯಾನಕ್ಕೆ ಬಿ.ಫೌಝಿಯಾ ತರನ್ನುಮ್ ಚಾಲನೆ

ಕಲಬುರಗಿ: ಬಿಸಿಲು ನಾಡಿನಲ್ಲಿ ಹಸಿರು ಹೊದಿಕೆ ಹೆಚ್ಚಿಸಲು ಅರಣ್ಯ ಇಲಾಖೆ ಮುಂದಾಗಿದ್ದು, ಪ್ರಸಕ್ತ 2025-26ನೇ ಸಾಲಿನಲ್ಲಿ ಸುಮಾರು 1,060.50 ಹೆಕ್ಟೇರ್ ಪ್ರದೇಶದಲ್ಲಿ ಸಸಿ ನೆಡಲು ಗುರಿ ಇಟ್ಟುಕೊಂಡಿದೆ.
ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳು ಶೇ.10ಕ್ಕಿಂತ ಕಡಿಮೆ ಅರಣ್ಯ ಪ್ರದೇಶಗಳನ್ನು ಹೊಂದಿದೆ. ಇನ್ನು ಶೇ.5 ಅರಣ್ಯ ಪ್ರದೇಶ ಹೊಂದಿರುವ ಕಲಬುರಗಿಯಲ್ಲಿ ಹಸರೀಕರಣ ಮಾಡಲು ಅರಣ್ಯ ಇಲಾಖೆ ಪಣ ತೊಟ್ಟಿದೆ.
ಅರಣ್ಯ ಇಲಾಖೆಯಿಂದ ಪ್ರಸಕ್ತ 2025-26ನೇ ಸಾಲಿನಲ್ಲಿ ಪ್ರಾದೇಶಿಕ ಅರಣ್ಯ ಮತ್ತು ಸಾಮಾಜಿಕ ಅರಣ್ಯ ವಿಭಾಗದಿಂದ 567.50 ಹೆಕ್ಟೇರ್ ನಲ್ಲಿ ಬ್ಲಾಕ್ ನೆಡುತೋಪು, 350 ಕಿ.ಮೀ ನಲ್ಲಿ ರಸ್ತೆ ಬದಿ ನೆಡುತೋಪು ಸೇರಿದಂತೆ ಒಟ್ಟಾರೆ 1,060.50 ಹೆಕ್ಟೇರ್ ಪ್ರದೇಶದಲ್ಲಿ 4.43 ಲಕ್ಷ ಸಸಿ ನೆಡೆಯುವ ಯೋಜನೆ ಹಾಕಿಕೊಳ್ಳಲಾಗಿದೆ. ಇನ್ನು ಸಾರ್ವಜನಿಕರು, ರೈತರು, ಸಂಘ-ಸಂಸ್ಥೆಗಳಿಗೆ 1.64 ಲಕ್ಷ ಸಸಿ ವಿತರಿಸಲಾಗುತ್ತಿದೆ.
ಅಮೃತ್ ಮಿತ್ರ ಅಭಿಯಾನಕ್ಕೆ ಡಿಸಿ ಚಾಲನೆ :
ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಅರಣ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಶಹಾಬಜಾರ್ ಪ್ರದೇಶದ ಗೋಕುಲ ನಗರ ಜಿ.ಡಿ.ಎ. ಬಡಾವಣೆಯ ಸಾರ್ವಜನಿಕ ಉದ್ಯಾನವನದಲ್ಲಿ ಸಸಿ ನೆಡೆಯುವ ಮೂಲಕ "ಅಮೃತ್ ಮಿತ್ರ" ಅಭಿಯಾನಕ್ಕೆ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಚಾಲನೆ ನೀಡಿದರು.
ವುಮೆನ್ ಫಾರ್ ಟ್ರೀಸ್ ಘೋಷವಾಕ್ಯದ ಈ ಕಾರ್ಯಕ್ರಮದಲ್ಲಿ ಕಲಬುರಗಿ ಮಹಾನಗರದ ಸಾರ್ವಜನಿಕ ಉದ್ಯಾನವನ, ಮೈದಾನಗಳಲ್ಲಿ ಸುಮಾರು 2,000 ಸಸಿ ನೆಡಲಾಗುತ್ತಿದೆ. ಸಸಿಗಳನ್ನು ನಲ್ಮ್ ಯೋಜನೆಯಡಿ ನೊಂದಾಯಿತ ಮಹಿಳಾ ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ನೀಡಲಾಗುತ್ತಿದ್ದು, ಅವರು ಆ.31ರೊಳಗೆ ಸಸಿ ನೆಟ್ಟು ವರದಿ ನೀಡಲಿದ್ದಾರೆ. ಮುಂದೆ 2 ವರ್ಷದ ವರೆಗೆ ಈ ಸಸಿಗಳ ನಿರ್ವಹಣೆ ಜವಾಬ್ದಾರಿ ಸಹ ಮಹಿಳಾ ಸದಸ್ಯರಿಗೆ ನೀಡಿದ್ದು, ನಿರ್ವಹಣಾ ವೆಚ್ಚ ಕೇಂದ್ರ ಸರ್ಕಾರದಿಂದ ಡಿ.ಬಿ.ಟಿ ಮೂಲಕ ಪಾವತಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ಎಸ್.ಪಿ.ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ, ಪಾಲಿಕೆ ಉಪ ಆಯುಕ್ತ ಆರ್.ಪಿ.ಜಾಧವ್, ಉಪ ಆಯುಕ್ತ (ಆಡಳಿತ) ರಾಜೇಂದ್ರ ಭಾಲ್ಕಿ, ಎ.ಇ.ಇ (ಪರಿಸರ) ಅಭಯಕುಮಾರ, ವಲಯ ಆಯುಕ್ತ ಪ್ರದೀಪ್ ಸೇರಿದಂತೆ ಪಾಲಿಕೆ, ಅರಣ್ಯ ಸಿಬ್ಬಂದಿಗಳು ಇದ್ದರು.







