ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ ರಾಜಕುಮಾರ್ ಮೀನಕೇರಾ ಆಯ್ಕೆ

ಕಲಬುರಗಿ: ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನೂತನ ನಿರ್ದೇಶಕರಾಗಿ ಕಲ್ಯಾಣ ಕರ್ನಾಟಕ ಭಾಗದಿಂದ ನಾಮನಿರ್ದೇಶನಗೊಂಡಿರುವ ರಾಜಕುಮಾರ್ ತರಿ ಮೀನಕೇರಾ ಅವರನ್ನು ಚಿಂಚೋಳಿ ತಾಲೂಕು ವೀರಶೈವ ಲಿಂಗಾಯತ ಮಹಾಸಭೆಯ ಘಟಕವು ಸನ್ಮಾನಿಸಿ ಅಭಿನಂದಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಸರಕಾರಿ ನೌಕರರ ಸಂಘದ ನಿರ್ದೇಶಕ ಮಂಜುನಾಥ ದುಬಲಗುಂಡಿ, ರಾಜಕುಮಾರ್ ತರಿರವರು ಪಂಚಮಸಾಲಿ ಬಣಜಿಗ ಸಮಾಜದ ಮೀಸಲಾತಿ ಹೋರಾಟದಲ್ಲಿ ದಶಕಗಳ ಕಾಲ ಸಕ್ರಿಯವಾಗಿ ತೊಡಗಿಸಿಕೊಂಡು ಅಖಂಡ ಲಿಂಗಾಯತ ಸಮಾಜದ ಸಂಘಟನೆ ಮಾಡುತ್ತಾ ಬಂದಿದ್ದಾರೆ. ಅವರ ಮೂಲಕ ಸಮಾಜದ ಕೆಲಸಗಳು ನಡೆದು, ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಏಳ್ಗೆಗೆ ಅವರು ಶ್ರಮಿಸಲಿ ಎಂದು ಶುಭ ಕೋರಿದರು.
ತಾಲೂಕು ಮಹಾಸಭೆಯ ಅಧ್ಯಕ್ಷರಾದ ಶರಣು ಪಾಟೀಲ್ ಮೋತಕಪಳ್ಳಿ ಮಾತನಾಡಿ, ಚಿಂಚೋಳಿ ತಾಲೂಕಿನ ವೀರಶೈವ ಲಿಂಗಾಯತ ಸಮಾಜದ ಅಭಿವೃದ್ಧಿ ಕಾರ್ಯಗಳು ಮತ್ತು ಅಗತ್ಯ ನೆರವುಗಳನ್ನು ನಿಗಮದ ಮೂಲಕ ಒದಗಿಸುವಂತೆ ನೂತನ ನಿರ್ದೇಶಕರಲ್ಲಿ ಮನವಿ ಮಾಡಿದರು.
ಸನ್ಮಾನ ಸ್ವೀಕರಿಸಿದ ರಾಜಕುಮಾರ್ ತರಿ ಮೀನಕೇರಾ ಅವರು, ಸಮಾಜದ ವಿಶ್ವಾಸಕ್ಕೆ ತಕ್ಕಂತೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಿವರಾಜ ಪಾಟೀಲ, ನಂದಿಕುಮಾರ ಪಾಟೀಲ, ಸುರೇಶ್ ದೇಶಪಾಂಡೆ, ರಾಜಶೇಖರ ಹಿತ್ತಲ್, ಮಲ್ಲಿಕಾರ್ಜುನ ಬುಶೆಟ್ಟಿ, ಶಂಕರ ಶಿವಪುರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.







